ಖಾಸಗಿ ವೈದ್ಯರಿಂದ ಬೆಳಗಾವಿ ಚಲೋ ಆಂದೋಲನ : ಮೈಸೂರಿನಿಂದ 1500 ವೈದ್ಯರು
ಮೈಸೂರು, ನವೆಂಬರ್ 13 : ಕೆಪಿಎಂಇ ಕಾಯಿದೆ ಯಥಾವತ್ ಜಾರಿ ವಿರೋಧಿಸಿ ಖಾಸಗಿ ವೈದ್ಯರು ಹಾಗೂ ಸಿಬ್ಬಂದಿ ಬೆಳಗಾವಿ ಚಲೋ' ಆರಂಭಿಸಿದ್ದು, ಇಂದು ಬೆಳಗಾವಿಯಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ಸೇರಲಿದ್ದಾರೆ.
ಈಗಾಗಲೇ ನಿರ್ಧಾರವಾಗಿದ್ದಂತೆ ರಾಜ್ಯಾದ್ಯಂತ ಎಲ್ಲಾ ಖಾಸಗಿ ವೈದ್ಯ ಸೇವೆಗಳನ್ನು ಸ್ಥಗಿತಗೊಳಿಸಿ ಬೆಳಗಾವಿಯತ್ತ ಭಾನುವಾರವೇ ಹೊರಟ ವೈದ್ಯರು ಸುವರ್ಣ ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಕ್ಲಿನಿಕ್, ಪಾಲಿ ಕ್ಲಿನಿಕ್ಗಳು ಇಂದು ಪೂರ್ಣ ಬಂದ್ ಆಗಿದ್ದು, ನರ್ಸಿಂಗ್ ಹೋಮ್ ಗಳಲ್ಲಿ ಹಾಲಿ ಇರುವ ರೋಗಿಗಳ ಶುಶ್ರೂಷೆಗಾಗಿ ಒಂದಿಬ್ಬರು ವೈದ್ಯರು ಮಾತ್ರವೇ ಉಳಿದಿರುತ್ತಾರೆ. ಇಂದು ಸಂಪೂರ್ಣ ಹೊಸದಾಗಿ ಹೊರರೋಗಿಗಳ ಸೇರ್ಪಡೆಗೆ ಅವಕಾಶ ಇರುವುದಿಲ್ಲ, ತುರ್ತು ಚಿಕಿತ್ಸೆ ಸೌಲಭ್ಯವೂ ಲಭ್ಯವಿರುವುದಿಲ್ಲ ಎಂದು ಸಂಘಟನೆ ಪ್ರಮುಖರು ತಿಳಿಸಿದ್ದಾರೆ.
ಈ ಕುರಿತಾಗಿ ಮಾತನಾಡಿದ ಮಾತ ನಾಡಿದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಘಟಕದ ಅಧ್ಯಕ್ಷ ಡಾ.ಎಚ್.ಎನ್.ರವೀಂದ್ರ, ಸರ್ಕಾರ ಸಂಜೆಯೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನ.14ರಿಂದ ಸರದಿ ಉಪವಾಸ ಆರಂಭಿಸಲಿದ್ದೇವೆ ಎಂದು ಹೇಳಿದರು.

ಕೆಪಿಎಂಇ ತಿದ್ದುಪಡಿ ವಿಧೇಯಕದಿಂದ ವೈದ್ಯಕೀಯ ಕ್ಷೇತಗಳ ಮೇಲಾಗುವ ಗಂಭೀರ ಪರಿಣಾಮಗಳನ್ನು ಸರ್ಕಾರ ಪರಿಗಣಿಸುತ್ತಲೇ ಇಲ್ಲ. ತಿದ್ದುಪಡಿಗಳಿಗೆ ಸಂಬಂಧಿಸಿ ಭಾರತೀಯ ವೈದ್ಯಕೀಯ ಸಂಘ 9 ತಿಂಗಳಿನಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದೆ. ಆರೋಗ್ಯ ಸಚಿವರ ಹಠಮಾರಿ ಧೋರಣೆಯಿಂದ ಖಾಸಗಿ ವೈದ್ಯರು, ತಮಗಿಷ್ಟವಿಲ್ಲದಿದ್ದರೂ ಮುಷ್ಕರ ನಡೆಸಬೇಕಾಗಿ ಬಂದಿದೆ. ಒಂದು ವೇಳೆ ವಿಧೇಯಕ ಅಂಗೀಕಾರವಾದರೆ ಎಲ್ಲಾ ಖಾಸಗಿ ವೈದ್ಯಕೀಯ ಸೇವಾ ಸಂಸ್ಥೆಗಳನ್ನು ಪೂರ್ಣ ಮುಚ್ಚಲು ತೀರ್ಮಾನಿಸಲಾಗಿದೆ ಇದರ ಸಂಪೂರ್ಣ ಹೊಣೆ ಸರ್ಕಾರದ್ದೇ ಆಗಿರುತ್ತದೆ ಎಂದರು.
.
ಮೈಸೂರಿನಿಂದ ಬೆಳಗಾವಿಗೆ ತೆರಳಿದ ವೈದ್ಯರು :
ಮೈಸೂರು ಜಿಲ್ಲೆಯಿಂದ 1,500 ವೈದ್ಯರು ಬೆಳಗಾವಿಗೆ ತೆರಳಿದ್ದಾರೆ. ಜಿಲ್ಲೆಯ 1000ಕ್ಕೂ ಹೆಚ್ಚು ಖಾಸಗಿ ಕ್ಲಿನಿಕ್, ಪಾಲಿ ಕ್ಲಿನಿಕ್ ಮುಚ್ಚಲಾಗಿದೆ. ಕಾರ್ಪೊರೇಟ್ ಆಸ್ಪತ್ರೆ ಸೇರಿ ಯಾವುದೇ ನರ್ಸಿಂಗ್ ಹೋಂ, ಆಸ್ಪತ್ರೆಗಳಲ್ಲಿ ಹೊಸದಾಗಿ ರೋಗಿಗಳನ್ನು ದಾಖಲಿಸಿಕೊಳ್ಳಲಾಗುವುದಿಲ್ಲ. ತುರ್ತು ಚಿಕಿತ್ಸೆಯೂ ಇರುವುದಿಲ್ಲ ಎಂದು ಐಎಂಎ ಉಪಾಧ್ಯಕ್ಷ ಡಾ.ಸುರೇಶ್ ರುದ್ರಪ್ಪ ತಿಳಿಸಿದ್ದಾರೆ.












Click it and Unblock the Notifications