ಮೈಸೂರು: ಪುತ್ರನ ಔಷಧಿಗಾಗಿ 300 ಕಿ.ಮೀ ಸೈಕಲ್ ತುಳಿದ ಕಾರ್ಮಿಕ
ಮೈಸೂರು, ಮೇ 31: ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಜೀವನ ನಿರ್ವಹಣೆ ಪ್ರತಿಯೊಬ್ಬರಿಗೂ ಸವಾಲಾಗಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಪುತ್ರನಿಗೆ ಔಷಧ ತರಲು ಕಾರ್ಮಿಕನೊಬ್ಬ 300 ಕಿ.ಮೀ ಸೈಕಲ್ ತುಳಿದಿರುವ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ನಡೆದಿದೆ.
ತಿ.ನರಸೀಪುರದ ನಿವಾಸಿ ಆನಂದ್ (45) ಎನ್ನುವವರು ಹತ್ತು ವರ್ಷದ ವಿಕಲಾಂಗ ಪುತ್ರನಿಗಾಗಿ ಬೆಂಗಳೂರಿನ ನಿಮ್ಹಾನ್ಸ್ಗೆ ಸೈಕಲ್ನಲ್ಲಿ ಹೋಗಿ ಬಂದಿದ್ದಾರೆ. ಪುತ್ರನಿಗೆ ಅಗತ್ಯವಿರುವ ಔಷಧವು ಸ್ಥಳೀಯವಾಗಿ ಎಲ್ಲಿಯೂ ಸಿಗಲಿಲ್ಲ. ಬೆಂಗಳೂರಿಗೆ ಹೋದಾಗಲೆಲ್ಲಾ ಎರಡು ತಿಂಗಳಿಗಾಗುವಷ್ಟು ಔಷಧ ತರುತ್ತಿದ್ದರು. ಲಾಕ್ಡೌನ್ ಇರುವ ಕಾರಣ ಈಚೆಗೆ ಬೆಂಗಳೂರಿಗೆ ಹೋಗಲಾಗಲಿಲ್ಲ. ಇತ್ತ ಪುತ್ರನ ಔಷಧವೂ ಕಡಿಮೆಯಾಗುತ್ತಾ ಬಂತು. ಔಷಧಿ ತರುವಂತೆ ಪರಿಚಯಸ್ಥರನ್ನು ಕೇಳಿದಾಗಲೂ ನೆರವಿಗೆ ಬರಲಿಲ್ಲ.
ಆಗ ಆನಂದ್ ಮೇ 23ರಂದು ಬನ್ನೂರು, ಮಳವಳ್ಳಿ, ಕನಕಪುರ ಮಾರ್ಗವಾಗಿ ಬೆಂಗಳೂರು ತಲುಪಿದ್ದಾರೆ. ನಡುವೆ ಹಸಿದ ಹೊಟ್ಟೆಯಲ್ಲಿ ಕಂಗೆಟ್ಟಿದ್ದ ಆನಂದ್ ಅವರು ಕನಕಪುರದ ದೇವಾಲಯದಲ್ಲಿ ತಂಗಿ ರಾತ್ರಿ 10 ಗಂಟೆಗೆ ಬನಶಂಕರಿಗೆ ತಲುಪಿ ಅಪರಿಚಿತರ ಬಳಿ ತಮ್ಮ ಕಷ್ಟ ಹೇಳಿಕೊಂಡರು. ಇದರಿಂದ ಮರುಗಿದ ಅವರು ಉಳಿಯಲು ಸ್ಥಳ ಹಾಗೂ ಊಟ ನೀಡಿದ್ದಾರೆ.
ಬೆಳಗ್ಗೆ ಎದ್ದು ನಿಮ್ಹಾನ್ಸ್ಗೆ ತೆರಳಿ ಔಷಧ ತೆಗೆದುಕೊಂಡಾಗ ಆನಂದ್, ತಾವು ಸೈಕಲ್ನಲ್ಲಿ ಆಸ್ಪತ್ರೆಗೆ ಬಂದಿದ್ದಾಗಿ ವೈದ್ಯರ ಬಳಿ ಹೇಳಿಕೊಂಡರು. ಆಗ ವೈದ್ಯರೇ ಆನಂದ್ಗೆ ಸಾವಿರ ರೂಪಾಯಿ ಕೊಟ್ಟು ಕಳಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ಬೆಂಗಳೂರು ಬಿಟ್ಟ ಆನಂದ್ ಮತ್ತೆ ಸಂಜೆ 4ಗಂಟೆಗೆ ಊರು ತಲುಪಿದ್ದಾರೆ.