"ಸಿಡಿ ಪ್ರಕರಣ: ಯಾವ ತನಿಖೆಯೂ ಆಗಲ್ಲ, ಯಾರಿಗೂ ಶಿಕ್ಷೆಯೂ ಆಗಲ್ಲ''
ಮೈಸೂರು, ಮಾರ್ಚ್ 11: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಎಸ್ಐಟಿಗೆ ನೀಡಿರುವುದು ತಿಪ್ಪೆ ಸಾರಿಸುವ ಕೆಲಸವಾಗಿದ್ದು, ಇದರಿಂದ ಯಾವ ತನಿಖೆಯೂ ಆಗಲ್ಲ, ಯಾರಿಗೂ ಶಿಕ್ಷೆಯೂ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಕರಣದ ಕುರಿತು ಎಸ್ಐಟಿ ತನಿಖೆ ಮಾಡುತ್ತೇವೆ ಅಂತಾರೆ. ಆದರೆ ಯಾರ ವಿರುದ್ಧ ತನಿಖೆ ಮಾಡ್ತಾರೆ? ಏನಂತ ತನಿಖೆ ಮಾಡ್ತಾರೆ? ಯಾವ ವಿಚಾರಗಳ ಆಧಾರದ ಮೇಲೆ ತನಿಖೆಗೆ ಆದೇಶ ಮಾಡ್ತಾರೆ? ಎಫ್ಎಸ್ಎಲ್ ರಿಪೋರ್ಟ್ ನಕಲಿ ಅಂತ ಬರಬಹುದು. ಈ ಹಿಂದೆಯೂ ಇಂತಹ ಅದೆಷ್ಟೋ ತನಿಖಾ ವರದಿಗಳು ಮೂಲೆಗುಂಪಾಗಿವೆ. ಈ ಹಿಂದೆ ಮೇಟಿ ಪ್ರಕರಣದಲ್ಲೂ ಕ್ಲೀನ್ ಚಿಟ್ ಆಯ್ತು. ಇಂತಹ ಪ್ರಕರಣಗಳನ್ನು ನೈತಿಕವಾಗಿ ಎದುರಿಸಬೇಕು ಎಂದರು.
ಮಮತಾ ಬ್ಯಾನರ್ಜಿಗೆ ನೈತಿಕ ಬೆಂಬಲ ನೀಡಿ ಎಚ್ಡಿಕೆ ಟ್ವೀಟ್
ಇದೇ ವೇಳೆ ರಾಜ್ಯ ಬಜೆಟ್ ಬಗ್ಗೆ ಮಾತನಾಡಿದ ಅವರು, ""ಯಡಿಯೂರಪ್ಪ ಮಂಡಿಸಿರುವ ಬಜೆಟ್ ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತ. ಪುಸ್ತಕದಲ್ಲಿ ಬರೆದಿರುವುದು ಯಾರಿಗೂ ಸರಿಯಾದ ಮಾಹಿತಿ ಇಲ್ಲ. ಈ ವರ್ಷವೇ ಒಕ್ಕಲಿಗರ ಅಭಿವೃದ್ಧಿಗೆ ಬಿಡುಗಡೆ ಮಾಡ್ತೀನಿ ಅಂತ ಬಿಎಸ್ವೈ ಹೇಳಿದ್ದಾರಾ? ಅಥವಾ ಇಂತಿಷ್ಟು ಕಾಲ ಮಿತಿಯಲ್ಲಿ ಬಿಡುಗಡೆ ಮಾಡ್ತೀನಿ ಅಂತ ಇದೆಯಾ? ಅಲ್ಲಿ ಎಲ್ಲೂ ಕೂಡ ಇಂತಿಷ್ಟೇ ಕಾಲ ಮಿತಿಯೆಂದು ಇಲ್ಲ.
ಆ ಹಣ ಬಿಡುಗಡೆಗೆ ಅದೆಷ್ಟು ವರ್ಷ ಬೇಕಾಗುತ್ತೋ? ಗೊತ್ತಿಲ್ಲ ಎಂದು ಕಿಡಿಕಾರಿದ ಅವರು, ಈ ಬಜೆಟ್ನಲ್ಲಿ ಒಕ್ಕಲಿಗರಿಗೆ 5 ರುಪಾಯಿ ಕೂಡ ಸಿಗಲ್ಲ. ಜನರಿಗೂ ಬಜೆಟ್ನಿಂದ ಉಪಯೋಗವಾಗಲ್ಲ'' ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದರು.
ಮಧು ಬಂಗಾರಪ್ಪ ಕಾಂಗ್ರೆಸ್ಗೆ; ಕುಮಾರಸ್ವಾಮಿ ಪ್ರತಿಕ್ರಿಯೆ
ಇದೇ ವೇಳೆ ಮೈಮುಲ್ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ ಮಾಯವಾಗಿದೆ. ಭ್ರಷ್ಟಾಚಾರದ ವಿರುದ್ಧವಾಗಿ ಮೈಮುಲ್ ಚುನಾವಣೆಯಲ್ಲಿ ಹೋರಾಟ ನಡೆಸಬೇಕಾಗಿದೆ. ಮೈಮುಲ್ ಎಲೆಕ್ಷನ್ನಲ್ಲಿ ಈವರೆಗೆ ಭಾಗವಹಿಸಿಲ್ಲ, ಇದರಲ್ಲಿ ಪಕ್ಷಗಳ ಪಾತ್ರ ಇರುವುದಿಲ್ಲ, ಪಕ್ಷದಲ್ಲಿರುವ ಕೆಲವರು ಸಹಕಾರ ಕ್ಷೇತ್ರದಲ್ಲಿ ಅವರದ್ದೇ ರೀತಿಯಲ್ಲಿ ಚುನಾವಣೆ ನಡೆಸುತ್ತಾರೆ. ನಾನು ಸಹಕಾರ ಕ್ಷೇತ್ರದಲ್ಲಿ ಎಂದೂ ಆಸಕ್ತಿ ತೋರಿಸಿಲ್ಲ ಎಂದರು.
ನನ್ನ ಸಹೋದರ ರೇವಣ್ಣ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಸಹಕಾರ ಕ್ಷೇತ್ರದ ನಡವಳಿಕೆಗಳು ಹೇಗಿವೆ ಅಂದರೆ ನ್ಯಾಯಯುತವಾದ ವಿಚಾರಕ್ಕೆ ಅನ್ಯಾಯದ ತೀರ್ಮಾನ, ಅನ್ಯಾಯಯುತವಾದ ವಿಚಾರಕ್ಕೆ ನ್ಯಾಯಯುತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಹಕಾರ ಕ್ಷೇತ್ರಕ್ಕೆ ರೂಲ್ ಬುಕ್ ಕೂಡ ಇಲ್ಲ. ಇಲ್ಲಿ ಕೆಲ ನಾಯಕರು ವೈಯುಕ್ತಿಕ ನೆಲೆಗಟ್ಟಿನಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಶಾಸಕ ಜಿ.ಟಿ ದೇವೇಗೌಡ ವಿರುದ್ಧ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದರು.