ಮೈಸೂರಿನಲ್ಲಿ ಮತ್ತೆ ಕೊರೊನಾ ಹೆಚ್ಚಾಗುವ ಭೀತಿ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಮೈಸೂರು, ನವೆಂಬರ್ 2: ದಸರಾಗೆ ಕೆಲವೇ ದಿನಗಳ ಮುನ್ನ ಮೈಸೂರು ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದ ರೋಹಿಣಿ ಸಿಂಧೂರಿ ಅವರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸಲು ನಿರಂತರ ಶ್ರಮಿಸುವುದಾಗಿ ಹೇಳಿದ್ದರು.
ಇದರ ಪರಿಣಾಮವಾಗಿ ಎರಡು ವಾರದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಆದರೆ, ಮತ್ತೆ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಜಿಲ್ಲಾಧಿಕಾರಿಯವರನ್ನು ಕಾಡಿದೆ. ಈ ಕುರಿತು ಸ್ವತಃ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರವಾಸಿಗರ ಮೇಲೆ ಯಾವುದೇ ನಿರ್ಬಂಧವಿಲ್ಲ; ಮೈಸೂರು ಡಿಸಿ
ಈ ಕುರಿತು ಮಾತನಾಡಿರುವ ಅವರು, ಇನ್ನು ಹದಿನೈದು ದಿನ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗಲಿದ್ದು, ಈ ಹಿನ್ನೆಲೆ ಇದಕ್ಕಾಗಿ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿದ್ದು, ಸಕಲ ಸಿದ್ಧತೆಯನ್ನು ಮಾಡಲಾಗಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂಬ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಹೆಚ್ಚು ಬೆಡ್ ಕಾದಿರಿಸಲಾಗಿದೆ
ದಸರಾಗೆ ಬಂದಿದ್ದ ಪ್ರವಾಸಿಗರಿಂದ ಕೊರೊನಾ ಹೆಚ್ಚಾಗಿ ಹರಡಿರುವ ಸಾಧ್ಯತೆ ಇದ್ದು, ಮೈಸೂರು ಜಿಲ್ಲಾಡಳಿತ ಕೂಡ ಸಜ್ಜಾಗಿದೆ. ಪರಿಸ್ಥಿತಿ ಎದುರಿಸಲು ಹೆಚ್ಚು ಹೆಚ್ಚು ಆಸ್ಪತ್ರೆಯಲ್ಲಿ ಹೆಚ್ಚು ಬೆಡ್ ಕಾದಿರಿಸಲಾಗಿದೆ. ಜೊತೆಗೆ ಆಕ್ಸಿಜನ್ ಶೇಖರಿಸಿಟ್ಟಿದ್ದೇವೆ ಎಂದರು.
ದಸರಾ ಸಂದರ್ಭದಲ್ಲಿ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಓಡಾಡಿದ್ದ ಪ್ರವಾಸಿಗರಲ್ಲಿ ಕೊರೊನಾ ಸೋಂಕಿತರು ಇದ್ದಿರಬಹುದು, ಅವರಿಂದ ಸೋಂಕು ಹರಡಿರುವ ಸಾಧ್ಯತೆಯನ್ನು ನಾವು ತಳ್ಳಿ ಹಾಕುವಂತಿಲ್ಲ ಎಂದರು.
6 ಮಂದಿಗೆ ಯಾವುದೇ ಸೋಂಕಿನ ಲಕ್ಷಣಗಳೇ ಇರಲಿಲ್ಲ
ದಸರಾದಲ್ಲಿ ಪ್ರವಾಸಿ ತಾಣಗಳಿಗೆ ಮುಕ್ತ ಅವಕಾಶ ನೀಡಿದ ಪರಿಣಾಮ ಸೋಂಕು ಹೆಚ್ಚಾಗಲಿದೆ. ಬಹುತೇಕ ಸ್ಥಳದಲ್ಲಿ ಕೊರೊನಾ ಸೋಂಕಿತರು ಸೂಪರ್ ಸ್ಪ್ರೇಡ್ಡರ್ಸ್ ಆಗಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ, ಮೈಸೂರು ಅರಮನೆಯಲ್ಲಿ ಜಿಲ್ಲಾಡಳಿತ ಪ್ರವಾಸಿಗರಿಗೆ ನಡೆಸಿದ್ದ ಕೊರೊನಾ ಆಂಟಿಜನ್ ಟೆಸ್ಟ್ನಲ್ಲಿ 10 ಪಾಸಿಟಿವ್ ಪತ್ತೆಯಾಗಿತ್ತು. ಅದರಲ್ಲಿ 6 ಮಂದಿಗೆ ಯಾವುದೇ ಸೋಂಕಿನ ಲಕ್ಷಣಗಳೇ ಇರಲಿಲ್ಲ. ಇದರಿಂದಲೇ ನಾವು ಹೆಚ್ಚು ಆತಂಕಗೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
ಈವರೆಗೆ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದ್ದು, ತ್ವರಿತ ಚಿಕಿತ್ಸೆ ಸಿಗದ ಪರಿಣಾಮ ಸಾವಿನ ಪ್ರಮಾಣ ಹೆಚ್ಚಾಗಿದೆ. ಜನರು ಕೂಡ ಈ ಬಗ್ಗೆ ಹೆಚ್ಚಿನ ಜಾಗೃತಿವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಹಾಕಿಕೊಳ್ಳುವ ಮೂಲಕ ಸೋಂಕಿನಿಂದ ರಕ್ಷಣೆ ಪಡೆಯಬೇಕು ಎಂದು ಮನವಿ ಮಾಡಿದರು.
ಅರಮನೆಯಲ್ಲಿ ಕೊರೊನಾ ಟೆಸ್ಟ್ ಮಾಡುತ್ತೇವೆ
ಕೊರೊನಾ ನಿಯಂತ್ರಿಸಲು ಪ್ರವಾಸಿ ತಾಣಗಳನ್ನು ಬಂದ್ ಮಾಡುವುದಾಗಲಿ, ಜಿಲ್ಲಾ ಗಡಿಗಳನ್ನು ಬಂದ್ ಮಾಡುವುದಾಗಲಿ ಈ ಹಂತದಲ್ಲಿ ಸಾಧ್ಯವಿಲ್ಲ. ಅದಕ್ಕಾಗಿ ಅರಮನೆಯಲ್ಲಿ ಕೊರೊನಾ ಟೆಸ್ಟ್ ಮಾಡುತ್ತಿದ್ದೇವೆ. ಪ್ರವಾಸಿ ತಾಣಗಳಲ್ಲಿ ಕೊರೊನಾ ಟೆಸ್ಟ್ ಮಾಡುವ ಮೂಲಕ ಪ್ರವಾಸಿಗರಲ್ಲಿ ಸೋಂಕು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ರೂಪಿಸಿದ್ದೇವೆ. ಸೋಂಕು ನಿಯಂತ್ರಣ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.
Recommended Video