"ಹಳೇ ಮೈಸೂರು ಭಾಗದ ದಲಿತ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಿ''
ಮೈಸೂರು, ನವೆಂಬರ್ 26: ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ನಂಜನಗೂಡು ಶಾಸಕ ಹರ್ಷವರ್ಧನ್, ಹಳೇ ಮೈಸೂರು ಭಾಗದ ದಲಿತ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಿ, ಇಲ್ಲವಾದರೆ ಶ್ರೀನಿವಾಸ್ ಪ್ರಸಾದ್ ಅವರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಕೊಡಿ ಎಂದು ಕೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಬಿಜೆಪಿ ಶಾಸಕ ಹರ್ಷವರ್ಧನ್, ""ಹಳೇ ಮೈಸೂರಿನಲ್ಲಿ ದಲಿತ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಅನ್ನೋದು ನನ್ನ ಮನವಿ. ಅದು ನನಗಾದರೂ ಸರಿ ಬೇರೆ ಯಾರಿಗಾದರೂ ಸರಿ. ರಾಜ್ಯದಲ್ಲಿ ಆಗಲಿಲ್ಲ ಅಂದರೆ ಕೇಂದ್ರದಲ್ಲಿ ಶ್ರೀನಿವಾಸ್ ಪ್ರಸಾದ್ ಅವರಿಗೆ ಮಂತ್ರಿ ಸ್ಥಾನ ನೀಡಲಿ'' ಎಂದರು.
ನಮ್ಮ ಸಮುದಾಯದ ಪರವಾಗಿ ಮನವಿ ಮಾಡುವುದು ನನ್ನ ಕರ್ತವ್ಯ. ಅದಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇನೆ. ಎಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ಅವಕಾಶ ಇದ್ದರೆ ಅವರಿಗೂ ನೀಡಲಿ ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ಹೇಳಿದರು.

ಇದೇ ವೇಳೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರಿಂದ ಅಂಬೇಡ್ಕರ್ ಭವನ ಪರಿಶೀಲನೆ ಮಾಡಲಾಯಿತು. ದಶಕದಿಂದ ನೆನೆಗುದಿಗೆ ಬಿದ್ದಿದ್ದ ಅಂಬೇಡ್ಕರ್ ಭವನದ ಕಟ್ಟಡ ಕಾಮಗಾರಿಯನ್ನು ಮೈಸೂರಿನ ದೇವರಾಜ ಮೊಹಲ್ಲದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಅಧಿಕಾರಿಗಳೊಂದಿಗೆ ಅಂಬೇಡ್ಕರ್ ಭವನದ ಕಟ್ಟಡ ಪರಿಶೀಲಿಸಿದ ಸಚಿವ ಶ್ರೀರಾಮುಲು ಅವರು, ಸಂಸದ ಶ್ರೀನಿವಾಸ್ ಪ್ರಸಾದ್ ಜೊತೆ ಚರ್ಚೆ ನಡೆಸಿದರು. ಇವರಿಗೆ ಶಾಸಕ ಹರ್ಷವರ್ಧನ್, ನಾಗೇಂದ್ರ, ಮುಡಾ ಅಧ್ಯಕ್ಷ ರಾಜೀವ್ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡದೆ ಸಚಿವ ಶ್ರೀರಾಮುಲು ಮೌನಕ್ಕೆ ಶರಣಾದರು. ಈ ಬಗ್ಗೆ ಸಿಎಂ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ, ಹೈಕಮಾಂಡ್ ಮುಖ್ಯಮಂತ್ರಿಗಳಿಗೆ ಸೂಚನೆ ನೀಡುತ್ತಾರೆ. ಅದನ್ನು ಬಿಟ್ಟು ನನಗೇನು ಗೊತ್ತಿಲ್ಲ. ಡಿಸಿಎಂ ಸ್ಥಾನದ ಪ್ರಶ್ನೆಗೂ ಉತ್ತರಿಸದೆ ಸಚಿವ ಶ್ರೀರಾಮುಲು ವಾಪಸ್ಸಾದರು.












Click it and Unblock the Notifications