ಚಾಲೆಂಜಿಂಗ್ ಸ್ಟಾರ್ ಕಾರು ಅಪಘಾತ ಪ್ರಕರಣ:ಕಾರಿನಲ್ಲಿದ್ದವರು ನಾಲ್ವರಲ್ಲ!
ಮೈಸೂರು, ಸೆಪ್ಟೆಂಬರ್.26 : ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಅಪಘಾತಕ್ಕೀಡಾದ ಕಾರಿನಲ್ಲಿ ನಾಲ್ಕಲ್ಲ, ಒಟ್ಟು ಐದರಿಂದ ಆರು ಮಂದಿ ಪ್ರಯಾಣಿಸುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ದರ್ಶನ್ ಕಾರು ಚಾಲಕ ಲಕ್ಷ್ಮಣ್ ದೂರಿನ ಮೇರೆಗೆ ಕೇಸ್ ದಾಖಲಿಸಲಾಗಿದೆ. ರಾಯ್ ಆಂಟೋನಿ ಮೇಲೆ ಕೂಡ ಕೇಸ್ ದಾಖಲಿಸಿದ್ದೇವೆ. ಘಟನೆ ನಡೆದಾಗ ಪೊಲೀಸರು ಸ್ಥಳದಲ್ಲಿ ಇರಲು ಸಾಧ್ಯವಿಲ್ಲ. ವಿಷಯ ಗೊತ್ತಾದ ಕೂಡಲೇ ಸಹಜವಾಗಿಯೇ ಪೊಲೀಸರು ಸ್ಥಳಕ್ಕೆ ತೆರಳುತ್ತಾರೆ.
ಪೊಲೀಸರ ಸಮ್ಮುಖದಲ್ಲಿ ಕಾರನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ. ಒಂದು ವೇಳೆ ಹಾಗಾಗಿದ್ದರೆ ಸಂಬಂಧಪಟ್ಟ ಪೊಲೀಸರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು. ಅಪಘಾತವಾದಾಗ ಕಾರಿನಲ್ಲಿ ಐವರು ಇದ್ದರು ಅಂತ ಗೊತ್ತಾಗಿದೆ.
ಆರು ಜನರು ಇರಬಹುದು. ಎಷ್ಟು ಜನರು ಇದ್ದಾರೆ ಎಂಬುದನ್ನು ತನಿಖೆ ಮೂಲಕ ಪಡೆದುಕೊಳ್ಳಲಾಗುವುದು. ದೂರಿನ ಪ್ರಕಾರ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಅಪಘಾತವಾಗಿದೆ. ಕಾರಿನಲ್ಲಿ ತಾಂತ್ರಿಕ ದೋಷ ಇತ್ತೋ ಇಲ್ಲವೋ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಅದೆಲ್ಲವೂ ತನಿಖೆಯಿಂದ ಗೊತ್ತಾಗಲಿದೆ ಎಂದರು. ಮುಂದೆ ಓದಿ...

24 ಗಂಟೆಗಳಲ್ಲಿ ತನಿಖೆ ಮುಗಿಸಲು ಸಾಧ್ಯವಿಲ್ಲ
ಈಗಾಗಲೇ ಪೊಲೀಸರು ಕಾರಿನಲ್ಲಿದ್ದವರ ಹೇಳಿಕೆ ಪಡೆದುಕೊಂಡಿದ್ದಾರೆ . ದರ್ಶನ್ ಅವರಿಂದಲೂ ಹೇಳಿಕೆ ಪಡೆಯಲಾಗಿದೆ ತನಿಖೆ ಹಂತದಲ್ಲಿರುವುದರಿಂದ ಯಾವುದೇ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ . ಕಾರಿನಲ್ಲಿದ್ದವರು ಮದ್ಯ ಮಾಡಿದ್ದರ ಬಗ್ಗೆ ಕೂಡ ತನಿಖೆಯಾಗಲಿದೆ.
ಕೇವಲ 24 ಗಂಟೆಗಳಲ್ಲಿ ತನಿಖೆ ಮುಗಿಸಲು ಸಾಧ್ಯವಿಲ್ಲ. ಪೊಲೀಸರಿಗೆ ಕಾಲಾವಕಾಶ ಕೊಡಿ ಎಂದು ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.

ಆಯುಕ್ತರು ಹೇಳುವುದು ಐದು ಮಂದಿ
ಕಳೆದೆರಡು ದಿನಗಳಿಂದ ಕಾರಿನಲ್ಲಿದ್ದಿದ್ದು ನಾಲ್ವರೇ ಎಂದು ದರ್ಶನ್ ಆಪ್ತರು ಹೇಳುತ್ತಿದ್ದರು. ಆದರೆ ಈಗ ಪೊಲೀಸ್ ಆಯುಕ್ತರ ಅಧಿಕೃತ ಹೇಳಿಕೆ ಮೂಲಕ ಕಾರಿನಲ್ಲಿ ಹೆಚ್ಚು ಮಂದಿ ಇರುವುದು ಸ್ಪಷ್ಟವಾಗಿದೆ. ಈಗಾಗಲೇ ಎಫ್ಐಆರ್ ನಲ್ಲಿ ನಾಲ್ಕು ಮಂದಿ ಇದ್ದರೆ, ಆಯುಕ್ತರು ಐದು ಮಂದಿ ಕಾರಿನಲ್ಲಿ ಇದ್ದರು ಎಂದು ಹೇಳಿದ್ದಾರೆ.
'ದಾಸ' ದರ್ಶನ್ ಅಪಘಾತದ ಸುತ್ತ ಹಲವು ಅನುಮಾನಗಳ ಹುತ್ತ.!

ಕಾರಿನಲ್ಲಿ ಆರು ಮಂದಿ ಪ್ರಯಾಣ
ಕೊಲಂಬಿಯಾ ಏಷ್ಯಾ ಆಸ್ಪತ್ರೆಯ MLC ವರದಿಯ ಪ್ರಕಾರ ಕಾರಿನಲ್ಲಿ ಆರು ಮಂದಿ ಪ್ರಯಾಣಿಸಿದ್ದಾರೆ. ಸದ್ಯ ಅವರಲ್ಲಿ ನಾಲ್ವರು ಚಿಕಿತ್ಸೆ ಪಡೆದಿದ್ದಾರೆ. ಇನ್ನಿಬ್ಬರು ಯಾವುದೇ ಗಾಯಗಳಿಲ್ಲದೆ ಆಸ್ಪತ್ರೆಯಲ್ಲಿ ಸಹಜ ತಪಾಸಣೆ ನಿರ್ಗಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹುಟ್ಟುಹಾಕಿದ ಅನುಮಾನ
ಮೇಲಿನ ಎಲ್ಲಾ ವರದಿಗಳನ್ನು ಗಮನಿಸಿದರೆ ಎಫ್ ಐಆರ್ ನಲ್ಲೊಂದು, ಎಂಎಲ್ ಸಿ ವರದಿಯಲ್ಲೊಂದು ಭಿನ್ನವಾಗಿದ್ದು, ಎಲ್ಲದರಲ್ಲೂ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ದರ್ಶನ್ ಕಾರು ಅಪಘಾತ ಸಂಭವಿಸಿದ್ದು, ರಾಶ್ ಡ್ರೈವಿಂಗ್ ನಿಂದಾಗಿಯೇ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಸದ್ಯ ಕಾರು ಚಲಾಯಿಸುತ್ತಿದ್ದ ರಾಯ್ ಆಂಟೋನಿಯನ್ನೇ ದೋಷಿ ಎಂದು ಎಫ್ ಐಆರ್ ನಲ್ಲಿ ಬಿಂಬಿಸಲಾಗುತ್ತಿದೆ.












Click it and Unblock the Notifications