ಮೈಸೂರು ದಸರಾಗೆ ಐದು ಆನೆಗಳ ಆಯ್ಕೆ ಅಂತಿಮ
ಮೈಸೂರು, ಸೆಪ್ಟೆಂಬರ್ 21; ನಾಡ ಹಬ್ಬ ದಸರಾವನ್ನು ಈ ಬಾರಿ ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ದಸರಾದ ವಿಜಯದಶಮಿಯ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ, ಈಗಾಗಲೇ ಪಟ್ಟಿ ಮಾಡಿರುವ ಸಾಕಾನೆಗಳಿಗೆ ಸರ್ಕಾರದಿಂದ ಅಧಿಕೃತ ಆಹ್ವಾನ ಸಿಕ್ಕಿದ್ದು ಅಂತಿಮಗೊಳಿಸಲಾಗಿದೆ.
ತಿತಿಮತಿಯ ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು ಚಾಮುಂಡೇಶ್ವರಿಯ ವಿಗ್ರಹ ಇರುವ 750 ಕೆ.ಜಿ. ಚಿನ್ನದ ಅಂಬಾರಿ ಹೊರಲಿದ್ದು, ಗೋಪಿ, ಕಾವೇರಿ, ವಿಜಯ ಮತ್ತು ವಿಕ್ರಮ ಜಂಬೂ ಸವಾರಿಯಲ್ಲಿ ಸಾಥ್ ನೀಡಲಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ, 60 ವರ್ಷ ತುಂಬಿದ ಆನೆಗಳ ಮೇಲೆ ಹೆಚ್ಚು ಒತ್ತಡ ಹೇರುವಂತಿಲ್ಲ. ಹೀಗಾಗಿ ಕಳೆದ ಐದು ವರ್ಷಗಳಿಂದ ಗಜಪಡೆಯ ಕ್ಯಾಪ್ಟನ್ ಆಗಿದ್ದ ಅರ್ಜುನನಿಗೆ ವಿರಾಮ ಸಿಕ್ಕಿದೆ. 20 ವರ್ಷಗಳಿಂದ ದಸರಾ ಗಜಪಡೆಯ ಸದಸ್ಯನಾಗಿರುವ ಅಭಿಮನ್ಯುಗೆ ಕ್ಯಾಪ್ಟನ್ ಪಟ್ಟ ನೀಡಿದ್ದು, ಅಂಬಾರಿ ಹೊರಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಕೊರೊನಾ ಹಿನ್ನೆಲೆಯಲ್ಲಿ ಕೇವಲ 5 ಆನೆಗಳಿಗೆ ಸೀಮಿತವಾಗಿರುವ ಜಂಬೂ ಸವಾರಿ ಅರಮನೆ ಆವರಣಕ್ಕೆ ಸೀಮಿತಗೊಂಡಿದೆ. ಅಕ್ಟೋಬರ್ 1 ರಂದು ಆಯಾ ಆನೆ ಶಿಬಿರದಿಂದ ಹೊರಟು ನಗರ ತಲುಪುವ ಆನೆಗಳಿಗೆ ಅಕ್ಟೋಬರ್ 2ರಂದು ಅರಮನೆ ಆವರಣದಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಳಿಕ ಆವರಣದಲ್ಲೇ ತಾಲೀಮು ನಡೆಯಲಿದೆ. ಇನ್ನು ಇದೇ ಆನೆಗಳ ಪೈಕಿ ಎರಡು ಆನೆಗಳನ್ನು ಅರಮನೆ ಸಂಪ್ರದಾಯದಂತೆ ಮಾಡಲ್ಪಡುವ ಪೂಜೆ ಕೈಂಕರ್ಯಗಳಿಗೆ ಬಳಸಿಕೊಳ್ಳಲಾಗುವುದು ಎಂದು ತಿಳಿದುಬಂದಿದೆ.












Click it and Unblock the Notifications