ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ವಿದ್ಯಾರ್ಥಿನಿಯ ಗೆಳೆಯ ಹೇಳಿದ್ದೇನು?
ಮೈಸೂರು, ಆಗಸ್ಟ್ 25: ಶಾಂತಿ ಹಾಗೂ ಸೌಹಾರ್ದತೆಗೆ ಹೆಸರಾಗಿರುವ ಸಾಂಸ್ಕೃತಿಕ ನಗರಿ ಮೈಸೂರು ಇದೀಗ ಕ್ರೈಂ ಸಿಟಿಯಾಗಿ ಬದಲಾಗುತ್ತಿದೆ. ಒಂದು ಕಾಲದಲ್ಲಿ ಪೆನ್ಷನರ್ಸ್ ಪ್ಯಾರಡೈಸ್ ಎನಿಸಿದ್ದ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಮೈಸೂರಿಗರನ್ನು ಬೆಚ್ಚಿಬೀಳಿಸಿದೆ.
ಹೊರ ರಾಜ್ಯಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಗ್ಯಾಂಗ್ ರೇಪ್ ಪ್ರಕರಣ ಇದೀಗ ಮೈಸೂರಿಗೂ ವಕ್ಕರಿಸಿದೆ. ಮೈಸೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಘೋರ ಘಟನೆ ಮೈಸೂರಿನಲ್ಲಿ ನಡೆದಿದೆ.
ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಘೋರ ಘಟನೆ ಕುರಿತು ಯುವತಿಯ ಗೆಳೆಯ ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದಾನೆ.

ವಿದ್ಯಾರ್ಥಿನಿ ಗೆಳೆಯನ ಹೇಳಿಕೆ
"ದುಷ್ಕರ್ಮಿಗಳು ನಮ್ಮ ಜೊತೆ ಗಲಾಟೆ ಮಾಡಿ, ನನ್ನ ತಲೆಗೆ ಕಲ್ಲಿನಿಂದ ಹೊಡೆದರು. ನಾನು ಪ್ರಜ್ಞೆ ತಪ್ಪಿ ಬಿದ್ದಾಗ ಹುಡುಗಿಯನ್ನು ದೂರ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ," ಎಂದು ಅತ್ಯಾಚಾರ ಸಂತ್ರಸ್ತೆಯ ಗೆಳೆಯ ಹೇಳಿದ್ದಾನೆ.
"ನಾನು ನನ್ನ ಸ್ನೇಹಿತೆ ರೌಂಡ್ಸ್ ಬಂದಿದ್ದೆವು. ಈ ವೇಳೆ ಅಲ್ಲೇ ಎಣ್ಣೆ ಹೊಡೆಯುತ್ತಿದ್ದ 5-6 ಜನರು ಗಲಾಟೆ ಶುರು ಮಾಡಿದರು. ಇದರಲ್ಲಿ ಎಲ್ಲರೂ ಕನ್ನಡ ಮಾತಾಡುತ್ತಿದ್ದರು. ಒಬ್ಬ ಮಾತ್ರ ಬೇರೆ ಬಾಷೆ ಮಾತಾಡುತ್ತಿದ್ದ."
"ಇದೇ ಸಂದರ್ಭದಲ್ಲಿ ಗಲಾಟೆ ಮಾಡಿದವರು ನನಗೆ ಕಲ್ಲಿನಲ್ಲಿ ತಲೆಗೆ ಹೊಡೆದರು. ಆಗ ನಾನು ಪ್ರಜ್ಞೆ ತಪ್ಪಿ ಬಿದ್ದೆ. ನಂತರ ಹುಡುಗಿಯನ್ನು ದೂರ ಕರೆದುಕೊಂಡು ಹೋಗಿ ರೇಪ್ ಮಾಡಿದರು," ಎಂದು ಯುವಕ ನಡೆದ ಅತ್ಯಾಚಾರ ಘಟನೆಯನ್ನು ವಿವರಿಸಿದ್ದಾನೆ.
ಸದ್ಯ ಯುವಕ ಹಾಗೂ ಯುವತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳ ವಿರುದ್ಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಯುವತಿ ಉತ್ತರ ಭಾರತ ಮೂಲದವಳಾಗಿದ್ದಾಳೆ ಎನ್ನಲಾಗಿದೆ. ಸಾಮೂಹಿಕ ಅತ್ಯಾಚಾರ ಕೃತ್ಯ ನಡೆದಿರುವ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಕೃತ್ಯ ನಡೆದಿರುವ ಬಗ್ಗೆ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.












Click it and Unblock the Notifications