ಮೈಸೂರು ದಸರಾ ಆಚರಣೆ ಬಗ್ಗೆ ವಿಶ್ವನಾಥ್ ತೀವ್ರ ಆಕ್ಷೇಪ
ಮೈಸೂರು, ಅಕ್ಟೋಬರ್ 5: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ದಸರಾ ಆಚರಣೆಗೆ ಅವಕಾಶ ಮಾಡಿಕೊಡುವ ಮೂಲಕ ಬಂಬೂ ಸವಾರಿ ಮಾಡಿಸಲು ಹೊರಟ್ಟಿದ್ದೀರಾ ಎಂದು ಎಂಎಲ್ ಸಿ ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ರಾಜ್ಯದಲ್ಲಿ 10 ಸಾವಿರ ಸೋಂಕಿತ ಪ್ರಕರಣಗಳಿದ್ದರೆ, ಮೈಸೂರಿನಲ್ಲಿ ಎರಡು ದಿನದಿಂದ ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಬರುತ್ತಿವೆ. ಈ ನಡುವೆ ದಸರಾ ಮಾಡಲು ಅವಕಾಶ ಮಾಡಿಕೊಡಲಾಗಿದೆ. ನೀವೇನು ಜಂಬೂ ಸವಾರಿ ಮಾಡುತ್ತಿದ್ದೀರೋ? ಇಲ್ಲ ಬಂಬೂ ಸವಾರಿ ಮಾಡಲು ಹೊರಟ್ಟಿದ್ದೀರಾ ಎಂದು ಕಿಡಿಕಾರಿದರು.

"2000 ಮಂದಿ ಸೇರಿಸಿ ದಸರಾ ಸಾಧ್ಯವೇ?"
ಎರಡು ಸಾವಿರ ಮಂದಿಯನ್ನು ಸೇರಿಸಿ ದಸರಾ ಮಾಡುತ್ತೇನೆ ಎಂದರೆ ಅಲ್ಲಿ ಹತ್ತು ಸಾವಿರ ಮಂದಿ ಸೇರುತ್ತಾರೆ. ರಾಜಕಾರಣಿಗಳು, ಅಧಿಕಾರಿಗಳು, ಕುಟುಂಬಸ್ಥರು, ಮಾಧ್ಯಮದವರು ಸೇರಿ ಹತ್ತು ಸಾವಿರ ಮಂದಿ ಆಗುತ್ತಾರೆ. ಈಗಲೇ ಆಸ್ಪತ್ರೆಗಳಲ್ಲಿ ಬೆಡ್ ಗಳು ಸಿಗುತ್ತಿಲ್ಲ. ಆಮೇಲೆ ಹೊಸ ಆಸ್ಪತ್ರೆ ನಿರ್ಮಿಸಬೇಕಾಗುತ್ತದೆ. ಇದು ತುಂಬಾ ಗಂಭೀರವಾದ ವಿಷಯ ಎಂದಿದ್ದಾರೆ ವಿಶ್ವನಾಥ್.

"ಸಾಂಕೇತಿಕವಾಗಿ ದೇವಿಗೆ ಪುಷ್ಪಾರ್ಚನೆ ಸಾಕು"
ದಸರಾ ಆಚರಣೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ಹತ್ತಿರ ಮಾತನಾಡಿದ್ದೇನೆ. ಸರಳ ದಸರಾ ಅಂದರೆ, ಸಾಂಕೇತಿಕವಾಗಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಬೇಕು ಅಷ್ಟೇ. ಉಳಿದ ಯಾವ ಕಾರ್ಯಕ್ರಮಗಳು ಇಂತಹ ಪರಿಸ್ಥಿತಿಯಲ್ಲಿ ಬೇಕಿಲ್ಲ ಎಂದರು.

ಮುನಿರತ್ನ ಪರ ಆಗ್ರಹಿಸಿದ ವಿಶ್ವನಾಥ್
ಇದೇ ಸಂದರ್ಭ ಆರ್ ಆರ್ ನಗರ ಉಪ ಚುನಾವಣೆ ಕುರಿತು ಮಾತನಾಡಿದ ಅವರು, "ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಮುನಿರತ್ನ ಅವರು ಕೂಡ ಕಾರಣ. ಹೀಗಾಗಿ ಅವರಿಗೆ ಆರ್.ಆರ್.ನಗರ ಕ್ಷೇತ್ರದಿಂದ ಟಿಕೆಟ್ ನೀಡಲೇಬೇಕು. ಅವರ ಹೆಸರನ್ನು ಫೈನಲ್ ಮಾಡಬೇಕು" ಎಂದು ಆಗ್ರಹಿಸಿದರು. ಆ ಕ್ಷೇತ್ರದಿಂದ ಸ್ಪರ್ಧಿಸಲು ಇಬ್ಬರ ಹೆಸರನ್ನು ಕಳುಹಿಸುವ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಏನಾದರೂ ಚರ್ಚೆ ಮಾಡಿಕೊಳ್ಳಲಿ. ಯಾರ ಹೆಸರನ್ನಾದರೂ ಕಳುಹಿಸಿಕೊಳ್ಳಲಿ. ಅಲ್ಲದೆ, ಎರಡು ಹೆಸರು ಕಳುಹಿಸಿರುವುದು ತಪ್ಪು. ಸರ್ಕಾರ ಅಧಿಕಾರಕ್ಕೆ ಬರಲು ಸಹಾಯ ಮಾಡಿಲ್ವಾ? ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿಲ್ವಾ? ಮುನಿರತ್ನ ಅವರ ಹೆಸರನ್ನು ಅಂತಿಮ ಮಾಡಬೇಕಿತ್ತು ಎಂದರು.

ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು
ಬಿಜೆಪಿ ನೈತಿಕವಾಗಿ ದಿವಾಳಿತನವಾಗಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದೆಲ್ಲ ಸತ್ಯವಲ್ಲ. ಅವರು ಹೇಳಿದ ತಕ್ಷಣ ಅದು ವೇದವಲ್ಲ. ದೇಶದ ಆರ್ಥಿಕ ಪರಿಸ್ಥಿತಿ, ದೇಶದ ಆರ್ಥಿಕ ಅಪರಾಧಗಳ ಬಗ್ಗೆ ಒಂದು ಇಲಾಖೆ ಇದೆ. ಆ ಇಲಾಖೆ ಕಾಲ ಕಾಲಕ್ಕೆ ತನಿಖೆ ನಡೆಸುತ್ತೆ. ಅದೆಲ್ಲವನ್ನೂ ಮೀರಿ ಬರುವ ಶಕ್ತಿ ಡಿಕೆಶಿಗೆ ಇದೆ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಹೀಗಾಗಿ ಗೊತ್ತು. ಇದರಿಂದ ಅವರು ಗೆದ್ದು ಬರುತ್ತಾರೆ ಎಂದು ಹೇಳಿದರು.












Click it and Unblock the Notifications