ಹುಣಸೂರಿನಲ್ಲಿ ಕೈ ಕಾರ್ಯಕರ್ತರಿಂದ ಜಿ.ಟಿ. ದೇವೇಗೌಡ ಕಾರಿಗೆ ಮುತ್ತಿಗೆ
ಮೈಸೂರು, ಮಾರ್ಚ್ 4: ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಕೈ - ತೆನೆ ಅಭ್ಯರ್ಥಿಗಳ ನಡುವೆ ಮಾತಿನ ಚಕಮಕಿ ನಡೆದು ಉಸ್ತುವಾರಿ ಸಚಿವರ ಕಾರಿಗೆ ಮುತ್ತಿಗೆ ಹಾಕಿದ ಘಟನೆ ಮೈಸೂರಿನ ಹುಣಸೂರು ಪಟ್ಟಣದಲ್ಲಿ ನಡೆದಿದೆ. ಇದರ ಪರಿಣಾಮ ಕಾರ್ಯಕ್ರಮವೇ ರದ್ದಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಹಾಗೂ ಶಾಸಕ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ನೇತೃತ್ವದಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಹುಣಸೂರಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಕಾಮಗಾರಿ ಶಂಕು ಸ್ಥಾಪನಾ ಸಮಾರಂಭದಲ್ಲಿ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷ ಏರ್ಪಟ್ಟಿದೆ.

ಕಾರ್ಯಕ್ರಮದ ವೇದಿಕೆಯ ಫ್ಲೆಕ್ಸ್ನಲ್ಲಿ ಡಿಸಿಎಂ ಪರಮೇಶ್ವರ್ ಅವರ ಭಾವಚಿತ್ರವನ್ನು ಹಾಕದೆ, ಸ್ಥಳೀಯ ಜೆಡಿಎಸ್ ಕಾರ್ಯಕರ್ತರ ಫ್ಲೆಕ್ಸ್ ಹಾಕಲಾಗಿದೆ ಎಂದು ತಾಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು ಉದ್ಘಾಟನೆಗೆ ಆಗಮಿಸಿದೆ, ಜಿ.ಟಿ. ದೇವೆಗೌಡರ ಕಾರಿಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಕಾರಿನಿಂದ ಕೆಳಗಿಳಿಯದೆ ನೇರವಾಗಿ ಗುದ್ದಲಿ ಪೂಜೆ ಸ್ಥಳಕ್ಕೆ ತೆರಳಿದ ಜಿಟಿಡಿ, ಗುದ್ದಲಿ ಪೂಜೆ ನೇರವೇರಿಸಿ, ವೇದಿಕೆ ಕಾರ್ಯಕ್ರಮಕ್ಕೆ ಬರದೆ ಹೊರಟು ಹೋದರು. ಹೀಗಾಗಿ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದರು.












Click it and Unblock the Notifications