ಮೈಸೂರು ಡಿಎಚ್ಒ ಡಾ.ಟಿ ಅಮರನಾಥ್ಗೆ ಕೊರೊನಾ ದೃಢ
ಮೈಸೂರು, ಏಪ್ರಿಲ್ 18: ಮೈಸೂರಿನಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದ್ದು, ಇದೀಗ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ ಅಮರನಾಥ್ ಅವರಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಹೀಗಾಗಿ ನಜರ್ಬಾದ್ನಲ್ಲಿರುವ ಡಿಎಚ್ಒ ಕಚೇರಿಯನ್ನು ಶನಿವಾರ ಸ್ಯಾನಿಟೈಸ್ ಮಾಡಿ ಸೀಲ್ಡೌನ್ ಮಾಡಲಾಗಿದೆ.
ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಡಿಎಚ್ಒ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಶುಕ್ರವಾರ ರಾತ್ರಿ ಬಂದ ವರದಿಯಲ್ಲಿ ಸೋಂಕು ತಗುಲಿರುವುದು ಖಚಿತವಾಗಿದೆ. ಈಗ ಅವರು ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಇವರ ಸಂಪರ್ಕಕ್ಕೆ ಬಂದ ಸಿಬ್ಬಂದಿಗೆ ಆತಂಕ ಎದುರಾಗಿದೆ. ಹಾಗಾಗಿ ಸಿಬ್ಬಂದಿಗೆ ಶನಿವಾರ ಕೋವಿಡ್ ಪರೀಕ್ಷೆ ಮಾಡಿಸಲಾಗಿದೆ.
ಕೊರೊನಾ 2ನೇ ಅಲೆ ತೀವ್ರವಾಗಿ ಹರಡುತ್ತಿರುವ ಬೆನ್ನಲ್ಲೇ ಕೋವಿಡ್ ಪರೀಕ್ಷೆಗೆ ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಗುರಿ ಮೀರಿ ಪರೀಕ್ಷೆಗಳು ನಡೆಯುತ್ತಿವೆ. ನಿತ್ಯ 5 ಸಾವಿರ ಪರೀಕ್ಷೆ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಜಿಲ್ಲೆಗೆ ನೀಡಿದೆ. ಇದಕ್ಕಿಂತ ಹೆಚ್ಚಿನ ಪರೀಕ್ಷೆಗಳು ಆಗುತ್ತಿದ್ದು, ಪ್ರತಿ ದಿನ 5500 ರಿಂದ 7 ಸಾವಿರ ಟೆಸ್ಟ್ ಮಾಡಲಾಗುತ್ತಿದೆ. ಹೀಗಾಗಿ ಕೊರೊನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿವೆ.
ಪುರಭವನ, ಕೃಷ್ಣಮೂರ್ತಿಪುರಂನ ಮಕ್ಕಳಕೂಟ ಸೇರಿ ನಗರದಲ್ಲಿ ತೆರೆದಿರುವ ಪರೀಕ್ಷಾ ಕೇಂದ್ರಗಳಿಗೆ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಬರುತ್ತಿದ್ದು, ಕುಟುಂಬ ಸಮೇತ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ.
ಹಿಂದೆ ನಾವುಗಳು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಗೋಗರೆದರೂ ಯಾರು ಬರುತ್ತಿರಲಿಲ್ಲ. ಸೋಂಕಿತರ ಸಂಪರ್ಕಿತರಿಗೆ ಹೇಳಿದರೂ ಅವರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೀಗ ಜನರು ಸ್ವಯಂ ಪರೀಕ್ಷೆಗೆ ಮುಂದಾಗಿರುವುದು ನಮಗೆ ಆಶ್ಚರ್ಯವಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್.ಚಿದಂಬರ್ ತಿಳಿಸಿದರು.
ಸೋಂಕು ದೃಢಪಟ್ಟ ವ್ಯಕ್ತಿಯ ಸಂಪರ್ಕಕ್ಕೆ ಬಂದ ವ್ಯಕ್ತಿಗಳಿಗೆ ಫೋನ್ ಮಾಡಿ ತಿಳಿಸಿದರೆ ಅವರು ತಕ್ಷಣ ಬಂದು ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಕೊರೊನಾ 2ನೇ ಅಲೆಯಿಂದ ಜನರ ಮನಸ್ಥಿತಿ ಬದಲಾವಣೆ ಆಗಿದೆ ಎಂದರು.
ಇನ್ನೊಂದೆಡೆ ಮೈಸೂರು ನಗರದ ಉತ್ತರ ಉಪನೋಂದಣಿ ಕಚೇರಿಯ ನಾಲ್ವರು ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಪ್ರತಿ ದಿನ ನೂರಾರು ಮಂದಿ ಭೇಟಿ ನೀಡುವ ಉಪ ನೋಂದಣಿ ಕಚೇರಿಯಲ್ಲಿ ಕೊರೊನಾ ಪೀಡಿತರನ್ನು ಗುರುತಿಸುವ ಬಗೆ ಹೇಗೆ ಎಂಬ ಚಿಂತೆ ಅಧಿಕಾರಿಗಳನ್ನು ಕಾಡತೊಡಗಿದೆ.
ನಗರದ ನಜರಬಾದ್ನಲ್ಲಿರುವ ಮಿನಿ ವಿಧಾನಸೌಧದ ಆವರಣದಲ್ಲಿರುವ ಉತ್ತರ ಉಪ ನೋಂದಣಿ ಕಚೇರಿಯ ಓರ್ವ ಸರ್ಕಾರಿ ಮಹಿಳಾ ನೌಕರರು ಹಾಗೂ ಮೂವರು ಹೊರ ಗುತ್ತಿಗೆ ನೌಕರರಲ್ಲಿ (ಆಪರೇಟರ್) ಕೊರೊನಾ ಸೋಂಕು ದೃಢಪಟ್ಟಿದೆ. ಉಪ ನೋಂದಣಾಧಿಕಾರಿ ವಿವೇಕ್ ಅವರು ಕೆಲಸವನ್ನು ಸ್ಥಗಿತಗೊಳಿಸಿದ್ದು, ಕಚೇರಿಗೆ ಸ್ಯಾನಿಟೈಸ್ ಮಾಡಿಸಿದ್ದಾರೆ.