ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ: ವೈದ್ಯರ ಮುಷ್ಕರ 3ನೇ ದಿನಕ್ಕೆ ಮುಂದುವರಿಕೆ
ಮೈಸೂರು, ಆಗಸ್ಟ್ 23: ಕೊರೊನಾ ವಾರಿಯರ್, ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ಮುಷ್ಕರ ಮೂರನೇ ದಿನವೂ ಮುಂದುವರಿದಿದೆ. ವೈದ್ಯರ ಮುಷ್ಕರದಿಂದ ಕೊರೊನಾ ಸೋಂಕು ಪರೀಕ್ಷೆಗಳು ಸ್ಥಗಿತಗೊಂಡಿದ್ದು, ಶನಿವಾರ ಯಾವುದೇ ಕೋವಿಡ್ ಪರೀಕ್ಷೆ ನಡೆಯದೆ ಜಿಲ್ಲೆಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಅಮಾನತು ಮಾಡುವಂತೆ ವೈದ್ಯ ಸಮೂಹ ಪಟ್ಟು ಹಿಡಿದಿದೆ. ತುರ್ತು ಸೇವೆಯಲ್ಲಿ ಮಾತ್ರ ವೈದ್ಯರು ಭಾಗಿಯಾಗುತ್ತಿದ್ದಾರೆ.
ಆತ್ಮಹತ್ಯೆ FIR: ಜಿಪಂ ಸಿಇಓ ಮಿಶ್ರಾಗೆ ಶುರುವಾಯ್ತು ಸಂಕಷ್ಟ
ಜಿಲ್ಲಾ ಪಂಚಾಯತಿ ಸಿಇಒ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಎಫ್ಐಆರ್ ದಾಖಲಾಗುತ್ತಿದ್ದಂತೆಯೆ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಸರ್ಕಾರ ಯಾವುದೇ ಹುದ್ದೆ ತೋರಿಸದೆ ವರ್ಗಾವಣೆ ಮಾಡಿದೆ. ಮೃತ ಡಾ.ನಾಗೇಂದ್ರ ತಂದೆ ಟಿ.ಎಸ್. ರಾಮಕೃಷ್ಣ ಅವರು ಮೈಸೂರಿನ ಆಲನಹಳ್ಳಿ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 306 ಅನ್ವಯ ಎಫ್ಐಆರ್ ದಾಖಲಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆಯ ಆರೋಪದಡಿ ದೂರು ಸಲ್ಲಿಸಲಾಗಿತ್ತು. ಜಾಮೀನು ರಹಿತ ಪ್ರಕರಣ ಇದಾಗಿದ್ದು, ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಅವರಿಗೆ ಸಂಕಷ್ಟ ಎದುರಾಗಿದೆ.
ವರ್ಗಾವಣೆಗೊಂಡಿರುವ ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಅಮಾನತಿಗೆ ಆಗ್ರಹಿಸಿ ಮೈಸೂರಿನಲ್ಲಿ ಸರ್ಕಾರಿ ವೈದ್ಯರು ಮುಷ್ಕರ ಮುಂದುವರೆಸಿದ್ದಾರೆ. ಕರ್ತವ್ಯ ಬಹಿಷ್ಕರಿಸಿರುವ ವೈದ್ಯರು ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ತುರ್ತು ಸೇವೆ ಹೊರತುಪಡಿಸಿ ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರು ಹಾಜರಾಗಿಲ್ಲ.
ಮೈಸೂರಿನ ಡಿಎಚ್ಓ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಜಿಪಂ ಸಿಇಓ ಡಾ. ನಾಗೇಂದ್ರ ಮೇಲೆ ಒತ್ತಡ ಹಾಕಿದ್ದ ಸಿಇಓ ಮಿಶ್ರಾರನ್ನು ಅಮಾನತು ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಈ ಮುಷ್ಕರದ ಬಗ್ಗೆ ಚರ್ಚಿಸಲು ವೈದ್ಯರು ಸಭೆ ಸೇರಲಿದ್ದು, ಭಾನುವಾರ ಬೆಳಿಗ್ಗೆ 11.30ಕ್ಕೆ ಮೈಸೂರಿನ ಡಿಎಚ್ಒ ಕಚೇರಿ ಬಳಿ ಸಭೆ ನಡೆಯಲಿದೆ. ಬಹುತೇಕ ಮುಷ್ಕರವನ್ನು ವಾಪಸ್ ಪಡೆಯೋ ಸಾಧ್ಯತೆ ಇದೆ ಎನ್ನಲಾಗಿದೆ.
ಕೋವಿಡ್ ಸಮಸ್ಯೆಯಿಂದ ಜನ ಸಂಕಷ್ಟದಲ್ಲಿರುವಾಗ ಮುಷ್ಕರ ಮುಂದುವರಿಸದಿರಲು ವೈದ್ಯರಿಗೆ ಒತ್ತಡವಿದೆ. ಇಲ್ಲಿಯವರೆಗೆ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಿರುವ ವೈದ್ಯರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ಸಾಧ್ಯತೆ ಇದ್ದು, ಇದಕ್ಕೆ ಅವಕಾಶ ನೀಡದಂತೆ ಹಿರಿಯ ವೈದ್ಯರಿಂದ ಸಲಹೆ ಬಂದಿದೆ. ಇಂದಿನ ಸಭೆಯಲ್ಲಿ ಮುಷ್ಕರ ಕೈಬಿಡುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.