ಜಂಬೂಸವಾರಿ ಬಳಿಕ ರಿಲ್ಯಾಕ್ಸ್ ಮೂಡ್ ನಲ್ಲಿ ಅರ್ಜುನ ಅಂಡ್ ಟೀಂ
ಮೈಸೂರು, ಅಕ್ಟೋಬರ್ 20 : ಒಂಬತ್ತು ದಿನಗಳ ವೈಭವದ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಯಶಸ್ವಿಯಾಗಿ ತೆರೆಬಿದ್ದಿದೆ. ಇನ್ನು ಜಂಬೂ ಸವಾರಿಯಲ್ಲಿ 750 ಕೆಜಿ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿ ಲಕ್ಷಾಂತರ ಮಂದಿ ಪ್ರವಾಸಿಗರ ಕೇಂದ್ರ ಬಿಂದುವಾಗಿದ್ದ ಕ್ಯಾಪ್ಟನ್ ಅರ್ಜುನ ಇದೀಗ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾನೆ.
ಕಳೆದ ಒಂದು ತಿಂಗಳಿಂದ ಮೈಸೂರಿನಲ್ಲಿ ಬೀಡುಬಿಟ್ಟು ದಸರಾ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆ ನಾಳೆ ಬೆಳಿಗ್ಗೆ 9:30ಕ್ಕೆ ಅರಮನೆಯಿಂದ ಕಾಡಿನೆಡೆಗೆ ಪ್ರಯಾಣ ಆರಂಭಿಸಲಿದೆ.
ಹೀಗಾಗಿ ಇಂದು ಎಲ್ಲಾ ಆನೆಗಳಿಗೂ ನೀರಿನ ಮಜ್ಜನ ಸ್ನಾನ ಮಾಡಿಸಲಾಯಿತು. ಸ್ವಚ್ಛಂದವಾಗಿ ನೀರಿನಲ್ಲಿ ಆಟವಾಡುವ ಮೂಲಕ ಕ್ಯಾಪ್ಟನ್ ಅರ್ಜುನ ಪುಲ್ ಕೂಲ್ ಕೂಲ್ ಆಗಿದ್ದಾನೆ.

ಗಜಪಡೆಗಳಿಗೆ ಅಲಂಕರಿಸಿದ್ದ ವಸ್ತುಗಳನ್ನು ತೆಗೆದು ಜೋಡಿಸಿ ಭದ್ರವಾಗಿ ಇಡಲಾಯಿತು. ಇನ್ನು ಕಾವಾಡಿ, ಮಾವುತರ ಕುಟುಂಬದವರು ತಮ್ಮ ಬಟ್ಟೆ ಬರೆಗಳನ್ನು ಒಗೆದು, ಸ್ವಚ್ಛಗೊಳಿಸಿದರು. ತಮ್ಮ ಸಾಮಾನು ಸರಂಜಾಮನ್ನು ಸಿದ್ಧಪಡಿಸಿಕೊಂಡು ಹೊರಡಲು ಅನುವಾದರು.

ಕೃತಜ್ಞತೆ ಸಲ್ಲಿಸಿದ ಮಾವುತ ವಿನು :
ಇತ್ತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿದ್ದಕ್ಕೆ ಅರ್ಜುನನ ಸಾರಥಿ ವಿನು ತಾಯಿ ಚಾಮುಂಡೇಶ್ವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಾನು ಅರ್ಜುನನಿಗೆ ಎರಡನೇ ಬಾರಿ ಸಾರಥಿಯಾಗಿ ಅಂಬಾರಿ ಮುನ್ನಡೆಸಿದ್ದು ಖುಷಿಯಾಗಿದೆ. ಇದಕ್ಕೆಲ್ಲಕ್ಕೂ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಕಾರಣ. ನಿಗದಿತ ಸಮಯಕ್ಕೆ ನಾವು ಗುರಿ ತಲುಪಿದ್ದೇವೆ. ಅಂಬಾರಿ ನಡೆಸುವ ವೇಳೆ ಯಾವುದೇ ತೊಂದರೆಯಾಗಿಲ್ಲ. ಅಂಬಾರಿ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು ಎಂದು ಅರ್ಜುನನ ಸಾರಥಿ ವಿನು ತಿಳಿಸಿದರು.












Click it and Unblock the Notifications