ನನ್ನ ಅಳಿಯ ಯಾವ ತಪ್ಪೂ ಮಾಡಿಲ್ಲವೆಂದ ಡಿಕೆಶಿ ಮಾವ ತಿಮ್ಮಯ್ಯ
ಮೈಸೂರು, ಸೆಪ್ಟೆಂಬರ್ 4: "ನನ್ನ ಅಳಿಯ ಯಾವ ತಪ್ಪನ್ನು ಮಾಡಿಲ್ಲ. ಅವನ ಬಂಧನದ ಹಿಂದೆ ಬಿಜೆಪಿ ಕೈವಾಡವಿದೆ" ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಾವ ತಿಮ್ಮಯ್ಯ ಮೈಸೂರಿನಲ್ಲಿ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾವು ಎಲ್ಲಾ ದಾಖಲೆ ಪತ್ರಗಳನ್ನು ಒದಗಿಸಿದ್ದೇವೆ. ಕರೆದಾಗಲೆಲ್ಲಾ ವಿಚಾರಣೆಗೆ ಹಾಜರಾಗಿದ್ದಾರೆ. ಡಿ.ಕೆ.ಶಿವಕುಮಾರ್ ಓಡಿ ಹೋಗುತ್ತಿದ್ರಾ?. ಬಿಜೆಪಿಯವರು ಪ್ಲಾನ್ ಮಾಡಿ ಬಂದಿಸಿದ್ದಾರೆ. ನಾಲ್ಕು ದಿನದಿಂದ ವಿಚಾರಣೆಗೆ ಸಹಕರಿಸಿದ್ದಾರೆ. ಅಷ್ಟಾದರೂ ಉದ್ದೇಶಪೂರ್ವಕವಾಗಿ ಅವರನ್ನು ಬಂಧಿಸಿದ್ದಾರೆ. 8.59 ಕೋಟಿ ಹಣಕ್ಕೂ ಇಡಿಗೂ ಸಂಬಂಧ ಇಲ್ಲ" ಎಂದರು.

"ನವದೆಹಲಿಯಲ್ಲಿ ಸಿಕ್ಕ ಹಣ ನಮ್ಮದೇ ಅಂತ ಬೇರೆಯವರು ಒಪ್ಪಿಕೊಂಡಿದ್ದಾರೆ, ಅದಕ್ಕೆ ತೆರಿಗೆಯನ್ನೂ ಕಟ್ಟಿದ್ದಾರೆ. ಆದರೂ ಬಂದಿಸಿರುವುದು ರಾಜಕೀಯ ಪ್ರೇರಿತ ಎನ್ನುವುದು ಜನರಿಗೆ ಗೊತ್ತಾಗಲಿದೆ. ನನ್ನ ಅಳಿಯನಿಗೆ ಒಳ್ಳೆಯದಾಗಲಿ. ಅವರು ಇವೆಲ್ಲದರಿಂದ ಹೊರಬರುವ ವಿಶ್ವಾಸ ಇದೆ" ಎಂದರು.
ಕೈ ಪಕ್ಷದ ಪ್ರಬಲ ನಾಯಕ ಡಿಕೆ ಶಿವಕುಮಾರ್ ಅವರನ್ನು ನಿನ್ನೆ ರಾತ್ರಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ. ರಾತ್ರಿಯಿಂದಲೇ ಡಿಕೆಶಿ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕನಕಪುರ, ರಾಮನಗರ, ಮಂಡ್ಯದಲ್ಲಿ ಪ್ರತಿಭಟನೆ ಕಾವೇರಿದೆ. ಟೈರ್ ಹಾಗೂ ಬಸ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications