ಅಮ್ಮನಿಂದ ತಿರಸ್ಕೃತ ಕೋತಿಮರಿಗೆ ಗೊಂಬೆಯೇ ತಾಯಿ!
ಮೈಸೂರು, ಏಪ್ರಿಲ್ 23 : ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ತಾಯಿಯಿಂದ ಪರಿತ್ಯಕ್ತ ಕೋತಿಮರಿಯೊಂದು ಗೊಂಬೆಯ ಜೊತೆ ಆಡುತ್ತಾ ದಿನಕಳೆಯುತ್ತಿರುವುದು ನೋಡುಗರ ಆಕರ್ಷಣೆಯಾಗಿರುವುದು ಮಾತ್ರವಲ್ಲ ಎಲ್ಲರ ಮನಕಲಕುವಂತಿದೆ. ಆ ಮುದ್ದುಮರಿಯ ಸ್ಥಿತಿ ನೋಡಿದರೆ ಕಣ್ಣಲ್ಲಿ ನೀರು ಜಿನುಗದೆ ಇರದು.
ಏಕೆ ಹೀಗೆ ಎಂದು ಅಚ್ಚರಿಯಾಗಿರಬಹುದಲ್ಲವೆ? ಇದಕ್ಕೆ ಕಾರಣ ಇಲ್ಲಿದೆ. ಏಪ್ರಿಲ್ 14ರಂದು ಮೃಗಾಲಯದಲ್ಲಿ ಕೋತಿಯೊಂದು ಮರಿಗೆ ಜನ್ಮ ನೀಡಿತ್ತು. ಆದರೆ ಹೆತ್ತ ಮರಿಯನ್ನು ಮುದ್ದಿನಿಂದ ಸಾಕಬೇಕಾದ ತಾಯಿ ಕೋತಿ ಅದನ್ನು ದೂರ ತಳ್ಳತೊಡಗಿತ್ತು. ಅದಕ್ಕೆ ಹಾಲನ್ನೇ ನೀಡುತ್ತಿರಲಿಲ್ಲ. ಹತ್ತಿರ ಹೋದರೆ ಗದರಿಸಿ ಕಳುಹಿಸಿ ಬಿಡುತ್ತಿತ್ತು. [ಅಮ್ಮನಾದ ಸಂಭ್ರಮದಲ್ಲಿ ಮೈಸೂರು ಮೃಗಾಲಯದ ರಿದ್ಧಿ]
ತಾಯಿಯಿಂದ ಪರಿತ್ಯಕ್ತಗೊಂಡ ಮರಿ ಅಸ್ವಸ್ತಗೊಂಡಿತು. ಇದನ್ನು ಕಂಡ ಮೃಗಾಲಯದ ಅಧಿಕಾರಿಗಳು ಅದನ್ನು ತಮ್ಮ ವಶಕ್ಕೆ ಪಡೆದು ಮುತುವರ್ಜಿಯಿಂದ ಉಪಚಾರ ಮಾಡಿದರು. ಮೊದಲಿಗೆ ಇದಕ್ಕೆ ಯಾವುದೇ ರೀತಿಯ ಉಪಚಾರ ಮಾಡಿದರೂ ಪ್ರಯೋಜನವಾಗಲಿಲ್ಲ. ಅಮ್ಮನ ಮಡಿಲಲ್ಲಿ ಬೆಳೆಯಬೇಕಾದ ಮರಿ ತಾಯಿಗಾಗಿ ಪರಿತಪಿಸುತ್ತಾ ಹಾಲನ್ನೇ ಕುಡಿಯುತ್ತಿರಲಿಲ್ಲ. [ವೃಂದಾವನದಲ್ಲಿ ಹಣದ ಮಳೆ, ಮೂಕವಿಸ್ಮಿತರಾದ ಭಕ್ತರು!]

ಹೀಗಿರುವಾಗ ಮೃಗಾಲಯದ ಅಧಿಕಾರಿಗಳು ನೂತನ ಪ್ರಯೋಗ ನಡೆಸಲು ಮುಂದಾದರು. ಅದೇನೆಂದರೆ, ಅಮ್ಮ ನೆನಪಲ್ಲಿರುವ ಮರಿಗೆ ಗೊಂಬೆಯೊಂದನ್ನು ನೀಡಿದರು. ಅದನ್ನೇ ತಾಯಿ ಎಂದು ನಂಬಿದ ಮರಿ ಅದನ್ನು ಅಪ್ಪಿಕೊಂಡು ನಿದ್ದೆ ಮಾಡತೊಡಗಿತು. ಅಷ್ಟೇ ಅಲ್ಲ ಕೃತಕ ಹಾಲನ್ನೂ ಕುಡಿಯತೊಡಗಿತು. [ಕೋಲ್ಕತಾ ಐಪಿಎಲ್ ಪಂದ್ಯದಲ್ಲಿ ಕಪಿಚೇಷ್ಟೆ]
ಇದೀಗ ಹಾಲು ಕುಡಿಯ ಬೇಕಾದರೆ ಕೋತಿ ಮರಿಗೆ ಮಂಕಿ ಡಾಲ್ ಇರಲೇ ಬೇಕು. ಆ ಗೊಂಬೆಯನ್ನು ನೀಡಿದ್ದರಿಂದಲೇ ಕೋತಿ ಮರಿ ಬದುಕುವಂತಾಗಿದೆ. ಇಲ್ಲದಿದ್ದರೆ ಎಂದೋ ಅಸುನೀಗುತ್ತಿತ್ತು. ಮೃಗಾಲಯ ಅಧಿಕಾರಿಗಳ ಈ ಜಾಣ್ಮೆಗೆ ಹಾಟ್ಸಾಫ್ ಹೇಳಲೇ ಬೇಕಲ್ಲವೆ? ಆ ತಾಯಿ ಕೋತಿ ತನ್ನ ಮಗುವನ್ನು ದೂರ ತಳ್ಳಿದ್ದಾದರೂ ಯಾಕೆ? ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. [ಮಧುಗಿರಿಯಲ್ಲಿ ವಿಷ ಉಣಿಸಿ ಕೋತಿಗಳ ಹತ್ಯೆ]












Click it and Unblock the Notifications