ಹಣದ ಮುಗ್ಗಟ್ಟು: ಆಸ್ಪತ್ರೆಯಲ್ಲೇ ಶವ ಬಿಟ್ಟು ಹೋಗಲು ಕುಟುಂಬ ನಿರ್ಧಾರ
ಮೈಸೂರು, ಮೇ 14: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವ ಪಡೆಯಲು ಹಣಕಾಸು ಒದಗಿಸಲು ವಿಫಲವಾದ ಕುಟುಂಬವೊಂದು ಶವವನ್ನು ಆಸ್ಪತ್ರೆಯಿಂದ ಪಡೆಯುಲು ನಿರಾಕರಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮೂಕಳ್ಳಿ ಕಾಲೋನಿಯ ಸೋಲಿಗ ಜನಾಂಗದ ಶಿವಯ್ಯ ಮೃತಪಟ್ಟ ವ್ಯಕ್ತಿಯಾಗಿದ್ದು, ಉಸಿರಾಟದ ಸಮಸ್ಯೆ ಹಿನ್ನೆಲೆ ಮೈಸೂರಿನ ಅರವಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಿಗದೆ ಶಿವಯ್ಯ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಶಿವಯ್ಯ ಅವರದ್ದು ಸೋಲಿಗ ಜನಾಂಗದ ಬಡ ಕುಟುಂಬವಾಗಿದ್ದು, ಮನೆಯಲ್ಲಿ ದನ, ಕುರಿ ಎಲ್ಲಾ ಮಾರಿ, ಈಗಾಗಲೇ 70 ಸಾವಿರ ರೂಪಾಯಿ ಹಣ ಪಾವತಿ ಮಾಡಿದ್ದರು.
ಆದರೆ, ಇನ್ನೂ ಒಂದು ಲಕ್ಷ ಹಣ ಕೊಡಿ ಅಂತಾ ಶವ ಕೊಡದೆ ಆಸ್ಪತ್ರೆಯ ಆಡಳಿತ ಮಂಡಳಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ, ಆಸ್ಪತ್ರೆಗೆ ಕಟ್ಟಲು ಹಣವಿಲ್ಲದೆ ಇರುವುದರಿಂದ ಮೃತದೇಹ ಬಿಟ್ಟು ಹೋಗಲು ಕುಟುಂಬಸ್ಥರು ಮುಂದಾಗಿದ್ದಾರೆ. ಆಸ್ಪತ್ರೆ ಮುಂಭಾಗ ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.