ಖರೀದಿ ಮಾಡಲು ಜನಪ್ರತಿನಿಧಿಗಳು ಮೀನುಗಳಲ್ಲ; ಸಚಿವ ಸೋಮಶೇಖರ್
ಮೈಸೂರು, ನವೆಂಬರ್ 23; "ಜನಪ್ರತಿನಿಧಿಗಳು ಸಿಟಿ ಮಾರುಕಟ್ಟೆಯಲ್ಲಿ ಸಿಗುವ ಫಿಶ್ ಅಲ್ಲ. ಖರೀದಿಸಲು ಅವರು ವಸ್ತುಗಳೂ ಅಲ್ಲ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿಕೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ತಿರುಗೇಟು ನೀಡಿದರು.
ವಿಧಾನ ಪರಿಷತ್ ಚುನಾವಣೆ ಹಿನ್ನಲೆ ಮಂಗಳವಾರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಚಿವ ಸೋಮಶೇಖರ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
"ಶಾಸಕರನ್ನು ಖರೀದಿಸುವ ಬಿಜೆಪಿಯವರು ಸ್ಥಳೀಯ ಜನಪ್ರತಿನಿಧಿಗಳನ್ನು ಖರೀದಿಸದೇ ಇರುವರೇ?" ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, "ಧ್ರುವನಾರಾಯಣ ಕಾಂಗ್ರೆಸ್ ಇತಿಹಾಸ ತಿಳಿದು ಮಾತಾಡಬೇಕು. ಗಾಜಿನ ಮನೆಯಲ್ಲಿ ಕುಳಿತು ಮತ್ತೊಬ್ಬರ ಮನೆಗೆ ಕಲ್ಲು ಎಸೆಯುವುದು ಸರಿಯಲ್ಲ. ಜನಪ್ರತಿನಿಧಿಗಳಿಗೆ ಅವಮಾನ ಮಾಡುವುದನ್ನು ನಿಲ್ಲಿಸಬೇಕು. ಜನಪ್ರತಿನಿಧಿಗಳು ಖರೀದಿ ವಸ್ತುಗಳಲ್ಲ" ಎಂದು ತಿರುಗೇಟು ನೀಡಿದರು.

ಮಂಡ್ಯದಲ್ಲಿ ಕಾಂಗ್ರೆಸ್ನಿಂದ ದಿನೇಶ್ ಗೂಳಿಗೌಡ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಎಸ್. ಟಿ. ಸೋಮಶೇಖರ್, "ಎರಡು ದಶಕಗಳ ರಾಜಕೀಯ ಜೀವನದಲ್ಲಿ ಎಂದಿಗೂ ಹಲ್ಕಟ್ ರಾಜಕಾರಣ ಎಂದೂ ಮಾಡಿಲ್ಲ. ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನಡೆದುಕೊಂಡಿದ್ದೇನೆ" ಎಂದು ಹೇಳಿದರು.
"ಕಾಂಗ್ರೆಸ್ಸಿನಲ್ಲಿದ್ದಾಗ ಕಾಂಗ್ರೆಸ್ಸಿಗೆ ನಿಷ್ಠೆಯಾಗಿದ್ದೆ. ಬಿಜೆಪಿಯಲ್ಲಿ ಇರುವಾಗ ಬಿಜೆಪಿಗೆ ನಿಷ್ಠೆಯಾಗಿದ್ದೇನೆ. ಎಂದೂ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡಿಲ್ಲ" ಎಂದು ಸ್ಪಷ್ಟಪಡಿಸಿದರು.
ಕೌಟಿಲ್ಯ ರಘು ಗೆಲುವು; ಕಳೆದ ಬಾರಿ ಕಡಿಮೆ ಮತಗಳಿಂದ ಸೋತಿರುವ ಕೌಟಿಲ್ಯ ರಘು ಅವರು ಈ ಚುನಾವಣೆಯಲ್ಲಿ ಮೊದಲ ಪ್ರಾಶ್ಯಸ್ತ್ಯದ ಮತಗಳಿಂದ ಗೆಲುವು ಪಡೆಯಲಿದ್ದಾರೆ ಎಂದು ತಿಳಿಸಿದರು.
"ರಘು ಅವರ ಗೆಲುವಿಗೆ ತಂಡವಾಗಿ ಕೆಲಸ ಮಾಡಲಿದ್ದೇವೆ. 12 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುವೆ. ಚಿನ್ಹೆ ಇಲ್ಲದಿರುವುದರಿಂದ ಎಲ್ಲರನ್ನೂ ಮತ ಕೇಳಲಿದ್ದೇವೆ. ನೂರಕ್ಕೆ ನೂರರಷ್ಟು ಗೆಲುವಿಗೆ ತಂತ್ರ ರೂಪಿಸಲಿದ್ದೇವೆ" ಎಂದು ಹೇಳಿದರು.
"ವಿಧಾನ ಪರಿಷತ್ತಿನಲ್ಲಿ 25 ಸ್ಥಾನಗಳು ಖಾಲಿ ಇವೆ. ಆದರೆ ಜೆಡಿಎಸ್ ನಿಂದ 7 ಜನರು ಸ್ಪರ್ಧೆ ಮಾಡಿದ್ದಾರೆ. ಅವರು ಬಿಜೆಪಿ ಬಗ್ಗೆ ಟೀಕಿಸುತ್ತಾರೆ. ಮಳೆ ಹಾನಿ ಸಂಬಂಧ ಮುಖ್ಯಮಂತ್ರಿಗಳು ಕ್ರಮಕೈಗೊಂಡಿದ್ದಾರೆ" ಎಂದು ಸಚಿವರು ತಿಳಿಸಿದರು.
ಎಲ್ಲಾ ಬಲಗಳು ವರ್ಕ್ ಆಗುತ್ತವೆ; "ವಿಧಾನ ಪರಿಷತ್ ಚುನಾವಣೆಯಲ್ಲಿ ಹಣ ಸೇರಿದಂತೆ ಎಲ್ಲಾ ಬಲಗಳು ವರ್ಕ್ ಆಗುತ್ತವೆ" ಎಂದು ಮಾಜಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಹೇಳಿದರು.
ವಿಧಾನ ಪರಿಷತ್ ಚುನಾವಣೆಗೆ ಮೈಸೂರು-ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಡಾ. ಡಿ. ತಿಮ್ಮಯ್ಯ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಡಾ. ಎಚ್. ಸಿ. ಮಹದೇವಪ್ಪ ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಅವರು, "ಪ್ರಜಾಪ್ರಭುತ್ವದಲ್ಲಿ ಇದು ನಮಗೆ ಇಷ್ಟವಿಲ್ಲದಿದ್ದರೂ ಎಲೆಕ್ಷನ್ ಪ್ರಚಾರ ವೇಳೆ ಕೆಲವೊಂದು ಚಟುವಟಿಕೆಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ ಮೂರುವರೆ ಸಾವಿರಕ್ಕೂ ಅಧಿಕವಾಗಿ ನಮ್ಮ ಕಾಂಗ್ರೆಸ್ ಸದಸ್ಯರಿದ್ದಾರೆ" ಎಂದರು.
"ನಾವು ಮೊದಲ ಪ್ರಾಶಸ್ತ್ಯದಲ್ಲೇ ಗೆಲ್ಲುತ್ತೇವೆ. ಎರಡನೇ ಸ್ಥಾನಕ್ಕೆ ಯಾರು, ಯಾವ ಬಲಗಳನ್ನು ಪ್ರಯೋಗಿಸುತ್ತಾರೋ ಗೊತ್ತಿಲ್ಲ. ಅದರ ಮೇಲೆ ಎರಡನೇ ಸ್ಥಾನದ ಫಲಿತಾಂಶ ನಿಂತಿದೆ" ಎಂದು ತಿಳಿಸಿದರು.
"ಹಾಲಿ ಪರಿಷತ್ ಸದಸ್ಯ ಧರ್ಮಸೇನಾಗೆ ಟಿಕೆಟ್ ನೀಡದಿರುವುದಕ್ಕೆ ದೊಡ್ಡ ಕಾರಣಗಳೇನು ಇಲ್ಲ. ಕಾರ್ಯಕರ್ತರು ಬದಲಾವಣೆ ಬಯಸಿದ್ದರು. ಹಾಗಾಗಿ ಬೇರೆ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದೇವೆ. ನಾನು ಎಂದಿಗೂ ಕನಸುಮನಸಿನಲ್ಲೂ ಪರಿಷತ್ ಚುನಾವಣೆ ಬಗ್ಗೆ ಯೋಚನೆಯೇ ಮಾಡಿಲ್ಲ. ಆ ಸುದ್ದಿಯನ್ನು ಯಾರು ಸೃಷ್ಟಿಸಿದರೋ ನನಗೆ ಗೊತ್ತಿಲ್ಲ. ನಾನಂತೂ ಎಂದಿಗೂ ಪರಿಷತ್ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ" ಎಂದು ಡಾ. ಎಚ್. ಸಿ. ಮಹದೇವಪ್ಪ ಸ್ಪಷ್ಟಪಡಿಸಿದರು.












Click it and Unblock the Notifications