ಅಚ್ಚಳಿಯದೆ ಉಳಿದ ಅಂಬಾರಿ ಹೊತ್ತ ಆನೆಗಳ ನೆನಪು!

ಮೈಸೂರು ದಸರಾ ಎಂದರೆ ಅಲ್ಲಿ ಆನೆಗಳದ್ದೇ ದರ್ಬಾರ್. ಆನೆಗಳಿಲ್ಲದ ಜಂಬೂಸವಾರಿಯನ್ನು ಯಾರೂ ಊಹಿಸಲಾರದು. ಅದರಲ್ಲೂ ಒಂಬತ್ತು ದಿನಗಳ ಕಾಲ ದಸರಾ ಸಡಗರದಲ್ಲಿ ತೇಲಾಡಿದವರು ವಿಜಯದಶಮಿಯಂದು ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಸಿಕೊಂಡು ದಸರಾವನ್ನು ಬೀಳ್ಕೊಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.

ಮೈಸೂರು ದಸರಾ ಇತಿಹಾಸದಲ್ಲಿ ಹಲವು ಆನೆಗಳು ಅಂಬಾರಿಯನ್ನು ಹೊತ್ತು ಸಾಗಿವೆ. ಅವುಗಳ ಪೈಕಿ ಕೆಲವು ಆನೆಗಳ ಬಗ್ಗೆ ಮಾತ್ರ ದಾಖಲೆಗಳು ಸಿಗುತ್ತವೆ. ಉಳಿದಂತೆ ಅದೆಷ್ಟೋ ಆನೆಗಳ ಬಗ್ಗೆ ಮಾಹಿತಿಯೇ ಇಲ್ಲವಾಗಿದೆ. ಆದರೆ ಅಂತಹ ಆನೆಗಳನ್ನು ನೆನಪು ಮಾಡುತ್ತಾ ಈಗ ಅಂಬಾರಿ ಹೊರುತ್ತಿರುವ ಆನೆಯ ಬಗ್ಗೆ ಹೆಮ್ಮೆ ಪಡುವುದು ನಮ್ಮ ಕರ್ತವ್ಯವಾಗಿದೆ.

ಆದರೆ ಇದೆಲ್ಲದರ ನಡುವೆ ಈ ಹಿಂದೆ ಮೈಸೂರು ದಸರಾದ ಜಂಬೂಸವಾರಿಯಲ್ಲಿ ಭಾಗವಹಿಸಿ ಚಿನ್ನದ ಅಂಬಾರಿಯನ್ನು ಹೊತ್ತು ಎಲ್ಲರ ಗಮನ ಸೆಳೆದ ಎರಡು ಆನೆಗಳ ಸಮಾಧಿ ಇಂದಿಗೂ ಹೆಚ್‍. ಡಿ. ಕೋಟೆಯ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೆ ಬರುವ ಬಳ್ಳೆ ಆನೆ ಶಿಬಿರದಲ್ಲಿರುವುದು ವಿಶೇಷವಾಗಿದೆ.

ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯಲ್ಲಿ ಮಹಾರಾಜರನ್ನು ಹೊತ್ತು ಬಹಳಷ್ಟು ಆನೆಗಳು ಸಾಗಿವೆ. ಆದರೆ ಇತಿಹಾಸದಲ್ಲಿ ದೊರೆತ ಮಾಹಿತಿಗಳನ್ನು ಆದರಿಸಿ ಹೇಳುವುದಾದರೆ ಪಿರಿಯಾಪಟ್ಟಣದ ಬಳಿ ಸೆರೆ ಸಿಕ್ಕ ಕಾಡಾನೆ ಜಯಮಾರ್ತಾಂಡ ಮೊದಲಿಗೆ ಅಂಬಾರಿ ಹೊತ್ತ ಆನೆ ಎಂದು ಹೇಳಲಾಗುತ್ತಿದ್ದು, ಆತನ ನೆನಪಿಗಾಗಿ ಮೈಸೂರು ಅರಮನೆಯ ಪೂರ್ವ ದ್ವಾರಕ್ಕೆ ಜಯಮಾರ್ತಾಂಡ ಎಂದು ಹೆಸರಿಸಲಾಗಿದೆ.

ಅಂಬಾರಿ ಹೊತ್ತ ಗಜಪಡೆಗಳು

ಅಂಬಾರಿ ಹೊತ್ತ ಗಜಪಡೆಗಳು

ಮೈಸೂರು ದಸರಾ ಆರಂಭ 1610ರಲ್ಲಿ ಆಗಿದ್ದು, ಆಚರಣೆ ವರ್ಷದಿಂದ ವರ್ಷಕ್ಕೆ ಬಹುರೂಪ ಪಡೆದು ಸಾಗಿ ಬಂದಿದೆ ಎನ್ನುವುದು ಇತಿಹಾಸ. ರಾಜರ ಕಾಲದಲ್ಲಿ ನಡೆದ ಜಂಬೂಸವಾರಿಯಲ್ಲಿ ಪಾಲ್ಗೊಂಡ ಆನೆಗಳ ಬಗ್ಗೆ ಮಾಹಿತಿ ಇಲ್ಲವಾದರೂ 1902ರ ನಂತರದ ಆನೆಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಆ ನಂತರ ವಿಜಯಬಹದ್ದೂರ್, ನಂಜುಂಡ, ರಾಮಪ್ರಸಾದ್, ಮೋತಿಲಾಲ್, ಸುಂದರ್ ರಾಜ್, ಐರಾವತ, ಗಜೇಂದ್ರ, ಬಿಳಿಗಿರಿ, ರಾಜೇಂದ್ರ, ದ್ರೋಣ, ಬಲರಾಮ, ಅರ್ಜುನ ಸದ್ಯ ಅಭಿಮನ್ಯು ಅಂಬಾರಿ ಹೊರುತ್ತಿದ್ದಾನೆ.

ಈ ಅಂಬಾರಿ ಆನೆಗಳು ಕೇವಲ ಅಂಬಾರಿ ಮಾತ್ರ ಹೊತ್ತಿದ್ದಲ್ಲ. ಹಲವು ರೀತಿ ಕಾರ್ಯಾಚರಣೆ, ಸಿನಿಮಾಗಳಲ್ಲಿಯೂ ಭಾಗವಹಿಸಿವೆ. ಐರಾವತ ಆನೆಯ ಮಾವುತನಾಗಿದ್ದ ಮೈಸೂರು ಸಾಬು ಎಂಬ ಏಳು ವರ್ಷದ ಬಾಲಕನ ಇಟ್ಟುಕೊಂಡು 1935ರಲ್ಲಿ ಹಾಲಿವುಡ್ ಚಿತ್ರ 'ದಿ ಎಲಿಫೆಂಟ್‌ ಬಾಯ್‌' ಸಿನಿಮಾವನ್ನು ತೆಗೆಯಲಾಗಿತ್ತು. ಈ ಸಿನಿಮಾ ಜಗತ್ತಿನಾದ್ಯಂತ ಪ್ರದರ್ಶನಗೊಂಡಿತ್ತು.

ರಾಜರ ಹೊತ್ತ ಕೊನೆಯ ಆನೆ

ರಾಜರ ಹೊತ್ತ ಕೊನೆಯ ಆನೆ

ರಾಜರ ಕಾಲದಲ್ಲಿ ಆನೆ ಮೇಲಿನ ಅಂಬಾರಿಯಲ್ಲಿ ರಾಜರು ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ರಾಜರನ್ನು ಹೊತ್ತ ಕೊನೆಯ ಅಂಬಾರಿ ಆನೆ ಬಿಳಿಗಿರಿಯಾಗಿದೆ. ಸ್ವಾತಂತ್ರ್ಯ ಬಳಿಕ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸುವುದು ಜಾರಿಗೆ ಬಂದಿತು. ಹೀಗಾಗಿ ಜಯಚಾಮರಾಜೇಂದ್ರ ಒಡೆಯರ್ ಅಂಬಾರಿ ಮೆರವಣಿಗೆಯಲ್ಲಿ ಸಾಗಿದ ಕೊನೆಯ ರಾಜರಾದರೆ, ಬಿಳಿಗಿರಿ ಕೊನೆಯ ಆನೆಯಾಗಿದೆ. 1975ರಲ್ಲಿ ಈ ಆನೆ ಮೃತಪಟ್ಟಿತು.

'ಗಂಧದಗುಡಿ' ಸಿನಿಮಾ ನೋಡಿದವರಿಗೆ ಡಾ.ರಾಜ್ ಕುಮಾರ್ ಅವರನ್ನು ಹೊತ್ತು ಸಾಗುವ ಆನೆ ನೆನಪಾಗಬಹುದು ಆ ಆನೆಯೇ ರಾಜೇಂದ್ರ. ಇದು ಕೂಡ ಅಂಬಾರಿ ಹೊತ್ತು ಸಾಗುವಲ್ಲಿ ನಿಸ್ಸೀಮನಾಗಿತ್ತು. ಇನ್ನು ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ದಿ ಸೋರ್ಡ್ ಆಫ್ ಟಿಪ್ಪುಸುಲ್ತಾನ್‌'ನ ಟಿಪ್ಪು ಪಾತ್ರಧಾರಿಯನ್ನು ಹೊತ್ತೊಯ್ದ ದ್ರೋಣ ಕೂಡ ಅಂಬಾರಿ ಹೊತ್ತ ಆನೆಯೇ. ಇದು ದೈತ್ಯ ಆನೆಯಾಗಿತ್ತು ಸುಮಾರು 18 ವರ್ಷ ಅಂಬಾರಿ ಹೊತ್ತಿರುವುದು ಇದರ ವಿಶೇಷವಾಗಿದೆ. ಆದರೆ ಇದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪುವಂತಾಯಿತು.

ಹಿರಿತೆರೆ ಕಿರುತೆರೆಯಲ್ಲಿ ಕಾಣಿಸಿದ ಆನೆಗಳು

ಹಿರಿತೆರೆ ಕಿರುತೆರೆಯಲ್ಲಿ ಕಾಣಿಸಿದ ಆನೆಗಳು

ಹಿರಿತೆರೆ ಮತ್ತು ಕಿರುತೆರೆಯಲ್ಲಿ ಕಾಣಿಸಿಕೊಂಡ ರಾಜೇಂದ್ರ ಮತ್ತು ದ್ರೋಣ ಈ ಎರಡು ಆನೆಗಳು ಹೆಚ್. ಡಿ. ಕೋಟೆಯ ಬಳ್ಳೆ ಆನೆಶಿಬಿರದಲ್ಲಿದ್ದವು. ಈ ಆನೆಗಳೆರು ಇತರೆ ಆನೆಗಳಿಗಿಂತ ಸಾಧು ಮತ್ತು ದೈತ್ಯ ಬಲ ಹೊಂದಿದ್ದವು. ಮೈಸೂರು ದಸರಾ ಸಂದರ್ಭದ ವೇಳೆ ತಮ್ಮದೇ ಆದ ಗತ್ತು ಗೈರತ್ತು, ಗಾಂಭೀರ್ಯದ ನಡಿಗೆಯಿಂದ ಎಲ್ಲರ ಗಮನಸೆಳೆಯುತ್ತಿದ್ದವು. ದ್ರೋಣ ಜಂಬೂಸವಾರಿಯಲ್ಲಿ 18 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದರೆ, ರಾಜೇಂದ್ರ ಮೂರು ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದನು. ವಯಸ್ಸಾಗಿದ್ದ ರಾಜೇಂದ್ರನಿಗೆ ಹೆಚ್ಚು ಬಾರಿ ಅಂಬಾರಿ ಹೊರುವ ಅವಕಾಶ ದೊರೆತಿಲ್ಲವಾದರೂ ಜಂಬೂಸವಾರಿಯಲ್ಲಿ ಇತರೆ ಆನೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಿದ್ದನು. ವಯೋಸಹಜ ಕಾಯಿಲೆಯಿಂದ ಮೃತಪಟ್ಟನು.

ಮೆಚ್ಚಿನ ಆನೆಗಳಿಗೆ ಸಮಾಧಿ ನಿರ್ಮಾಣ

ಮೆಚ್ಚಿನ ಆನೆಗಳಿಗೆ ಸಮಾಧಿ ನಿರ್ಮಾಣ

ದ್ರೋಣನ ಸಾವು ಮಾತ್ರ ದುರಂತ ಸಾವಾಗಿತ್ತು. ದೃಢಕಾಯನಾಗಿದ್ದ ದ್ರೋಣ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದನು. ಬಳ್ಳೆ ಆನೆಶಿಬಿರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಇವರಿಬ್ಬರ ನೆನಪಿಗಾಗಿ ಸುಮಾರು ಹದಿನೆಂಟು ವರ್ಷಗಳ ಹಿಂದೆ ಅಂದಿನ ಅರಣ್ಯಾಧಿಕಾರಿಗಳು ಸಮಾಧಿ ನಿರ್ಮಿಸಿ ಅವರಿಬ್ಬರ ನೆನಪುಗಳನ್ನು ಶಾಶ್ವತವಾಗಿಸುವಲ್ಲಿ ಯಶಸ್ವಿಯಾದರು. ಈ ಸಮಾಧಿಗಳನ್ನು ಇಂದಿಗೂ ಇಲ್ಲಿನ ಮಾವುತ ಕಾವಾಡಿಗಳು ಜತನದಿಂದ ಕಾಪಾಡಿಕೊಂಡು ಬಂದಿದ್ದು, ಅರಣ್ಯದಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಾಸ್ತಮ್ಮ ಪೂಜಾ ಮಹೋತ್ಸವದ ಸಂದರ್ಭ ದ್ರೋಣ ಮತ್ತು ರಾಜೇಂದ್ರರ ಸಮಾಧಿಗೂ ಪೂಜಾ ಕಾರ್ಯ ನಡೆಯುತ್ತದೆ. ಸಮಾಧಿಯತ್ತ ಹೋದಾಗ ಜನ ಅದಕ್ಕೊಂದು ನಮನ ಸಲ್ಲಿಸಿ ಬರುತ್ತಾರೆ. ಅಷ್ಟೇ ಅಲ್ಲದೆ, ಶಿಬಿರದಲ್ಲಿರುವ ಆನೆಗಳಿಂದ ಮಾವುತರು ಆಗಾಗ್ಗೆ ಸಲಾಮ್ ಹೊಡೆಸುತ್ತಾರೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಪ್ರತಿವರ್ಷವೂ ಅಂಬಾರಿ ಹೊತ್ತು ಮೈಸೂರು ದಸರಾವನ್ನು ಯಶಸ್ವಿಗೊಳಿಸಿ ಬಳಿಕ ತಮ್ಮ ಶಿಬಿರಗಳಲ್ಲಿ ದಿನಕಳೆಯುವ ಗಜಪಡೆಗಳು ಮೈಸೂರು ದಸರಾದ ಅವಿಭಾಜ್ಯ ಅಂಗಗಳಾಗಿವೆ. ಹೀಗಾಗಿ ಅವುಗಳಿಗೊಂದು ಸಲಾಮ್ ಸಲ್ಲಲೇ ಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+