ಮೈತ್ರಿ ಸರ್ಕಾರದಲ್ಲಿ ಎಚ್.ವಿಶ್ವನಾಥ್‌ಗೆ ಶಿಕ್ಷಣ ಖಾತೆ?

ಮೈಸೂರು, ಜೂನ್ 5: ಹಿರಿಯ ಅನುಭವಿ ರಾಜಕಾರಣಿ ಎಚ್.ವಿಶ್ವನಾಥ್ ಅವರಿಗೆ ಸದ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಶಿಕ್ಷಣ ಖಾತೆ ದೊರೆಯುವ ಸಂಭವವಿದೆ. ಈ ಹಿಂದೆ ಸಚಿವರಾಗಿದ್ದ ವೇಳೆ ಈ ಖಾತೆಯನ್ನು ಉತ್ತಮವಾಗಿ ನಿರ್ವಹಿಸಿ, ಒಂದಷ್ಟು ಸುಧಾರಣೆಗಳನ್ನು ಮಾಡಿದ ಖ್ಯಾತಿ ಇವರಿಗಿದೆ.

ರಾಜ್ಯ ರಾಜಕಾರಣದಿಂದ ಕೇಂದ್ರದತ್ತ ಮುಖ ಮಾಡಿದ್ದ ಎಚ್.ವಿಶ್ವನಾಥ್ ಅವರನ್ನು ಕೊಡಗು ಮತ್ತು ಮೈಸೂರು ಜನರು ಆಶೀರ್ವಾದ ಮಾಡಿ ಲೋಕಸಭೆಗೆ ಆರಿಸಿ ಕಳುಹಿಸಿದ್ದರು. ಸುಮಾರು ಐದು ವರ್ಷಗಳ ಕಾಲದ ಅವಧಿಯಲ್ಲಿ ಕಾಂಗ್ರೆಸ್‍ನಲ್ಲಿ ಅತಿ ಚಟುವಟಿಕೆಯಲ್ಲಿದ್ದ ಸಂಸದ ಅವರಾಗಿದ್ದರು. ಅವರ ಪ್ರತಿ ಹೇಳಿಕೆಗಳು ರಾಜ್ಯದಲ್ಲಿ ಸುದ್ದಿ ಮಾಡುತ್ತಿದ್ದವು. ಅವರ ಸುದ್ದಿಗೋಷ್ಠಿ ಎಂದರೆ ಮಾಧ್ಯಮದವರು ಕಿಕ್ಕಿರಿದು ಸೇರುತ್ತಿದ್ದರು.

ಇಂತಹ ಪ್ರಭಾವಿ ನಾಯಕ ಅನುಭವಿ ರಾಜಕಾರಣಿ 2014ರ ಲೋಕಸಭಾ ಚುನಾವಣೆಯಲ್ಲಿ ಯುವ ಪತ್ರಕರ್ತ ಬಿಜೆಪಿಯ ಅಭ್ಯರ್ಥಿಯಾಗಿದ್ದ ಪ್ರತಾಪ್ ಸಿಂಹ ಅವರ ಪ್ರತಿಸ್ಪರ್ಧಿಯಾಗಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರಲ್ಲದೆ, ಬಳಿಕ ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗಿದ್ದರು.

H.Vishwanath may get education portfolio

ರಾಜಕೀಯದ ಅನುಭವವೇ ಇಲ್ಲದ ಪತ್ರಕರ್ತನೊಬ್ಬನ ಮುಂದೆ ಸೋತು ಮನೆ ಸೇರಿದ್ದು ನಿಜಕ್ಕೂ ರಾಜಕೀಯದ ಅಚ್ಚರಿಯೇ ಸರಿ. ಆದರೆ ಅದಕ್ಕೆ ಕಾರಣವೂ ಇತ್ತು. ಒಂದು ಮೋದಿ ಅಲೆಯಾದರೆ ಮತ್ತೊಂದು ಸ್ವತಃ ವಿಶ್ವನಾಥ್‍ರವರು ಮಾಡಿಕೊಂಡ ಪ್ರಮಾದ. ಕಾರಣ ಸಿಕ್ಕಸಿಕ್ಕ ಕಡೆ ದೇವೇಗೌಡರ ಕುಟುಂಬವನ್ನು ತೆಗಳಿ ಮುಜುಗರಕ್ಕೀಡು ಮಾಡಿದ್ದರು.

ವಿಶ್ವನಾಥ್ ಅವರ ಆಟಾಟೋಪವನ್ನು ನೋಡಿದ ದೇವೇಗೌಡರು ಚುನಾವಣೆ ವೇಳೆ ತನ್ನ ತಂತ್ರವನ್ನು ಬಳಸಿದ್ದರು. ಪ್ರಭಾವಿ ನಾಯಕನೇ ಅಲ್ಲದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಮತವನ್ನು ಬಿಜೆಪಿ ಕಡೆಗೆ ಹೋಗುವಂತೆ ಮಾಡಿದ್ದರು.

ವಿಶ್ವನಾಥ್ ಸೋಲುತ್ತಿದ್ದಂತೆಯೇ ಅವರನ್ನು ಕಾಂಗ್ರೆಸ್‌ನಲ್ಲಿ ಕೇಳುವವರೇ ಇಲ್ಲವಾದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹತ್ತಿರಕ್ಕೂ ಸೇರಿಸಿಕೊಳ್ಳಲಿಲ್ಲ. ಏಕಾಂಗಿಯಾದ ವಿಶ್ವನಾಥ್ ಇನ್ನು ಕಾಂಗ್ರೆಸ್‍ನಲ್ಲಿದ್ದರೆ ತನ್ನ ರಾಜಕೀಯ ಬದುಕಿಗೆ ಉಳಿಗಾಲವಿಲ್ಲ ಎಂಬುದನ್ನು ಅರಿತುಕೊಂಡರು. ಮತ್ತೆ ರಾಜಕೀಯವಾಗಿ ಬದುಕನ್ನು ಸೃಷ್ಠಿಸಿಕೊಳ್ಳಬೇಕಾದರೆ ಅದು ಜೆಡಿಎಸ್‍ಗೆ ಹೋದರೆ ಮಾತ್ರ ಸಾಧ್ಯ ಎಂಬುದನ್ನು ಮನಗಂಡ ಅವರು ದೇವೇಗೌಡರ ಸಖ್ಯ ಬೆಳೆಸಿದರು.

ಆ ವೇಳೆಗೆ ಜೆಡಿಎಸ್‍ನಲ್ಲಿ ಒಂದಷ್ಟು ನಾಯಕರು ಗುಳೆ ಹೋಗಿದ್ದರು. ಹೀಗಾಗಿ ನಾಯಕರ ಅನಿವಾರ್ಯತೆ ಇದ್ದುದರಿಂದ ವಿಶ್ವನಾಥ್ ಅವರು ಅಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಅವರಿಗೆ ಹುಣಸೂರಿನಲ್ಲಿ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಯಿತು. ಅದಾಗಲೇ ಜಿ.ಟಿ.ದೇವೇಗೌಡರ ಪುತ್ರ ಹರೀಶ್‍ಗೌಡ ಅವರು ಹುಣಸೂರು ತಾಲೂಕಿನಲ್ಲಿ ಜೆಡಿಎಸ್‌ನ್ನು ಸಂಘಟಿಸಿದ್ದರು. ಅವರಿಗೆ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆಯೂ ಇತ್ತು. ಆದರೆ ಅವರಿಗೆ ಅವಕಾಶ ನೀಡದೆ ವಿಶ್ವನಾಥ್ ಅವರಿಗೆ ಟಿಕೆಟ್ ನೀಡಲಾಯಿತು.

ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದ ವಿಶ್ವನಾಥ್ ಅವರು ಚುನಾವಣಾ ಪ್ರಚಾರ ಸಂದರ್ಭ ಕಾಂಗ್ರೆಸ್‍ನ ಹಿರಿಯ ನಾಯಕರಿಂದ ಆರಂಭಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನಕ ಎರ್ರಾಬಿರ್ರಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‍ನಲ್ಲಾದ ಅನ್ಯಾಯವನ್ನು ತೆರೆದಿಟ್ಟರು. ಜನ ಕೊನೆಗೂ ಅವರನ್ನು ಗೆಲ್ಲುವಂತೆ ಮಾಡಿದರು.

ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸುವ ಅವಕಾಶ ಅವರನ್ನು ಹುಡುಕಿಕೊಂಡು ಬಂದಿದೆ. ಅವತ್ತು ದೇವೇಗೌಡರನ್ನು ಜಾಡಿಸಿ ಬಳಿಕ ಅವರಿಂದಲೇ ರಾಜಕೀಯ ಬದುಕು ಸೃಷ್ಠಿಸಿಕೊಂಡ ವಿಶ್ವನಾಥ್ ಕಾಂಗ್ರೆಸ್ಸಿಗರನ್ನು ಅದರಲ್ಲೂ ಸಿದ್ದರಾಮಯ್ಯ ಅವರನ್ನು ತೊರೆದು ಇದೀಗ ಅವರೊಂದಿಗೆ ಕೈಜೋಡಿಸುವಂತಾಗಿದೆ.

ಅದಕ್ಕೆ ಹೇಳುವುದು ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹದು. ಅಷ್ಟೇ ಅಲ್ಲ ಅಲ್ಲಿ ಯಾರು ಶತ್ರುವೂ ಅಲ್ಲ. ಮಿತ್ರರೂ ಅಲ್ಲ. ಅಧಿಕಾರವಷ್ಟೆ ಮುಖ್ಯ. ಅದೇನೇ ಇರಲಿ ಸದ್ಯದ ಮಾಹಿತಿ ಪ್ರಕಾರ ಪ್ರಮಾಣ ವಚನ ಸಮಾರಂಭಕ್ಕೆ ವಿಶ್ವನಾಥ್ ಅವರು ಸಿದ್ಧರಾಗಿದ್ದು, ಜೂನ್ 6ರಂದು ಬುಧವಾರ ಮಧ್ಯಾಹ್ನ ನೂತನ ಸಮಿಶ್ರ ಸರ್ಕಾರದ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳುವ ಮುನ್ನ ಹುಣಸೂರು ಕ್ಷೇತ್ರದ ದಿವಂಗತ ದೇವರಾಜ ಅರಸರ ಕರ್ಮಭೂಮಿ ಕಲ್ಲಹಳ್ಳಿ ಗ್ರಾಮಕ್ಕೆ ಬೆಳಿಗ್ಗೆ 7 ಗಂಟೆಗೆ ತೆರಳಿ ಅರಸರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಬೆಳಿಗ್ಗೆ 9 ಗಂಟೆಗೆ ಹುಣಸೂರು ನಗರದ ಎಪಿಎಂಸಿ ಬಳಿಯಿರುವ ಅರಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಬೆಂಗಳೂರಿಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+