ಸಂತ್ರಸ್ತೆಗೆ ಬೆಳಿಗ್ಗೆ ಪರಿಹಾರದ ಚೆಕ್ ನೀಡಿ, ಸಂಜೆ ವಾಪಸ್ ಪಡೆದರು...!
ನಂಜನಗೂಡು, ಅಕ್ಟೋಬರ್ 14: ನೆರೆಹಾವಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಬೆಳಿಗ್ಗೆ ಪರಿಹಾರದ ಚೆಕ್ ನೀಡಿ ಸಂಜೆ ವಾಪಸ್ ಪಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಸಂತ್ರಸ್ತೆ ಪರಿಹಾರಕ್ಕಾಗಿ ಸದಾ ಕಚೇರಿಗೆ ಅಲೆಯುತ್ತಿದ್ದರೂ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ.
ನಂಜನಗೂಡು ನಿವಾಸಿ ಚೆನ್ನಮ್ಮ ಎಂಬಾಕೆಯೇ ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆಯುತ್ತಿರುವ ಬಡ ಸಂತ್ರಸ್ತೆ. ಎರಡು ತಿಂಗಳ ಹಿಂದೆ ಕಪಿಲ ನದಿಯಲ್ಲಿ ಪ್ರವಾಹ ಬಂದ ಸಂದರ್ಭ ಚೆನ್ನಮ್ಮ ಮತ್ತು ಪತಿ ಚಿಕ್ಕಣ್ಣ ಅವರು ವಾಸವಿದ್ದ ಗುಡಿಸಲು ಮುಳುಗಿ ಹೋಗಿತ್ತು. ಹೀಗಾಗಿ ವೃದ್ಧ ದಂಪತಿ ಗಂಜಿ ಕೇಂದ್ರದಲ್ಲಿ ಆಶ್ರಯಪಡೆದಿದ್ದರು. ಆದರೆ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ವೇಳೆ ಚಿಕ್ಕಣ್ಣ ಮೃತಪಟ್ಟಿದ್ದರು.
ನಮ್ಮ ಸ್ಥಿತಿ ನೋಡಿ ಎಂದು ಗೋಳಾಡಿದ ಸಂತ್ರಸ್ತ; ತುಟಿ ಬಿಚ್ಚಲಿಲ್ಲ ಸಿಎಂ
Recommended Video
ಹೀಗಾಗಿ ಜಿಲ್ಲಾಡಳಿತದಿಂದ ಐದು ಲಕ್ಷ ರೂ.ಗಳ ಪರಿಹಾರದ ಚೆಕ್ ಅನ್ನು ಚೆನ್ಮಮ್ಮ ಅವರಿಗೆ ಬೆಳಿಗ್ಗೆ ವಿತರಿಸಿ, ಫೋಟೊ ತೆಗೆದುಕೊಂಡಿದ್ದರು. ಆದರೆ ಮತ್ತೆ ಸಂಜೆ ಬಂದ ತಾಲೂಕು ಕಚೇರಿ ಸಿಬ್ಬಂದಿ ಚೆಕ್ ವಾಪಸ್ ಪಡೆದುಕೊಂಡು ಹೋದರಲ್ಲದೆ, ಕಚೇರಿಗೆ ಬಂದು ಪಡೆದುಕೊಳ್ಳುವಂತೆ ಹೇಳಿದ್ದರು.
ಚೆನ್ನಮ್ಮ ಚೆಕ್ ವಾಪಸ್ ನೀಡಿ ಎರಡು ತಿಂಗಳಾಗಿದೆ. ಇದುವರೆಗೆ ಸಿಬ್ಬಂದಿ ಇತ್ತ ಸುಳಿದು ಪರಿಹಾರದ ಚೆಕ್ ನೀಡುವ ಗೋಜಿಗೆ ಹೋಗಿಲ್ಲ. ಇತ್ತ ಪರಿಹಾರದ ಹಣಕ್ಕಾಗಿ ತಾಲೂಕು ಕಚೇರಿಗೆ ಚೆನ್ನಮ್ಮ ತೆರಳಿದರೆ ಅಲ್ಲಿನ ಸಿಬ್ಬಂದಿ ಇಲ್ಲಸಲ್ಲದ ಸಾಬೂಬು ಹೇಳಿ ಸಾಗಹಾಕುತ್ತಿದ್ದಾರೆ. ಚೆನ್ನಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಯಿದ್ದು, ಅಲ್ಲಿಗೆ ಜಮಾ ಮಾಡಬಹುದಾಗಿದೆ. ಆದರೆ ಅದ್ಯಾಕೋ ಗೊತ್ತಿಲ್ಲ ಸಿಬ್ಬಂದಿ ಮಾತ್ರ ಬ್ಯಾಂಕ್ ಖಾತೆಯಿಲ್ಲ ಹೀಗಾಗಿ ಜಮಾ ಮಾಡುತ್ತಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ. ಜತೆಗೆ ಸರ್ಕಾರ ನೀಡುವ ತಾತ್ಕಾಲಿಕ ಮುಂಗಡ ಪರಿಹಾರವನ್ನು ನೀಡಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ನೇಣಿಗೆ ಕೊರಳು ಒಡ್ಡಿದ ಬೆಳಗಾವಿ ಜಿಲ್ಲೆ ಹಲಗತ್ತಿಯ ಪ್ರವಾಹ ಸಂತ್ರಸ್ತ
ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಚೆನ್ನಮ್ಮ ಗೊಂದಲಕ್ಕೆ ಸಿಲುಕಿದ್ದಾರೆ. ನಂಜನಗೂಡು ತಾಲೂಕು ಕಚೇರಿ ಸಿಬ್ಬಂದಿ ಮಾಡಿದ ಎಡವಟ್ಟಿಗೆ ಚೆನ್ನಮ್ಮ ಬೇಸತ್ತಿದ್ದು ಪರಿಹಾರದ ದಾರಿ ಕಾಯುತ್ತಿದ್ದಾರೆ.