ಅರ್ಕಾವತಿ ಡಿನೋಟಿಫಿಕೇಷನ್ ಕೇಸ್ ಹೊರ ಬಂದರೆ ಬಂಡವಾಳ ಬಯಲು: ಎಚ್.ವಿಶ್ವನಾಥ್ ಟಾಂಗ್
ಮೈಸೂರು, ಡಿಸೆಂಬರ್ 25: ಅರ್ಕಾವತಿ ಡಿನೋಟಿಫಿಕೇಷನ್ ವಿಚಾರ ಹೊರಗೆ ಬಂದರೆ ವಿಪಕ್ಷ ನಾಯಕರು ಎಲ್ಲಿಗೆ ಹೋಗುತ್ತಾರೆ ಗೊತ್ತಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿರುಗೇಟು ನೀಡಿದರು.
ಗುರುವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಡಿನೋಟಿಫಿಕೇಶನ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷಗಳ ನಾಯಕರಿಗೆ ಅರ್ಕಾವತಿ ಡಿನೋಟಿಫಿಕೇಷನ್ ವಿಚಾರ ತೆಗೆದು ಟಾಂಗ್ ಕೊಟ್ಟರು.
ರಾಜಕೀಯ ಎಂದ ಮೇಲೆ ಆರೋಪ ಪ್ರತ್ಯಾರೋಪಗಳು ಸಹಜ. ಆದರೆ ವಸ್ತುಸ್ಥಿತಿಯೇ ಬೇರೆ ಇರುತ್ತದೆ. ರಾಜಕೀಯ ರಾಡಿಯ ಹಿಂದೆ ಮಾತನಾಡಬಾರದು. ಇವರು ಜೈಲಿಗೆ ಹೋಗಿದ್ದರು, ಅವರು ಜೈಲಿಗೆ ಹೋಗಿದ್ದರು ಅನ್ನುವ ಮಾತುಗಳೆಲ್ಲಾ ದೊಡ್ಡವರ ಬಾಯಲ್ಲಿ ಬರಬಾರದು ಎಂದು ಎಚ್.ವಿಶ್ವನಾಥ್ ಹೇಳಿದರು.

ಜವಾಬ್ದಾರಿಯುತ ರಾಜಕೀಯ ನಾಯಕರು ಶಾಂತಿಯ ವಾತಾವರಣ ನಿರ್ಮಾಣ ಮಾಡಬೇಕು. ಮಾನಸಿಕ ನೆಮ್ಮದಿ ಕದಡುವ ಮಾತುಗಳು ಯಾರಿಂದಲೂ ಬರಬಾರದು ಎಂದು ಸಲಹೆ ನೀಡಿದರು.
ಡಿನೋಟಿಫಿಕೇಶನ್ ವಿಚಾರವಾಗಿ ಸಿಎಂ ಯಡಿಯೂರಪ್ಪನವರು ಜೈಲಿಗೆ ಹೋಗಬೇಕು ಎನ್ನುವುದಾದರೆ, ನೀವು ಮಾಡಿರುವುದನ್ನೂ ಬಹಿರಂಗಪಡಿಸಿ. ಅರ್ಕಾವತಿ ಡಿನೋಟಿಫಿಕೇಶನ್ ವಿಚಾರ ಹೊರಗೆ ಬಂದರೆ ನೀವೂ ಎಲ್ಲಿಗೆ ಹೋಗುತ್ತೀರಿ ಅಂತ ಗೊತ್ತಾಗುತ್ತದೆ ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷಗಳಿಗೆ ಎಚ್.ವಿಶ್ವನಾಥ್ ತಿರುಗೇಟು ನೀಡಿದರಲ್ಲದೆ, ರಾಜಕೀಯದಲ್ಲಿ ಕೆಸರು ಎರಚಬಾರದು ಎಂದರು.











Click it and Unblock the Notifications