ಮೈಸೂರು: ಮಾವುತರು ಮತ್ತು ಕಾವಾಡಿಗರ ಕುಟುಂಬದವರ ಜೊತೆ ಕುಳಿತು ಊಟ ಸವಿದ ಸಚಿವ ಹೆಚ್.ಸಿ.ಮಹದೇವಪ್ಪ
ಮೈಸೂರು, ಸೆಪ್ಟೆಂಬರ್, 29: ಮೈಸೂರು ದಸರಾ ಅಂಗವಾಗಿ ಮಾವುತರು, ಕಾವಾಡಿಗಳಿಗೆ ಜಿಲ್ಲಾಡಳಿತದ ವತಿಯಿಂದ ಅರಮನೆ ಆವರಣದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್.ಸಿ.ಮಹದೇವಪ್ಪ ಅವರು ಮಾವುತರಿಗೆ ಉಪಹಾರ ಬಡಿಸಿದರು.
ಬಳಿಕ ಆನೆಗಳ ಪಾಲನೆ, ಪೋಷಣೆ ಮಾಡುತ್ತಿರುವ ಕಾವಾಡಿಗರು ಹಾಗೂ ಮಾವುತರ ಕಾರ್ಯವನ್ನು ಪ್ರಶಂಸಿಸಿ ಯೋಗಕ್ಷೇಮ ವಿಚಾರಿಸಿದರು. ಮಾವುತರು ಹಾಗೂ ಕವಾಡಿಗರ ಮಕ್ಕಳಿಗೆ ತಾತ್ಕಾಲಿಕವಾಗಿ ತೆರೆದಿರುವ ಶಾಲೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾವುತ ಮತ್ತು ಕಾವಾಡಿಗರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು. ಇದೇ ವೇಳೆ ಅರಮನೆ ಆವರಣದಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಆರೋಗ್ಯ ತಪಾಸಣೆ ಕೇಂದ್ರವನ್ನು ಸಚಿವರು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಪ್ರತಾಪ್ ಸಿಂಹ, ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಗೌಡ, ನರಸಿಂಹ ರಾಜ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಬಿ.ರಮೇಶ್, ಅರಣ್ಯಾಧಿಕಾರಿ ಸೌರಭ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ದಸರಾ ಆನೆಗಳಿಗೆ ತೂಕ ಪರೀಕ್ಷೆ: ನಂಬರ್ 1 ಸ್ಥಾನದಲ್ಲಿ ಅರ್ಜುನ
ಮೈಸೂರು, ಸೆಪ್ಟೆಂಬರ್, 29: ಮೈಸೂರು ದಸರಾ 2023 ಜಂಬೂ ಸವಾರಿಯ ಆನೆಗಳ ತೂಕ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಮಾಜಿ ಕ್ಯಾಪ್ಟನ್ ಅರ್ಜುನ ಆನೆ ತೂಕದಲ್ಲಿ ನಂಬರ್ ಒನ್ ಸ್ಥಾನ ಕಾಯ್ದುಕೊಂಡಿದ್ದು, 5600 ಕೆ.ಜಿ. ಇದ್ದಾನೆ ಎಂದು ತಿಳಿದುಬಂದಿದೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ನಲ್ಲಿ 14 ದಸರಾ ಆನೆಗಳಿಗೆ ತೂಕ ಪರೀಕ್ಷೆ ನಡೆಯಿತು. 5,300 ಕೆ.ಜಿ ತೂಕ ಇದ್ದ ಅಭಿಮನ್ಯು ಮೊದಲ ಹಂತದ ಆನೆಗಳ ತಂಡದಲ್ಲಿ ಹೆಚ್ಚು ತೂಕವಂತನಾಗಿದ್ದ. ಆದರೆ, ಎರಡನೇ ಹಂತದಲ್ಲಿ ಎಲ್ಲಾ ದಸರಾ ಆನೆಗಳ ತೂಕ ಹಾಕುವ ಪ್ರಕ್ರಿಯೆಯಲ್ಲಿ ಅರ್ಜುನ (5,600 ಕೆ.ಜಿ) ಮೊದಲ ಸ್ಥಾನ ಪಡೆದಿದ್ದಾನೆ.
"ನಿಯಮಾನುಸಾರ ಜಂಬೂ ಸವಾರಿ ಯಶಸ್ವಿಗೊಳಿಸುವ ಆನೆಗಳಿಗೆ ವಿಶೇಷ ಪೋಷಣೆ, ಆರೈಕೆ ಹಾಗೂ ಆಹಾರ ನೀಡಿದ್ದರಿಂದ ಮೊದಲ ತಂಡದ ಆನೆಗಳ ತೂಕ ಹೆಚ್ಚಾಗಿದೆ. ಭೀಮ 315 ಕೆ.ಜಿ ಹೆಚ್ಚಿಸಿಕೊಂಡಿದ್ದಾನೆ. ಎರಡನೇ ತಂಡದ ಆನೆಗಳಿಗೆ ಅರಮನೆ ಆವರಣದಲ್ಲಿಯೇ ತಾಲೀಮು ನಡೆಸಲಾಗುತ್ತಿದೆ" ಎಂದು ಡಿಸಿಎಫ್ ಸೌರಭ್ ಕುಮಾರ್ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಆಗಮಿಸಿದ ಆನೆಗಳಿಗೆ 20 ದಿನದ ಹಿ೦ದೆ ತೂಕ ಪರೀಕ್ಷೆನಡೆಯಿತು. ಆಗ 5,160 ಕೆ.ಜಿ. ಭಾರವಿದ್ದ ಅಭಿಮನ್ಯು ಇದೀಗ 140 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದಾನೆ. ಹೀಗೆ ಅರಣ್ಯ ಇಲಾಖೆ ನೀಡುತ್ತಿರುವ ವಿಶೇಷ ಪೋಷಣೆಯಿಂದಾಗಿ ಮೊದಲ ತಂಡದ ಆನೆಗಳು ಸರಾಸರಿ 55ರಿಂದ 315 ಕೆ.ಜಿ ವರೆಗೂ ತೂಕ ಹೆಚ್ಚಿಸಿಕೊಂಡಿವೆ.
ತೂಕ ಹೆಚ್ಚಿಸಿಕೊಂಡವರಲ್ಲಿ ಭೀಮನೇ (315 ಕೆ.ಜಿ ತೂಕ) ಮೊದಲ ಸ್ಥಾನದಲ್ಲಿದ್ದಾನೆ. ಕಳೆದ ಬಾರಿ 395 ಕೆ.ಜಿ ಹೆಚ್ಚಿಸಿಕೊಂಡಿದ್ದನು. ಗೋಪಿ 5,145 ಕೆ.ಜಿ, ಧನಂಜಯ 4,990 ಕೆ.ಜಿ, ಮಹೇಂದ್ರ 4,665, ಕೆ.ಜಿ ತೂಕ ಹೊಂದಿವೆ. 2ನೇ ತಂಡದಲ್ಲಿ ಆಗಮಿಸಿದ 5 ಆನೆಗಳಲ್ಲಿ ಸುಗ್ರೀವ ಹೆಚ್ಚು ತೂಕ ಹೊಂದಿದ್ದಾನೆ. ತೂಕ ಪರೀಕ್ಷೆಯಲ್ಲಿ 5,035 ಕೆ.ಜಿ. (ಕಳೆದ ವರ್ಷ 4,785 ಕೆಜಿ) ತೂಗಿದ್ದಾನೆ. ಪ್ರಶಾಂತ 4,970 ಕೆ.ಜಿ, ಲಕ್ಷ್ಮಿ 3,295 ಕೆ.ಜಿ, ರೋಹಿತ್ 3,350 ಹಾಗೂ ಹಿರಣ್ಯ 2,915 ಕೆ.ಜಿ ತೂಕ ಹೊಂದಿವೆ.












Click it and Unblock the Notifications