ಕ್ವಾರಂಟೈನ್ ಪೋಸ್ಟರ್ ಕಿತ್ತರೆ ಕ್ರಿಮಿನಲ್ ಕೇಸ್: ಮೈಸೂರು ಡಿಸಿ
ಮೈಸೂರು, ಏಪ್ರಿಲ್ 07: ಹೋಮ್ ಕ್ವಾರಂಟೈನ್ ನಲ್ಲಿರುವವರಿಗೆ ಸರ್ಕಾರದ ವೈದ್ಯಕೀಯ ಸಿಬ್ಬಂದಿ ಅಂಟಿಸಿರುವ ಕೋವಿಡ್19 ಪೋಸ್ಟರ್ ಗಳನ್ನು ಕಿತ್ತು ಹಾಕುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇನ್ಮುಂದೆ ಕಿತ್ತರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದೆಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಎಚ್ಚರಿಕೆ ನೀಡಿದ್ದಾರೆ.
ನಂಜನಗೂಡಿನ ಕೆಲವು ಮನೆಗಳ ಮುಂಭಾಗದಲ್ಲಿ ಅಂಟಿಸಿದ ಪೋಸ್ಟರ್ ಕಿತ್ತು ಹಾಕಿದ್ದಾರೆ. ಪುನಃ ಆರೋಗ್ಯ ಇಲಾಖೆ ಕಾರ್ಯಕರ್ತರು ಹಚ್ಚಿದರೂ ಮತ್ತೆ ಕಿತ್ತು ಹಾಕಿದ್ದಾರೆ.
ವಾರ್ತಾ ಮತ್ತು ಸಂಪರ್ಕ ಇಲಾಖೆಯ ಫೇಸ್ ಬುಕ್ ಪೇಜ್ ನಲ್ಲಿ ನೇರ ಮಾಹಿತಿ ನೀಡಿದ ಡಿಸಿ, ನಿಮ್ಮ ಮತ್ತು ನಿಮ್ಮ ಪ್ರಾಂತ್ಯದಲ್ಲಿರುವ ಜನರ ಸುರಕ್ಷತೆಗೋಸ್ಕರ ಮಾತ್ರ ಪೋಸ್ಟರ್ ಹಚ್ಚಲಾಗಿದೆಯೇ ಹೊರತು ನಿಮ್ಮನ್ನು ಬೊಟ್ಟು ಮಾಡುವುದಕ್ಕಲ್ಲ. ಅದನ್ನು ನಿಮ್ಮಿಷ್ಟಕ್ಕೆ ಕಿತ್ತು ಹಾಕಲು ನಿಮಗೆ ಅಧಿಕಾರವಿಲ್ಲ ಎಂದರು.
ಆರೋಗ್ಯ ಇಲಾಖೆಯವರು, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಬಂದು ಕಿತ್ತು ಹಾಕಬಹುದು. ಹೋಮ್ ಕ್ವಾರಂಟೈನ್ ಮುಗಿದಿದೆ ಅಂತಲೂ ಅದನ್ನು ಕೀಳಬೇಡಿ. ಮತ್ತೆ ಹದಿನಾಲ್ಕು ದಿನ ನಿಗಾ ಇಡಲಿದ್ದು, ದೇಶಾದ್ಯಂತ ಹದಿನಾಲ್ಕು ದಿನ ಮುಗಿದ ಮೇಲೆಯೂ ಪಾಸಿಟಿವ್ ಆಗುವ ಪರಿಸ್ಥಿತಿ ಕಂಡು ಬಂದಿದೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 35 ಕ್ಕೇರಿದೆ. ಮೂರು ಜನ ಪಾಸಿಟಿವ್ ತಬ್ಲೀಘಿ ಜಮಾತ್ ನಲ್ಲಿ ಪಾಲ್ಗೊಂಡವರ ಜೊತೆ ಸಂಪರ್ಕದಲ್ಲಿದ್ದವರು ಪಾಸಿಟಿವ್ ಆಗಿದ್ದಾರೆ. ಆದರೆ ಇವರು ದೆಹಲಿ ನಿವಾಸಿಗಳಲ್ಲ. ಬೆಂಗಳೂರು, ಮಂಡ್ಯ ಬೇರೆ ಬೇರೆ ಕಡೆ ಓಡಾಡಿದ್ದಾರೆ.
ಉಳಿದಿಬ್ಬರು ಜ್ಯುಬಿಲಿಯಂಟ್ ಕಾರ್ಖಾನೆ ಉದ್ಯೋಗಿ, ಸಂಪರ್ಕದಲ್ಲಿರುವವರು, 2ನೇ ಪಾಸಿಟಿವ್ ಕೇಸ್ ಹತ್ತಿರದ ಸಂಬಂಧಿಕರು ನಿಗಾದಲ್ಲಿದ್ದವರು ಪಾಸಿಟಿವ್ ಆಗಿದ್ದಾರೆ, ಓರ್ವರು ದುಬೈನಿಂದ ಮರಳಿದವರು ಎಂದು ಡಿಸಿ ಅಭಿರಾಮ್ ಜಿ. ಶಂಕರ್ ತಿಳಿಸಿದರು.