ದಸರಾ ಆನೆಗಳಿಗೆ ಆತ್ಮೀಯ ಬೀಳ್ಕೊಡುಗೆ: ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
Recommended Video

ಮೈಸೂರು, ಅಕ್ಟೋಬರ್. 21 : ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಈ ಬಾರಿ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಜಂಬೂಸವಾರಿಯಲ್ಲಿ ಪಾಲ್ಗೊಂಡು ಅಂಬಾರಿ ಹೊತ್ತು ಹೆಜ್ಜೆ ಹಾಕಿದ ಕ್ಯಾಪ್ಟನ್ ಅರ್ಜುನ ಅಂಡ್ ಟೀಮ್ ಗೆ ಇಂದು ಭಾನುವಾರ ಅರಮನೆ ಆವರಣದಲ್ಲಿ ಜಿಲ್ಲಾಡಳಿತ ವತಿಯಿಂದ ಬೀಳ್ಕೊಡಲಾಯಿತು. 3 ಆನೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಗಜಪಡೆ ಕಾಡಿನತ್ತ ತೆರಳಿದವು.
ಅರ್ಚಕರು ಆನೆಗಳಿಗೆ ಕಬ್ಬು ಬೆಲ್ಲ ಹಣ್ಣು ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಸಚಿವ ಸಾ ರಾ ರಾಹೇಶ್, ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್, ಎ ಸಿ ಎಫ್ ಸಿದ್ದರಾಮಪ್ಪ, ಅರಣ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿ ಕುಟುಂಬಗಳು ಭಾಗಿಯಾಗಿದ್ದರು.
ಗೋಪಿ ,ವಿಕ್ರಮ, ವಿಜಯ ಆನೆಗಳು ಮೈಸೂರಿನಲ್ಲಿಯೇ ಉಳಿದಿದ್ದು, ನಾಳೆ ಅರಮನೆಯಲ್ಲಿ ನಡೆಯುವ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿ ನಂತರ ಕಾಡಿನತ್ತ ಪಯಣ ಬೆಳೆಸಲಿವೆ.

ಮೈಸೂರು ದಸರಾ ಬಗ್ಗೆ ಮಾತನಾಡಿದ ಆನೆ ವೈದ್ಯ ಡಾ. ನಾಗರಾಜ್, ಮೂರು ಆನೆಗಳನ್ನು ಹೊರತುಪಡಿಸಿ ಉಳಿದ ಆನೆಗಳು ಕಾಡಿಗೆ ಹಿಂತಿರುಗಿವೆ. ಪ್ರತಿ ವರ್ಷದಂತೆ ಈ ಬಾರಿಯೂ ಗಜಪಡೆಯನ್ನು ಸುಸೂತ್ರವಾಗಿ ಮುನ್ನಡೆಸಿದ್ದು, 19 ವರ್ಷದಿಂದ ನಾನು ಈ ಕೆಲಸ ನಿರ್ವಹಿಸಿದ್ದೇನೆ.
ಕಳೆದ 45 ದಿನಗಳಿಂದ ಅರಮನೆಯಲ್ಲಿದ್ದ ಗಜಪಡೆ ತಮ್ಮ ಕರ್ತವ್ಯವನ್ನ ಜವಾಬ್ದಾರಿಯುತವಾಗಿ ಮಾಡಿದ್ದು, ಅರ್ಜುನ ಆಂಡ್ ಟೀಮ್ ಗೆ ಥ್ಯಾಂಕ್ಸ್ ಹೇಳುತ್ತೇನೆ ಎಂದರು.
ನಾಡಿಗಿಂತ ಆನೆಗಳಿಗೆ ಕಾಡೆಂದರೆ ಬಲು ಇಷ್ಟ. ಈ ಬಾರಿ ಧನಂಜಯ ದಾಖಲೆ ಪ್ರಮಾಣದಲ್ಲಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಬಲರಾಮ ಹಾಗೂ ಅರ್ಜುನ ನಂತರದ ಸ್ಥಾನ ಪಡೆದಿದ್ದಾರೆ.
ಪ್ರಶಾಂತ ಆನೆ ನಿರ್ಜಲೀಕರಣ ಆದ ಕಾರಣ ಆರೋಗ್ಯದಲ್ಲಿ ವ್ಯತ್ಯಾಸ ಆಗಿತ್ತು. ಸದ್ಯ ಅವನೂ ಆರೋಗ್ಯವಾಗಿದ್ದಾನೆ. ಉಳಿದ ಎಲ್ಲಾ ಆನೆಗಳು ಆರೋಗ್ಯವಾಗಿ ಇವೆ. ಅವುಗಳು ಮೂಲ ಸ್ಥಾನಕ್ಕೆ ಹೊರಡುತ್ತಿವೆ ಎಂದು ವೈದ್ಯರು ಆನೆಗಳ ಬಗ್ಗೆ ಮಾಹಿತಿ ನೀಡಿದರು.












Click it and Unblock the Notifications