ಮೈಸೂರು: ಬಿತ್ತನೆ ಈರುಳ್ಳಿ ಬೆಲೆ ಏರಿಸಿದವರ ವಿರುದ್ಧ ರೈತರ ಆಕ್ರೋಶ
ಮೈಸೂರು, ಡಿಸೆಂಬರ್,11: ವಾರಕ್ಕೆ ಒಂದೆರಡು ಕೆಜಿ ತರುವ ಈರುಳ್ಳಿಯೇ ನಮ್ಮಲ್ಲಿ ಕಣ್ಣೀರು ತರಿಸಬೇಕಾದರೆ ಬಿತ್ತನೆಗಾಗಿ ಚೀಲಗಟ್ಟಲೆ ಈರುಳ್ಳಿ ಕೊಳ್ಳಬೇಕಾದ ರೈತನ ಸ್ಥಿತಿ ಹೇಗಿರಬೇಕು? ಬೇಡಿಕೆ ಹೆಚ್ಚುತ್ತಿದ್ದಂತೆ ಈರುಳ್ಳಿ ದರವನ್ನು ಮಧ್ಯವರ್ತಿಗಳು ಹೆಚ್ಚಳ ಮಾಡಿದರೆ ರೈತರು ಏನು ಮಾಡಬೇಕು?
ಈರುಳ್ಳಿ ಬೆಲೆ ಹೆಚ್ಚಳವಾದ ಕಾರಣ ಈರುಳ್ಳಿ ಬೆಳೆದು ಲಾಭ ಪಡೆಯುವ ಉದ್ದೇಶದಿಂದ ಬಿತ್ತನೆಗಾಗಿ ಈರುಳ್ಳಿ ಕೊಳ್ಳಲು ತೆರಕಣಾಂಬಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬಂದಿದ್ದರು. ಈರುಳ್ಳಿ ಕೊಳ್ಳುವ ರೈತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಮಧ್ಯವರ್ತಿಗಳು ಬಿತ್ತನೆ ಈರುಳ್ಳಿ ಬೆಲೆ ಹೆಚ್ಚಿಸಿದ ಕಾರಣ ರೈತರು ಶುಕ್ರವಾರ ಮಾರುಕಟ್ಟೆಯಲ್ಲೇ ಪ್ರತಿಭಟನೆ ಕೈಗೊಂಡಿದ್ದಾರೆ.[ಈರುಳ್ಳಿ ದರ ಏರಿಕೆಗೆ ಕಣ್ಣೀರಿಡುತ್ತಿರುವ ಗ್ರಾಹಕ]

ಕಳೆದವಾರ ತೆರಕಣಾಂಬಿಯ ಮಾರುಕಟ್ಟೆಯಲ್ಲಿ ಬಿತ್ತನೆ ಈರುಳ್ಳಿಗೆ 70 ಕೆಜಿಯ ಚೀಲಕ್ಕೆ 4 ಸಾವಿರ ರೂ. ಇತ್ತು. ಈ ಬಾರಿಯೂ ಅಷ್ಟೇ ಇರಬಹುದೆಂದು ರೈತರು ನಂಬಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ದೌಡಾಯಿಸಿದ್ದನ್ನು ಕಂಡ ಮಧ್ಯವರ್ತಿಗಳು 4 ಸಾವಿರ ಇದ್ದ ಈರುಳ್ಳಿ ಚೀಲಕ್ಕೆ 8 ಸಾವಿರ ಎಂದಿದ್ದಾರೆ.
ಮಧ್ಯವರ್ತಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ ರೈತರು ತಮಿಳುನಾಡಿನ ಈರೋಡ್, ದಿಂಡಗಲ್ ಮುಂತಾದ ಕಡೆಗಳಿಂದ 5 ಲಾರಿಗಳಲ್ಲಿ ಬಂದಿದ್ದ ಬಿತ್ತನೆ ಈರುಳ್ಳಿಯನ್ನು ಇಳಿಸಲು ಬಿಡಲಿಲ್ಲ. ಬಳಿಕ ಲಾರಿಗಳನ್ನು ಸಂತೆಗೆ ತಾರದೆ ದಳ್ಳಾಳಿಗಳ ಗೋದಾಮುಗಳ ಬಳಿಯಲ್ಲಿ ನಿಲ್ಲಿಸಿ 4.5 ರಿಂದ 5 ಸಾವಿರ ರೂಪಾಯಿಗಳಿಗೆ ಕದ್ದು ಮುಚ್ಚಿ ಮಾರಾಟ ಮಾಡಿದ್ದರಿಂದ ರೈತರು ಆಕ್ರೋಶಭರಿತರಾಗಿದ್ದರು.[ಈರುಳ್ಳಿ ದರ ದಿಢೀರ್ ಏರಿಕೆಗೆ ಕಾರಣವೇನು?]
ರೈತರು ಪ್ರತಿಭಟನೆ ಕೈಗೊಂಡ ಬಗ್ಗೆ ಮಾಹಿತಿ ಪಡೆದು ಕೃಷಿ ಮಾರುಕಟ್ಟೆಗೆ ಆಗಮಿಸಿದ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎಚ್.ಎಂ.ಗಂಗಾಧರಪ್ಪ ಅವರಿಗೆ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳನ್ನು ನಿಯಂತ್ರಿಸದೆ ನಿಷ್ಕ್ರಿಯರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದರು.












Click it and Unblock the Notifications