'ಸರಳ ಸಂಗತಿಗಳನ್ನು ಗುಲಾಂ ನಬಿ ಆಜಾದ್ ಅರ್ಥ ಮಾಡಿಕೊಳ್ಳಬೇಕಿತ್ತು'
ಮೈಸೂರು, ಆಗಸ್ಟ್ 27: ಕಾಂಗ್ರೆಸ್ಸಿನ ಹಿರಿಯ ಮುಖಂಡ ಮತ್ತು ಒಂದು ಕಾಲದಲ್ಲಿ ಗಾಂಧಿ ಕುಟುಂಬಕ್ಕೆ ಪರಮಾಪ್ತರಾಗಿದ್ದ ಗುಲಾಂ ನಬಿ ಆಜಾದ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ, ಕಾಂಗ್ರೆಸ್ ಮುಖಂಡರು ಅವರ ವಿರುದ್ದ ಟೀಕಾಸ್ತ್ರ ಪ್ರಯೋಗಿಸುತ್ತಿದ್ದಾರೆ.
"ಬಿಜೆಪಿಗರು ಸೃಷ್ಟಿಸಿರುವ critical social discourse ನ ಬಗ್ಗೆ ಅರಿವಿದ್ದೂ ಕೂಡಾ ಗುಲಾಂ ನಬಿ ಆಜಾದ್ ಅಂತಹ ಹಿರಿಯ ನಾಯಕರು ತಾವು ಹಂತ ಹಂತವಾಗಿ ಬೆಳೆದ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಬೇಸರದ ಸಂಗತಿ. ಇವರ ಉಪಸ್ಥಿತಿ ಮತ್ತು ಅನುಪಸ್ಥಿತಿಯಿಂದ ಪಕ್ಷಕ್ಕೆ ಲಾಭ ಆಗುತ್ತದೋ ಇಲ್ಲವೇ ನಷ್ಟವಾಗುತ್ತದೋ ಎಂಬ ಚರ್ಚೆ ಬೇರೆ" ಎಂದು ಹಿರಿಯ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಅಭಿಪ್ರಾಯ ಪಟ್ಟರು.
ಕಾಂಗ್ರೆಸ್ ತೊರೆದ ನಂತರ ಗುಲಾಂ ನಬಿ ಆಜಾದ್ ನಡೆ ಏನು?
"ಆದರೆ, ಸಮಾಜದ ತಿಳುವಳಿಕೆಯ ಜೊತೆಗೆ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿರುವ ಕೋಮುವಾದಿಗಳ ಹಾವಳಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಹೋರಾಟದ ನೊಗ ಹೊರಬೇಕಿದ್ದ ಗುಲಾಂ ನಬಿ ಆಜಾದ್ ಅವರು ಹೋರಾಟದಿಂದ ಹಿಂದೆ ಸರಿದಿದ್ದು ರಾಹುಲ್ ಅವರನ್ನೇ ಅನಗತ್ಯವಾಗಿ ಟೀಕಿಸುವ ಕೋಮುವಾದಿಗಳ ಪರಿಪಾಠವನ್ನು ಬೆಳೆಸಿಕೊಂಡಿರುವುದು ತರವಲ್ಲ"ಎಂದು ಮಹದೇಪಪ್ಪ ಟೀಕಿಸಿದರು.
"ಈ ಸಂದರ್ಭವು ಚುನಾವಣಾ ಸೋಲು ಗೆಲವು ಮತ್ತು ಅಧಿಕಾರದ ವಿಚಾರವನ್ನು ಮೀರಿ, ಪ್ರಜಾಪ್ರಭುತ್ವದ ಉಳಿವು ಎಂಬ ಸಂದರ್ಭಕ್ಕೆ ಬಂದು ನಿಂತಿದೆ. ಚುನಾವಣಾ ಗೆಲುವುಗಳೇ criteria ಆಗಿದ್ದರೆ ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್, ಛತ್ತೀಸ್ಗಡ ಹಾಗೂ ಇನ್ನಿತರೆ ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು ಬಿಜೆಪಿಗರ ಅಕ್ರಮ ಮಾರ್ಗಕ್ಕೆ ಸಿಲುಕಿ ಸರ್ಕಾರ ಕಳೆದುಕೊಳ್ಳುವ ಸಂದರ್ಭ ಎದುರಿಸಿದೆ" ಎಂದು ಮಹದೇವಪ್ಪ ಹೇಳಿದರು.
"ಈ ಎಲ್ಲಾ ಗೆಲುವುಗಳ ಸಂದರ್ಭದಲ್ಲೂ ರಾಹುಲ್ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಿದ್ದರು. ಇಂತಹ ಸರಳ ಸಂಗತಿಗಳನ್ನು ಆಜಾದ್ ಅವರು ಅರ್ಥ ಮಾಡಿಕೊಳ್ಳಬೇಕಿತ್ತು. ಕೊನೆಯದಾಗಿ ಹೇಳುವುದಾದರೆ, ಪ್ರಬಲವಾದ ಜನಪರ ಸಿದ್ಧಾಂತ ಇಲ್ಲದ ಯಾವುದೇ ವ್ಯಕ್ತಿಗಳಿಂದ ಒಂದು ರಾಜಕೀಯ ಪಕ್ಷವಾಗಲೀ ಇಲ್ಲವೇ ಸಂವಿಧಾನಾತ್ಮಕ ಪ್ರಜಾಪ್ರಭುತ್ವವಾಗಲೀ ಉಳಿಯುವುದಿಲ್ಲ. ಅದು ಆಜಾದ್ ಆದರೂ ಅಷ್ಟೇ ಇನ್ಯಾರೇ ಆದರೂ ಅಷ್ಟೇ" ಎಂದು ಡಾ. ಹೆಚ್.ಮಹದೇವಪ್ಪ ಹೇಳಿದರು.
"ಕಾಂಗ್ರೆಸ್ಸಿಗರೇ, ದೇಶವನ್ನು ನಾವು ಜೋಡಿಸುತ್ತಿದ್ದೇವೆ, ನೀವು ಕಾಂಗ್ರೆಸ್ ಜೋಡಿಸಿ" ಎಂದು ಗುಲಾಂ ನಬಿ ಆಜಾದ್ ರಾಜೀನಾಮೆಯನ್ನು ಉಲ್ಲೇಖಿಸಿ ಕರ್ನಾಟಕ ಬಿಜೆಪಿ ಐಟಿ ಸೆಲ್ ಲೇವಡಿಯನ್ನು ಮಾಡಿತ್ತು.