ಮಾಸ್ಕ್ ಧರಿಸದೇ ಮೈಸೂರಿಗರು ತೆತ್ತ ದಂಡ ಎಷ್ಟು ಗೊತ್ತಾ?
ಮೈಸೂರು, ಡಿಸೆಂಬರ್ 04: ಕೊರೊನಾ ಸಾಂಕ್ರಾಮಿಕವು ಹರಡದಂತೆ ತಡೆಗಟ್ಟಲು ಸರ್ಕಾರವು ಕೋಟ್ಯಂತರ ರೂಪಾಯಿಗಳನ್ನು ನಿತ್ಯ ವ್ಯಯಿಸುತ್ತಿದೆ. ಸಾಕಷ್ಟು ಜನ ಜಾಗೃತಿ ಕಾರ್ಯಕ್ರಮಗಳು, ಮಾಧ್ಯಮಗಳ ಮುಖಾಂತರವೂ ಜನರಿಗೆ ಕೊರೊನಾದಿಂದ ರಕ್ಷಿಸಿಕೊಳ್ಳುವುದರ ಬಗ್ಗೆ ಸಲಹೆ ನೀಡುತ್ತಿದೆ. ಅಲ್ಲದೆ ಇದನ್ನು ಪಾಲಿಸದವರ ಮೇಲೆ ದಂಡವನ್ನೂ ವಿಧಿಸುತ್ತಿದೆ.
ಆದರೆ ಇಷ್ಟೆಲ್ಲಾ ಇದ್ದರೂ ಜನರು ಮಾತ್ರ ಮಾಸ್ಕ್ ಧರಿಸದೇ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ದಂಡ ಕಟ್ಟಿ ಆದಾಯ ಮಾಡಿಕೊಡುತ್ತಿದ್ದಾರೆ. ಸರ್ಕಾರದ ಮಾರ್ಗ ಸೂಚಿಯನ್ನು ಪಾಲಿಸದೇ ಮೈಸೂರಿನಲ್ಲಿ ಜನರು ಬರೋಬ್ಬರಿ 60 ಲಕ್ಷ ರೂ. ದಂಡವನ್ನು ಪಾವತಿಸಿದ್ದಾರೆ. ವಿಶೇಷ ಎಂದರೆ, ಎರಡನೇ ಅಲೆ ಆತಂಕ ಇರುವುದರಿಂದ ಪೊಲೀಸರ ತಪಾಸಣೆ ತೀವ್ರಗೊಂಡ ಕಳೆದ 15 ದಿನದಲ್ಲಿಯೇ 10 ಸಾವಿರಕ್ಕೂ ಹೆಚ್ಚು ಜನರು 19 ಲಕ್ಷ ರೂ. ದಂಡವನ್ನು ಪಾವತಿಸಿದ್ದಾರೆ. 20 ರೂ. ಮಾಸ್ಕ್ ಧರಿಸದೇ 200 ರೂ. ದಂಡ ಪಾವತಿಸಲು ಸಿದ್ಧವಾಗಿದೆ ಜನರ ಮನಸ್ಥಿತಿ.
ಡಿ.03 ವರದಿಯಂತೆ ಮೈಸೂರಿನಲ್ಲಿ ಒಟ್ಟು 50848 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 49567 ಮಂದಿ ಗುಣಮುಖರಾಗಿದ್ದಾರೆ. 280 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 1001 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಮುಂದೆ ಓದಿ...
ಜಿಲ್ಲೆಯಾದ್ಯಂತ ಎಚ್ಚರಿಕೆಯ ಹೆಜ್ಜೆ
ಮೈಸೂರು ನಗರ ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಪ್ರತಿ ದಿನವೂ ಪೊಲೀಸರು ಒಂದಿಲ್ಲೊಂದು ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ನಗರದ ಕೆ.ಆರ್.ವೃತ್ತ, ಹಾರ್ಡಿಂಜ್ ವೃತ್ತ, ಆಯುರ್ವೇದ ವೃತ್ತ, ರಾಮಸ್ವಾಮಿ ವೃತ್ತ, ಗನ್ ಹೌಸ್, ಚಿಕ್ಕಗಡಿಯಾರ ವೃತ್ತ ಸೇರಿದಂತೆ ವಿವಿಧೆಡೆ ಸಾರ್ವಜನಿಕರು, ಪ್ರಯಾಣಿಕರು, ವಾಹನ ಚಾಲಕರಿಗೆ ಕೊರೊನಾದಿಂದ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿಸಲಾಗುತ್ತಿದೆ. ಜತೆಗೆ ಕೋವಿಡ್-19 ಜಾಗೃತಿ ನಾಮಫಲಕಗಳನ್ನೂ ಅಳವಡಿಸಲಾಗುತ್ತಿದೆ. ವ್ಯಾಪಾರ ಸಂಘಟನೆಗಳೊಂದಿಗೆ ಸಭೆ ನಡೆಸಿ ನಿಯಮ ಪಾಲಿಸುವಂತೆ ಮನವಿ ಮಾಡುವುದು ಹಾಗೂ ನಿಯಮ ಉಲ್ಲಂಘಿಸಿದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ.
ಎಲ್ಲಿ,ಯಾವಾಗ, ಹೇಗೆ ಮಾಸ್ಕ್ ಧರಿಸಬೇಕು?: WHO ಹೊಸ ಮಾರ್ಗಸೂಚಿ
ನ,16ರಿಂದ ಡಿ.1ವರೆಗೆ ಎಷ್ಟು ಪ್ರಕರಣ?
ಕಳೆದ 6 ತಿಂಗಳಿನಿಂದ ನ.16ರವರೆಗೆ 17,961 ಪ್ರಕರಣಗಳಿಂದ 41 ಲಕ್ಷ ರೂ. ದಂಡ ಶುಲ್ಕವನ್ನು ಸಂಗ್ರಹಿಸಲಾಗಿದೆ. ಆದರೆ, ನ.16ರಿಂದ ಡಿ.1ರವರೆಗೆ ಹೆಚ್ಚುವರಿ ಪ್ರಕರಣಗಳು ಸೇರಿ ಒಟ್ಟು ಪ್ರಕರಣಗಳ ಸಂಖ್ಯೆ 28,074ಕ್ಕೆ ಏರಿಕೆಯಾಗಿದೆ. 59,91,650 ರೂ. ದಂಡ ವಿಧಿಸಲಾಗಿದೆ. ಅಲ್ಲದೆ, ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧವೂ ಕ್ರಿಮಿನಲ್ ಪ್ರಕರಣ (ನ.16ರ ವರೆಗೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ) ದಾಖಲಿಸಿ ಜನರನ್ನು ಸ್ವಯಂ ಜಾಗೃತರನ್ನಾಗಿ ಮಾಡಲಾಗುತ್ತಿದೆ.
ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶ
ಸಾರ್ವಜನಿಕ ಅಂತರ ಕಾಯ್ದುಕೊಳ್ಳದೇ ಅಂಗಡಿ ಮುಂಗಟ್ಟುಗಳ ಎದುರು ಗುಂಪು ಸೇರಿ ವ್ಯಾಪಾರ ಮಾಡುತ್ತಿದ್ದ ಆಟೋ ಮೊಬೈಲ್ ಅಂಗಡಿ ಮತ್ತು ಟೀ ಅಂಗಡಿ ಅವರ ವಿರುದ್ಧ ಡಿಎಂಎ ಆಕ್ಟ್ 511 ಹಾಗೂ ಐಪಿಸಿ 269ರ ಅನ್ವಯ ಪ್ರಕರಣ ದಾಖಲಿಸಿದ್ದು, ಈ ಮೂಲಕ ಕೋವಿಡ್ ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಲು ವಿನಾಯಿತಿ ನೀಡಿದ್ದ ಪೊಲೀಸರು, ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಸಂಚಾರ ತಪಾಸಣೆ ತೀವ್ರಗೊಳಿಸಿದ್ದಾರೆ.
ಸಮಾರಂಭಗಳಿಗೆ 200 ಜನರ ಮಿತಿ ಡಿ.31ರ ತನಕ ವಿಸ್ತರಣೆ
ಜಿಲ್ಲೆಯ ವಿವಿಧೆಡೆ ಸಂಗ್ರಹಿಸಿದ ದಂಡವೆಷ್ಟು?
ಕೊರೊನಾ ನಿಯಂತ್ರಿಸಲು ಪೊಲೀಸರು ನಿತ್ಯ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬ ನಾಗರಿಕರೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಪೊಲೀಸರಿಗೆ ಸಹಕಾರ ನೀಡಿ ಜೀವ ಕಾಪಾಡಿಕೊಳ್ಳಬೇಕು. ಸಾರ್ವಜನಿಕ ಅಂತರ ಪಾಲನೆ ಮಾಡುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಬಳಸಬೇಕು ಎಂದು ಡಿಸಿಪಿ ಗೀತಾ ಹೇಳುತ್ತಾರೆ. ನಗರದ ವಿವಿಧ ಪೋಲೀಸ್ ಠಾಣೆಗಳಲ್ಲಿ ಸಂಗ್ರಹಿಸಿದ ದಂಡದ ಮೊತ್ತ ಈ ಕೆಳಗಿನಂತಿದೆ.
ಎನ್.ಆರ್ ಠಾಣೆ- 96,050, ಮಂಡಿ-2,57,600, ವಿವಿ ಪುರಂ- 2,82,700, ಜಯಲಕ್ಷ್ಮೀಪುರಂ-1,2,450, ಮೇಟಗಳ್ಳಿ-1,96,750, ವಿಜಯನಗರ- 2,17,850, ಹೆಬ್ಬಾಳ್-1,44,000, ದೇವರಾಜ- 4,59,650, ಲಷ್ಕರ್-4,44,050, ನಜರಬಾದ್-2,65,500, ಉದಯಗಿರಿ-3,02,400, ಆಲನಹಳ್ಳಿ-3,22,500, ಕೃಷ್ಣರಾಜ- 2,54,000, ಲಕ್ಷ್ಮೀಪುರಂ-1,91,950, ಅಶೋಕಪುರಂ-1,83,600, ವಿದ್ಯಾರಣ್ಯಪುರಂ-1,92,700, ಎಸ್ಎಸ್ ಪುರಂ-1,15,950, ಕುವೆಂಪುನಗರ-1,87,400, ದೇವರಾಜ ಸಂಚಾರ- 3,67,550, ಕೃಷ್ಣರಾಜ ಸಂಚಾರ-3,20,100, ನರಸಿಂಹರಾಜ ಸಂಚಾರ-1,62,000, ಸಿದ್ಧಾರ್ಥನಗರ ಸಂಚಾರ-6,32,100, ವಿವಿ ಪುರಂ ಸಂಚಾರ- 2,22,800, ಒಟ್ಟಾರೆ-59,91,650 ದಂಡ ವಸೂಲಿಯಾಗಿದೆ.
Recommended Video