ಕೊಡವರು ಗೋ ಪೂಜಕರು, ಭಂಜಕರಲ್ಲ: ಸಿದ್ದು ವಿರುದ್ಧ ಎಚ್.ವಿಶ್ವನಾಥ್ ವಾಗ್ದಾಳಿ
ಮೈಸೂರು, ಡಿಸೆಂಬರ್ 24: ಕೊಡವರು ಗೋವನ್ನು ಪೂಜಿಸುತ್ತಾರೆಯೇ ಹೊರತು ಅದನ್ನು ಎಂದಿಗೂ ತಿನ್ನುವುದಿಲ್ಲ. ಸಿದ್ದರಾಮಯ್ಯ ನೀಡಿರುವ ಹೇಳಿಕೆಯು ಕೊಡವ ಜನಾಂಗಕ್ಕೆ ಮಾಡಿದ ಅವಮಾನ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ವಿಶ್ವನಾಥ್, ಸಿದ್ದರಾಮಯ್ಯನವರೇ ಇನ್ನಾದರೂ ನಿಮ್ಮ ದುರಂಹಕಾರದ ಮಾತನ್ನು ನಿಲ್ಲಿಸಿ. ನಿಮ್ಮ ಹೇಳಿಕೆಗೆ ಕೂಡಲೇ ಕೊಡವರ ಕ್ಷಮೆಯಾಚಿಸಿ ಎಂದು ಒತ್ತಾಯಿಸಿದರು.
ನಿಮ್ಮ ಹೇಳಿಕೆಗಳಲ್ಲಿ ಕಾಂಗ್ರೆಸ್ ಮುಗಿಸುವ ಹುನ್ನಾರ ಇದೆ. ಒಂದು ಕಡೆ ಬಲಗೈ ದಲಿತರು ಮತ ಹಾಕಿಲ್ಲ. ಇದರಿಂದ ಅವರ ಮತಬ್ಯಾಂಕ್ ಹಾಳಾಗಿದೆ. ತಾನು ಸಿಎಂ ಆದ ಮೇಲೆ ಬೇರೆ ಯಾರೂ ಸಿಎಂ ಆಗಬಾರದು ಎನ್ನುವ ಮನೋಭಾವ ನಿಮಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನು ಕಾಂಗ್ರೆಸ್ ನಾಯಕರು ಗಂಭೀರವಾಗಿ ಪರಿಗಣಿಸಬೇಕು. 140 ಸ್ಥಾನ ಗೆಲ್ಲುವ ಕಾಂಗ್ರೆಸ್ನಲ್ಲಿ 20 ಸ್ಥಾನ ಗೆಲ್ಲುವುದಿಲ್ಲವೇ ಅನ್ನೋ ಚರ್ಚೆ ಆರಂಭವಾಗಿದೆ ಎಂದರು.
ರಾಜ್ಯದಲ್ಲಿ ನೈಟ್ ಕರ್ಫ್ಯೂ ಬಗ್ಗೆ ನಾಡಿನ ಜನರು ಇದನ್ನು ಹಾಸ್ಯವಾಗಿ ತೆಗೆದುಕೊಂಡಿದ್ದಾರೆ. ನೈಟ್ ಕರ್ಫ್ಯೂ ವಿಚಾರದಲ್ಲಿ ಪುನರ್ ವಿಮರ್ಶೆ ಮಾಡಬೇಕಿದೆ ಎಂದು ಸಲಹೆ ನೀಡಿದ ಎಂಎಲ್ಸಿ ಎಚ್.ವಿಶ್ವನಾಥ್, ಹೊಸವರ್ಷದ ಆಚರಣೆ ತಡೆಯಲು ಡಿ.30 ಹಾಗೂ 31 ರಂದು ಮಾತ್ರ ನೈಟ್ ಕರ್ಫ್ಯೂ ಮಾಡಿ. ನೈಟ್ ಕರ್ಫ್ಯೂನಿಂದ ಯಾವುದೇ ಪ್ರಯೋಜನವಿಲ್ಲ. ಯೋಚಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಬೇಕೆ ಹೊರತು ನಗೆಪಾಟಲಿಗೆ ಒಳಗಬಾರದು ಎಂದರು.
ಶಾಲೆ ಆರಂಭದ ಕುರಿತು ಮಾತನಾಡಿದ ಎಚ್.ವಿಶ್ವನಾಥ್, ಸದ್ಯ ಕೊರೊನಾ ಎರಡನೇ ಅಲೆ ಜೋರಾಗಿದೆ. ಮಕ್ಕಳ ಜೀವದ ಜೊತೆ ಚೆಲ್ಲಾಟ ಸರಿಯಲ್ಲ. ಮಕ್ಕಳು ಮನೆಯ ಆಸ್ತಿ. ಒಂದನೇ ತಾರೀಖಿನಿಂದ ಶಾಲೆ ಬೇಡ. ಸಚಿವ ಸುರೇಶ್ ಕುಮಾರ್ ಹೇಳಿರುವ ಯಾವುದಾದರೂ ಒಂದು ಕೆಲಸ ಆಗಿದೆಯಾ ಎಂದು ಪ್ರಶ್ನಿಸಿದರು. ಇವರಿಗೆ ತಮ್ಮ ಮಾತು ವಾಪಸ್ ಪಡೆಯುವ ಅಭ್ಯಾಸ ಇದೆ ಎಂದು ಟೀಕಿಸಿದರು.
ಪೋಷಕರು, ಮಕ್ಕಳನ್ನು ಆತಂಕಕ್ಕೀಡು ಮಾಡಬೇಡಿ. ಸಂಕ್ರಾಂತಿ ಆದ ಮೇಲೆ ಶಾಲೆ ಆರಂಭಿಸಿ, ಎರಡನೇ ಅಲೆ ಬಗ್ಗೆ ಆತಂಕ ಇದೆ. ಹೀಗಿರುವಾಗ ಯಾವ ಪೋಷಕರೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಹೀಗಾಗಿ, ಜನವರಿ 1 ರಿಂದ ಶಾಲೆ ಆರಂಭ ಬೇಡ ಎಂದು ಸಲಹೆ ನೀಡಿದರು.












Click it and Unblock the Notifications