ಅಕ್ಟೋಬರ್ ನಲ್ಲಿ ಮೈಸೂರಿನಿಂದ ಹಾರಲಿವೆ ಮತ್ತೆರಡು ವಿಮಾನ
ಮೈಸೂರು, ಜುಲೈ 20 : ಮುಂದಿನ ಐದು ವರ್ಷಗಳಲ್ಲಿ ಮೈಸೂರು ವಿಮಾನ ನಿಲ್ದಾಣವನ್ನು ಬ್ರಾಂಡ್ ನ್ಯೂ ವಿಮಾನ ನಿಲ್ದಾಣವನ್ನಾಗಿ ಮಾಡುವ ಉದ್ದೇಶದಿಂದ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಾಂಸ್ಕೃತಿಕ ನಗರಿ ಮೈಸೂರಿನ ಸುತ್ತಮುತ್ತ ಹಲವು ಪ್ರೇಕ್ಷಣೀಯ ಸ್ಥಳಗಳಾದ ಜಿಲ್ಲೆಯ ಉದ್ಯಾನವನ, ಚಾಮುಂಡಿ ಬೆಟ್ಟ, ಊಟಿ, ಕೊಡಗಿಗೆ ಸಂಪರ್ಕಿಸುವ ಸಲುವಾಗಿ ವಿಮಾನ ಹಾರಾಟವನ್ನು ಹೆಚ್ಚಿಸಲು ಚಿಂತಿಸಲಾಗಿದೆ. ಈಗಾಗಲೇ ಒಂದು ವರ್ಷದೊಳಗೆ ಐದು ವಿಮಾನ ಹಾರಾಟಕ್ಕೆ ಚಾಲನೆ ನೀಡಲಾಗಿದೆ. ಅಕ್ಟೋಬರ್ 27ಕ್ಕೆ ಮೈಸೂರಿನಿಂದ ಬೆಳಗಾವಿ ಹಾಗೂ ಚೆನ್ನೈಗೆ ಸಂಚರಿಸುವ ಎರಡು ಹೊಸ ವಿಮಾನಕ್ಕೆ ಚಾಲನೆ ನೀಡಲಾಗುವುದು" ಎಂದು ತಿಳಿಸಿದರು.
"ಮುಂದಿನ ಐದು ವರ್ಷಗಳಲ್ಲಿ 25 ವಿಮಾನಗಳ ಹಾರಾಟ ಆರಂಭಿಸಲಾಗುವುದು. ಪ್ರಸ್ತುತ ಐದು ವಿಮಾನಗಳು ಶೇಕಡ 80 ರಷ್ಟು ಭರ್ತಿಯಾಗಿ ಸಂಚರಿಸುತ್ತಿವೆ. ಮೈಸೂರಿನಿಂದ ಮಂಗಳೂರು, ತಿರುವನಂತಪುರ ಮುಂತಾದ ಕಡೆ ವಿಮಾನಯಾನ ಪ್ರಾರಂಭಿಸುವಂತೆ ಒತ್ತಡಗಳು ಬರುತ್ತಿವೆ. ವಿಮಾನ ನಿಲ್ದಾಣದಲ್ಲಿ 2.8 ಕಿ.ಮೀ ಉದ್ದದ ರನ್ ವೇ ಕೂಡ ನಿರ್ಮಿಸಿ ಕನಿಷ್ಠ 25 ವಿಮಾನಗಳು ಮೈಸೂರಿನಿಂದ ದೇಶದ ವಿವಿಧ ಪ್ರಮುಖ ನಗರಗಳಿಗೆ ಸಂಚರಿಸುವ ವ್ಯವಸ್ಥೆಯನ್ನು ಕಲ್ಪಿಸುವ ಗುರಿ ಹೊಂದಿದೆ" ಎಂದು ತಿಳಿಸಿದರು.

ಮೈಸೂರಿನಿಂದ ವಿವಿಧೆಡೆಗೆ ವಿಮಾನ ಹಾರಾಟ ಆರಂಭಿಸುವಂತೆ ಬೇಡಿಕೆ ಹೆಚ್ಚುತ್ತಿದೆ. ಉಡಾನ್ ಯೋಜನೆಯಡಿ ಈಗಾಗಲೇ ಐದು ವಿಮಾನಗಳು ಕಾರ್ಯಾಚರಿಸುತ್ತಿವೆ. ಮಂಡಕಳ್ಳಿ ವಿಮಾನ ನಿಲ್ದಾಣದ ವಿಸ್ತರಣೆ, ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಹಕಾರ ನೀಡುತ್ತಿದ್ದಾರೆ.












Click it and Unblock the Notifications