ಸತ್ತಿಗೆಹುಂಡಿ ಸಮೀಪ ಮಾವುತರನ್ನೇ ಬೀಳಿಸಿ 15 ಕಿ.ಮೀ ಓಡಿದ ಸಾಕಾನೆಗಳು
ಮೈಸೂರು, ನವೆಂಬರ್. 23: ಹುಲಿ ಸೆರೆ ಕಾರ್ಯಾಚರಣೆಗೆ ಆಗಮಿಸಿದ 2 ಸಾಕಾನೆಗಳು ಮಾವುತರನ್ನು ಬೀಳಿಸಿ, ನಾಡಿನತ್ತ ಓಡಿದ ಘಟನೆ ಎಚ್.ಡಿ. ಕೋಟೆ ತಾಲ್ಲೂಕಿನ ಸತ್ತಿಗೆಹುಂಡಿ ಸಮೀಪ ನಡೆದಿದೆ.
ನಾಗರಹೊಳೆ ಅಭಯಾರಣ್ಯದ ತಾರಕ ಜಲಾಶಯ ಸಮೀಪದಲ್ಲಿರುವ ಪೆಂಜಳ್ಳಿಮತ್ತು ಸತ್ತಿಗೆಹುಂಡಿ ಗ್ರಾಮಗಳಲ್ಲಿ ಒಂದು ವಾರದಿಂದ ಹುಲಿಯೊಂದು ರೈತರ ಜಮೀನುಗಳಲ್ಲಿ ಪ್ರತ್ಯಕ್ಷವಾಗಿ ದನಕರುಗಳ ಮೇಲೆ ದಾಳಿ ನಡೆಸಿ ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.
ಹುಲಿಯನ್ನು ಸೆರೆಹಿಡಿಯಬೇಕೆಂದು ಮತ್ತಿಗೋಡು ಸಾಕಾನೆ ಶಿಬಿರದಿಂದ ಅರಣ್ಯ ಇಲಾಖೆ ಅಧಿಕಾರಿಗಳು ದ್ರೋಣ ಮತ್ತು ಅಶೋಕ ಎಂಬ ಸಾಕಾನೆಗಳನ್ನು ಕರೆತಂದು ಗುರುವಾರ ಬೆಳಗ್ಗೆ ರತ್ನಮ್ಮ ಅವರ ಜಮೀನಿನಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ್ದರು.

ಮಧ್ಯಾಹ್ನದ ವೇಳೆಗೆ ಸಾರ್ವಜನಿಕರು ಹುಲಿಯನ್ನು ಓಡಿಸಲು ಪಟಾಕಿ ಸಿಡಿಸಲು ಮುಂದಾಗುತ್ತಿದ್ದಂತೆ ಗಾಬರಿಗೊಂಡ ಆನೆಗಳು ಮಾವುತರಾದ ನಂಜುಂಡ ಮತ್ತು ಗುಂಡ ಎಂಬುವವರನ್ನು ಕೆಳಗೆ ಬೀಳಿಸಿ ಕೊತ್ತನಹಳ್ಳಿ, ಹಿರೇಹಳ್ಳಿ, ಜೀಹಾರ, ನಾಗನಹಳ್ಳಿ ಗ್ರಾಮಗಳ ಜಮೀನುಗಳತ್ತ ತೆರಳಿದವು. ಜತೆಗೆ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡಿದವು.
ಇದರಿಂದ ರೈತರು, ಸಾರ್ವಜನಿಕರು ಗಾಬರಿಗೊಂಡರು. ಅಧಿಕಾರಿಗಳಾದ ಕೇಶವಗೌಡ, ವಿನಯ್ ಹಾಗೂ ಪೊಲೀಸರು ಹಿರೇಹಳ್ಳಿ ಸಮೀಪ ಸಂಜೆ 5 ಗಂಟೆ ವೇಳೆಗೆ ಹರಸಾಹಸ ಪಟ್ಟು ಆನೆಗಳನ್ನು ಹಿಡಿದು ಶಿಬಿರಕ್ಕೆ ಕರೆತಂದರು.












Click it and Unblock the Notifications