ಮೈಸೂರು ದಸರಾ ಉದ್ಘಾಟಿಸುವ ರೈತ ಪುಟ್ಟಯ್ಯ ಪರಿಚಯ
ಮೈಸೂರು, ಅಕ್ಟೋಬರ್ 03 : 2015ನೇ ಸಾಲಿನ ಮೈಸೂರು ದಸರಾವನ್ನು ರೈತರೊಬ್ಬರು ಉದ್ಘಾಟಿಸಲಿದ್ದಾರೆ ಎಂದು ಸರ್ಕಾರ ಘೋಷಣೆ ಮಾಡಿತ್ತು. ಈಗ ದಸರಾ ಉದ್ಘಾಟಿಸುವ ರೈತರ ಹೆಸರನ್ನು ಪ್ರಕಟಿಸಲಾಗಿದೆ. ರೈತ ಪುಟ್ಟಯ್ಯ ಈ ಬಾರಿಯ ದಸರಾಗೆ ಚಾಲನೆ ನೀಡಲಿದ್ದಾರೆ.
ಅಕ್ಟೋಬರ್ 13ರ ಮಂಗಳವಾರ ಮೈಸೂರು ದಸರಾಕ್ಕೆ ಚಾಲನೆ ದೊರೆಯಲಿದೆ. ಅಂದು ಬೆಳಗ್ಗೆ 11.05ರಿಂದ 11.55ರವರೆಗೆ ಸಲ್ಲುವ ಧನುರ್ ಲಗ್ನದಲ್ಲಿ ಪ್ರಗತಿಪರ ರೈತ ಪುಟ್ಟಯ್ಯ ಅವರು ಚಾಮುಂಡಿ ಬೆಟ್ಟದಲ್ಲಿ ದಸರಾಕ್ಕೆ ಚಾಲನೆ ನೀಡಲಿದ್ದಾರೆ. ಅಕ್ಟೋಬರ್ 22ರಂದು ಜಂಬೂ ಸವಾರಿ ನಡೆಯಲಿದ್ದು ದಸರಾಗೆ ತೆರೆ ಬೀಳಲಿದೆ. [ಅ.22ರಂದು ದಸರಾ ಆಚರಣೆಗೆ ವಿರೋಧ]
ರೈತ ಪುಟ್ಟಯ್ಯ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಹೈರಿಗೆ ಗ್ರಾಮದ ಮಲಾರ ಕಾಲೋನಿಯ ನಿವಾಸಿ. ಪರಿಶಿಷ್ಟ ಜಾತಿಗೆ ಸೇರಿದ ಇವರಿಗೆ ಈ ಬಾರಿಯ ದಸರಾ ಉದ್ಘಾಟಿಸುವ ಅವಕಾಶ ಸಿಕ್ಕಿದೆ. ಪುಟ್ಟಯ್ಯ ಅವರು ದಸರಾ ಉದ್ಘಾಟಿಸಲು ಆಯ್ಕೆಯಾಗಿರುವುದು ತಾಲೂಕಿನ ಜನರಲ್ಲೂ ಸಂತಸ ಮೂಡಿಸಿದೆ. [ಸರಳವಾಗಿ ದಸರಾ ಆಚರಣೆ : ಈ ಬಾರಿ ಏನಿರುತ್ತೆ, ಏನಿರಲ್ಲ?]
ಪುಟ್ಟಯ್ಯ ಅವರದ್ದು ಅವಿಭಕ್ತ ಕುಟುಂಬ. 67 ವರ್ಷದ ಪುಟ್ಟಯ್ಯ ಅವರ ಮನೆಯಲ್ಲಿ 40 ಸದಸ್ಯರಿದ್ದಾರೆ. 8ನೇ ತರಗತಿ ಓದಿರುವ ಪುಟ್ಟಯ್ಯನವರ ಕುಟುಂಬದಲ್ಲಿ 12 ಗಂಡು ಮಕ್ಕಳು ಮತ್ತು 9 ಹೆಣ್ಣು ಮಕ್ಕಳು ಪದವೀಧರರಾಗಿದ್ದಾರೆ. ಕುಟುಂಬದಲ್ಲಿ ಯಾರೂ ಸರ್ಕಾರಿ ಕೆಲಸ ಹುಡುಕಿಕೊಂಡು ಹೋಗದೆ ಕೃಷಿಯಲ್ಲಿಯೇ ನೆಮ್ಮದಿ ಕಂಡುಕೊಂಡಿದ್ದಾರೆ. ಪುಟ್ಟಯ್ಯ ಸಂಪೂರ್ಣ ಪರಿಚಯ ಚಿತ್ರಗಳಲ್ಲಿ..... [ದಸರಾ ಉದ್ಘಾಟನೆ ಮಾಡೋಲ್ಲ]
ದಸರಾ ಉದ್ಘಾಟನೆ ಮಾಡಲಿದ್ದಾರೆ ಪುಟ್ಟಯ್ಯ
ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಹೈರಿಗೆ ಗ್ರಾಮದ ಮಲಾರ ಕಾಲೋನಿಯ ನಿವಾಸಿ 67 ವರ್ಷದ ಪುಟ್ಟಯ್ಯ 2015ನೇ ಸಾಲಿನ ಮೈಸೂರು ದಸರಾವನ್ನು ಉದ್ಘಾಟನೆ ಮಾಡಲಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಇವರಿಗೆ ಈ ಬಾರಿಯ ದಸರಾ ಉದ್ಘಾಟಿಸುವ ಅವಕಾಶ ಸಿಕ್ಕಿದೆ.
40 ಎಕರೆ ಕೃಷಿ ಭೂಮಿ ಹೊಂದಿದ್ದಾರೆ
ಪುಟ್ಟಯ್ಯ ಅವರು 40 ಎಕರೆ ಕೃಷಿಭೂಮಿ ಹೊಂದಿದ್ದಾರೆ. ಪುಟ್ಟಯ್ಯ ಅವರದ್ದು 40 ಸದಸ್ಯರಿರುವ ಅವಿಭಕ್ತ ಕುಟುಂಬ. ಎಲ್ಲರೂ ಒಟ್ಟಿಗೆ ಸೇರಿ ಬೇಸಾಯ ಮಾಡುತ್ತಾರೆ. ಇವರ ಕುಟುಂಬದ 12 ಗಂಡು ಮಕ್ಕಳು ಮತ್ತು 9 ಹೆಣ್ಣು ಮಕ್ಕಳು ಪದವೀಧರರಾಗಿದ್ದಾರೆ. ಆದರೂ ಎಲ್ಲರೂ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
ತರಕಾರಿ, ಸೊಪ್ಪು ಬೆಳದುಕೊಳ್ಳುತ್ತಾರೆ
ಪುಟ್ಟಯ್ಯ ಅವರು ಕುಟುಂಬಕ್ಕೆ ಬೇಕಾದ ಆಹಾರ ಧಾನ್ಯ, ತರಕಾರಿ, ಸೊಪ್ಪನ್ನು ತಮ್ಮ ಜಮೀನಿನಲ್ಲಿಯೇ ಬೆಳೆದುಕೊಳ್ಳುತ್ತಾರೆ. ಹಸು, ಕುರಿ, ಕೋಳಿ, ಆಡು ಸಾಕುತ್ತಿದ್ದಾರೆ. ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ತಾಲೂಕು ಅವಿರೋಧವಾಗಿ ತಾಲೂಕು ತೋಟಗಾರಿಕಾ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಾರೆ.
40 ಎಕರೆಯಲ್ಲಿ ವಿವಿಧ ಬೆಳೆ
ಪುಟ್ಟಯ್ಯ ಅವರು ತಮ್ಮ ಜಮೀನಿನಲ್ಲಿ ರಾಗಿ, ಮುಸುಕಿನ ಜೋಳ, ಶೇಂಗಾ, ರೇಷ್ಮೆ, ತೆಂಗು, ಬಾಳೆ, ಮಾವು, ಸಪೋಟ, ಹೂ, ತರಕಾರಿ ಬೆಳೆಯುತ್ತಾರೆ. ತೋಟದಲ್ಲಿಯೇ ಮೀನು ಸಾಕಾಣಿಕೆ ಮಾಡುತ್ತಾರೆ. ತ್ಯಾಜ್ಯವನ್ನು ಬಳಸಿಕೊಂಡು ಗೋಬರ್ ಗ್ಯಾಸ್ ಉತ್ಪಾದನೆ ಮಾಡುತ್ತಾರೆ. ಸಾವಯವ ಕೃಷಿ ನಡೆಸುವ ಪುಟ್ಟಯ್ಯ ಅವರು ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕೃಷಿ ಮಾಡುತ್ತಾರೆ.
ಶೇಷ್ಠ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ
ಕೃಷಿಯಲ್ಲಿ ಪುಟ್ಟಯ್ಯ ಅವರು ಮಾಡಿರುವ ಸಾಧನೆ ಪರಿಗಣಿಸಿ 2014-15ನೇ ಸಾಲಿನಲ್ಲಿ ಶೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಬಾರಿ ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಅವರು ಮೈಸೂರು ದಸರಾವನ್ನು ಉದ್ಘಾಟನೆ ಮಾಡುತ್ತಿದ್ದಾರೆ.