ಸುಳ್ಳು ಹೇಳಿ ಬೋಳು ಹೊಡೆಸಿದರು! ಆಮೇಲೆ ಪರಾರಿಯಾದರು
ಸೂರು, ಮೇ 27: ಚುನಾವಣೆ ಸಮಯದಲ್ಲಿ ಪಕ್ಷ ಪಕ್ಷಗಳ ಮೇಲೆ, ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್ ಕಟ್ಟುವುದು ನಡೆದೇ ಇದೆ. ಎಷ್ಟು ಕಡಿವಾಣ ಹಾಕಿದರೂ ಯಾವುದೋ ಒಂದು ರೀತಿ ಇದು ನಡೆಯುತ್ತಲೇ ಇರುತ್ತದೆ. ಬೆಟ್ಟಿಂಗ್ ನಲ್ಲಿ ಹಣ, ಒಡವೆ, ಜಮೀನು ಹೀಗೆ ಹಲವು ವಸ್ತುಗಳನ್ನು ಪಣಕ್ಕಿಡುತ್ತಾರೆ. ಅದರೆ ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಳಿ ಬಿಜೆಪಿ ಅಭಿಮಾನಿಯೊಬ್ಬರು ತಮ್ಮ ತಲೆಗೂದಲನ್ನೇ ಬೆಟ್ಟಿಂಗ್ ಕಟ್ಟಿದ್ದರು. ತಾನು ಬೆಂಬಲಿಸುವ ಪಕ್ಷ ಸೋತರೆ ಬೋಳು ಹೊಡೆಸುವುದಾಗಿ ಪ್ರತಿಜ್ಞೆಯನ್ನೂ ಮಾಡಿದ್ದರು.
ಹಾಗೆಯೇ ಫಲಿತಾಂಶದ ದಿನವೂ ಬಂತು. ಫಲಿತಾಂಶ ಪ್ರಕಟವಾದ ನಂತರ ತಮ್ಮ ಪಕ್ಷ ಸೋತಿದೆ ಎಂಬ ಸುದ್ದಿಯೂ ಅವರಿಗೆ ಬಂತು. ಕಾಂಗ್ರೆಸ್ ಕಾರ್ಯಕರ್ತರು ಸೇರಿ ಅವರಿಗೆ ಬೋಳು ಹೊಡೆಸಿದ್ದರು ಕೂಡ. ಆದರೆ ವಿಷಯ ಬೇರೆಯೇ ಆಗಿತ್ತು.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ನಿವಾಸಿ ಚಿಕ್ಕನಾಯಕ ಎಂಬುವರು ಈ ವಿಷಯದಲ್ಲಿ ಮೋಸ ಹೋಗಿದ್ದರು. ಬಿಜೆಪಿ ಕಟ್ಟಾ ಅಭಿಮಾನಿಯಾಗಿರುವ ಚಿಕ್ಕನಾಯಕ, ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಗೆಲ್ಲಲ್ಲಿದ್ದಾರೆಂದು ಕಾಂಗ್ರೆಸ್ ಕಾರ್ಯಕರ್ತರ ಬಳಿ ಬೆಟ್ಟಿಂಗ್ ಕಟ್ಟಿದ್ದಾರೆ. ಆದರೆ ಕಾಂಗ್ರೆಸ್ ಕಾರ್ಯಕರ್ತರ ಆತುರದ ನಿರ್ಧಾರದಿಂದ, ಫಲಿತಾಂಶದ ದಿನ 4 ಗಂಟೆಯಲ್ಲೇ ಧ್ರುವನಾರಾಯಣ್ ಗೆದ್ದಾಯ್ತು ಎಂದು ಸುಳ್ಳು ಮಾಹಿತಿ ನೀಡಿ ಇವರ ತಲೆಕೂದಲು ತೆಗೆಸಿ ಊರೆಲ್ಲ ಸುತ್ತುವಂತೆ ತಿಳಿಸಿದ್ದಾರೆ.

ಈ ವೇಳೆ ಸೋತೆನೆಂದು ತಿಳಿದ ಚಿಕ್ಕನಾಯಕ, ಬೋಳು ಹೊಡೆಸಿಕೊಂಡು ಊರಿಡೀ ಸುತ್ತಿದ್ದಾರೆ. ಇದಾದ ಬಳಿಕ ತಾನು ಪರ ವಹಿಸಿದ್ದ ಪಕ್ಷವೇ ಗೆದ್ದಿರುವುದಾಗಿ ಗೊತ್ತಾಗಿ ಪೇಚಿಗೆ ಸಿಲುಕಿದ್ದಾರೆ. ನಂತರ ಹೀಗೆ ಮಾಡಿದವರ ವಿರುದ್ಧ ಗರಂ ಆಗಿ ತನಗೆ ಬೋಳು ಹೊಡೆಸಿದವರ ಮನೆ ಮನೆ ಸುತ್ತಾಡಿ ಆಕ್ರೋಶ ಹೊರಹಾಕಿದ್ದಾರೆ. ಕಾರ್ಯಕರ್ತರು ಮಾತ್ರ ಇವರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾರೆ. ಕಳೆದೆರಡು ಬಾರಿಯೂ ಇದೇ ರೀತಿ ಚಿಕ್ಕನಾಯಕ ಬಾಜಿ ಚಾಲೆಂಜ್ ಮಾಡಿದ್ದು, ಆಗಲೂ ಇದೇ ರೀತಿ ಸೋತು ಬೋಳು ಹೊಡೆಸಿದ್ದರು. ಎನ್ನಲಾಗಿದೆ.












Click it and Unblock the Notifications