ಯದುರಾಯರಿಂದ ಯದುವೀರ್ ವರೆಗೆ, ತಿಳಿಯಲೇಬೇಕಾದ ರಾಜಮನೆತನದ ಇತಿಹಾಸ
ಮೈಸೂರು, ಅಕ್ಟೋಬರ್.04: ಮೈಸೂರು ಎಂದರೆ ಸಾಕು ಥಟ್ಟನೆ ನೆಪಾಗುವುದು ರಾಜರ ಆಳ್ವಿಕೆ. ಈ ಹಿಂದೆ ಮೈಸೂರು ಹೇಗಿತ್ತು? ಅದರ ಮೂಲ ಇತಿಹಾಸವೇನು? ಎಂಬುದು. ಮೈಸೂರಿನ ಉದ್ದಗಲಕ್ಕೂ ಮಿಂಚುತ್ತಾ ಮೆರೆದಾಡಿದ ದೊರೆಗಳ ಸಂಖ್ಯೆ ಗಣನೀಯ.
ಕೆಲವರು ಮಿಂಚಿ ಅದೃಶ್ಯರಾದರೆ, ಕೆಲವರು ತಮ್ಮ ಸೀಮೆಯನ್ನು ವಿಸ್ತರಿಸಿಕೊಂಡು ನೆರೆಯ ಪುಟ್ಟ ಪಾಳೇಗಾರರುಗಳಿಂದ ನಜರ್ ಒಪ್ಪಿಸಿಕೊಂಡು, ಕಪ್ಪಕಾಣಿಕೆ ಸ್ವೀಕರಿಸುತ್ತಾ, ನೆಲೆಯೂರಿದ್ದರು. ಇನ್ನು ಕೆಲವರು ಇನ್ಯಾವನೋ ದೂರದ ಹೆಚ್ಚು ಶಕ್ತಿಶಾಲಿ ಮಹಾರಾಜನ ಪ್ರತಿನಿಧಿಯಂತೆ, ಆಶ್ರಿತ ದೊರೆಗಳೊಂದಿಗೆ ನಿರಂತರ ಕಾದಾಡುವಂತಹ ರಾಜರ ಸಂಖ್ಯೆಯೇ ಹೆಚ್ಚು.
ಇಂಥಹ ಮೈಸೂರಿನ ಇತಿಹಾಸದಲ್ಲಿ ಕೆಲವೊಂದು ಗಟ್ಟಿ ಅಂಶಗಳು ಗಮನ ಸೆಳೆಯುತ್ತದೆ. ಸ್ವಾತಂತ್ರ್ಯ ಪೂರ್ವದವರೆಗಿನ ಮೈಸೂರು ರಾಜಾಡಳಿತದ ದಿನಗಳನ್ನು ಇತಿಹಾಸದ ಪುಟಗಳಲ್ಲಿ ನೋಡುವುದಾದರೆ ಸುಮಾರು 550 ವರ್ಷಗಳ ಕಾಲ ಸುಮಾರು 25 ಮಹಾರಾಜರು ಮೈಸೂರು ಸಂಸ್ಥಾನವನ್ನು ಆಳಿದ ಬಗ್ಗೆ ತಿಳಿದು ಬರುತ್ತದೆ.
ಮೈಸೂರು ರಾಜಮನೆತನದ ಆಳ್ವಿಕೆ, ಪೌರಾಣಿಕ ಹಿನ್ನಲೆಯನ್ನು ಗಮನಿಸುವುದಾದರೆ, ಕೆಲವೆಡೆ ಸಿಗುವ ಮಾಹಿತಿ ಆಧಾರದಲ್ಲಿ ಹೇಳುವುದಾದರೆ ಚಂದ್ರವಂಶಕ್ಕೆ ಸೇರಿದ ಗೌತಮ ಗೋತ್ರದ 'ರಾಜಭೂಪ' ಎಂಬ ರಾಜ ಹಿಂದಿನಿಂದಲೂ ಇದ್ದನೆಂದು ಹೇಳಲಾಗುತ್ತಿದೆ.
ಆದರೆ ಚರಿತ್ರೆಯಲ್ಲಿ ಇದಕ್ಕೆ ಆಧಾರ ಸಿಗುವುದಿಲ್ಲ. ಆದರೆ 1399ರಿಂದ ಈಚೆಗೆ ಚರಿತ್ರೆಯ ಸ್ಪಷ್ಟ ಚಿತ್ರಣವನ್ನು ನಾವು ಕಾಣಬಹುದಾಗಿದೆ. ಮುಂದೆ ಓದಿ...

1399 ರಿಂದ ಆರಂಭ
ಮೈಸೂರು ಮಹಾರಾಜರು ಸುಮಾರು 550 ವರ್ಷಗಳ ಕಾಲ ಆಡಳಿತ ನಡೆಸುವ ಮೂಲಕ ಚರಿತ್ರೆಯಲ್ಲಿ ಸುಧೀರ್ಘ ಕಾಲ ಆಡಳಿತ ನಡೆಸಿದ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಮೈಸೂರು ರಾಜರ ಆಡಳಿತಾವಧಿ ಚರಿತ್ರೆ ಪ್ರಕಾರ 1399ರಿಂದ ಆರಂಭವಾಗುತ್ತದೆ.
ಯದುರಾಯರನ್ನು ಈ ವಂಶದ ಸ್ಥಾಪಕ ಅರಸರೆಂದು ಕರೆಯಲಾಗುತ್ತದೆ. 1399ರಿಂದ 1423ರವರೆಗೆ ಇವರು ಆಳ್ವಿಕೆ ನಡೆಸಿದರು.
ಇದಾದ ಬಳಿಕ 1423 ರಿಂದ 1459ರವರೆಗೆ ಒಂದನೇ ಹಿರಿಯ ಬೆಟ್ಟದ ಚಾಮರಾಜ ಒಡೆಯರ್, 1459ರಿಂದ 1478ರವರೆಗೆ ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ಪುತ್ರ ತಿಮ್ಮರಾಜ ಒಡೆಯರ್ ಆಡಳಿತ ನಡೆಸಿದರು.
1478ರಿಂದ 1513ರವರೆಗೆ ಎರಡನೇ ಹಿರಿಯ ಚಾಮರಾಜ ಒಡೆಯರ್, 1513 ರಿಂದ 1553ರವರೆಗೆ ಮೂರನೇ ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ಆಡಳಿತ ನಡೆಸಿದರು. 1553ರಿಂದ 1572ರವರೆಗೆ ಆಡಳಿತ ನಡೆಸಿದ ಎರಡನೆಯ ತಿಮ್ಮರಾಜ ಒಡೆಯರ್ ಮೈಸೂರನ್ನು ವಿಸ್ತರಿಸಿದರು.

ದಸರಾ ಆಚರಣೆ ಜಾರಿಗೆ ಬಂತು
1572ರಿಂದ1576ರವರೆಗೆ ನಾಲ್ಕನೇ ಬೋಳಚಾಮರಾಜ ಒಡೆಯರ್ ಆಡಳಿತ ನಡೆಸಿದರು. ಐದನೇ ಬೆಟ್ಟದ ಚಾಮರಾಜ ಒಡೆಯರ್ 1576ರಿಂದ 1578ರವರೆಗೆ ಕೇವಲ ಎರಡು ವರ್ಷಗಳ ಕಾಲ ಆಡಳಿತ ನಡೆಸಿದರಲ್ಲದೆ, ವೈರಾಗ್ಯ ತಾಳಿದ ಅವರು ಆಡಳಿತವನ್ನು ತನ್ನ ಸಹೋದರರಿಗೆ ವಹಿಸಿಕೊಟ್ಟರು.
ಆ ನಂತರ ಆಡಳಿತ ವಹಿಸಿಕೊಂಡ ಒಂದನೇ ರಾಜ ಒಡೆಯರ್ 1578ರಿಂದ 1617ರವರೆಗೆ ಆಡಳಿತ ನಡೆಸಿದರು. ಇವರ ಕಾಲದಲ್ಲಿ ಅಂದರೆ 1610ರಲ್ಲಿ ರಾಜಧಾನಿಯನ್ನು ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ವರ್ಗಾಯಿಸಲಾಯಿತಲ್ಲದೆ, ದಸರಾ ಆಚರಣೆಯೂ ಜಾರಿಗೆ ಬಂದಿತು.
1617ರಿಂದ 1637ರವರೆಗೆ ಆರನೇ ಚಾಮರಾಜ ಒಡೆಯರ್, 1638ರಿಂದ 1659 ರಣಧೀರ ಕಂಠೀರವ ನರಸರಾಜ ಒಡೆಯರ್ ಆಡಳಿತ ನಡೆಸಿದರು. 1659 ರಿಂದ 1672ರವರೆಗೆ ಆಡಳಿತ ನಡೆಸಿದ ದೊಡ್ಡ ದೇವರಾಜ ಒಡೆಯರ್ ಪರಾಕ್ರಮಿಯಾಗಿದ್ದರು.
1672ರಿಂದ 1704ರವರೆಗೆ ರಾಜ್ಯಭಾರ ಮಾಡಿದ ಚಿಕ್ಕದೇವರಾಜ ಒಡೆಯರ್ ಪಂಡಿತರೂ, ಮಹಾಪರಾಕ್ರಮಿಯೂ ಆಗಿದ್ದರು. ನಂತರ ಚಿಕ್ಕದೇವರಾಜ ಒಡೆಯರ್ ಪುತ್ರರಾದ ಕಂಠೀರವ ಮಹಾರಾಜ ಒಡೆಯರ್ 1704ರಿಂದ 1713ರವರೆಗೆ ಆಡಳಿತ ನಡೆಸಿದರು.

ಚಾಮರಾಜ ಒಡೆಯರ್
ಕಂಠೀರವ ಮಹಾರಾಜ ಒಡೆಯರ್ ಇವರ ಪುತ್ರ ದೊಡ್ಡ ಕೃಷ್ಣರಾಜ ಒಡೆಯರ್ ಕೇವಲ ಹನ್ನೆರಡು ವರ್ಷಕ್ಕೆ ಪಟ್ಟಕ್ಕೇರಿದರು. 1714 ರಿಂದ 1732ರವರೆಗೆ ಆಡಳಿತ ನಡೆಸಿದರು.
ಇವರ ಕಾಲದಲ್ಲಿ ನಿಜಾಂ, ಆರ್ಕಾಟ್ ನವಾಬ್, ಸಿರಾ ಕಡಪ, ಕರ್ನೂಲ್, ಸವಾನೂರ್ ಮತ್ತು ಇಕ್ಕೇರಿ ರಾಜರು ಒಟ್ಟಾಗಿ ಯುದ್ಧಕ್ಕೆ ಬಂದಿದ್ದರಿಂದ ಒಂದುಕೋಟಿ ಕಾಣಿಕೆ ನೀಡಿ ಸಂಧಾನ ಮಾಡಿಕೊಳ್ಳಲಾಯಿತು.
ದೊಡ್ಡ ಕೃಷ್ಣರಾಜ ಒಡೆಯರ್ ಮಕ್ಕಳಿಲ್ಲದ ಕಾರಣ ಚಾಮರಾಜ ಒಡೆಯರ್ ಅವರನ್ನು ದತ್ತು ತೆಗೆದುಕೊಂಡರು. ಚಾಮರಾಜ ಒಡೆಯರ್ 1732ರಿಂದ 1734ರವರೆಗೆ ರಾಜ್ಯವಾಳಿದರು.
ಚಾಮರಾಜ ಒಡೆಯರ್ ಬಳಿಕ ಎರಡನೇ ಇಮ್ಮಡಿ ಕೃಷ್ಣರಾಜ ಒಡೆಯರ್ ಪಟ್ಟಕ್ಕೆ ಬಂದು 1734ರಿಂದ 1766ರವರೆಗೆ ರಾಜ್ಯಾಭಾರ ನಡೆಸಿದರು. ಇವರ ಕಾಲದಲ್ಲಿ ಶತ್ರುಗಳ ಸೈನ್ಯ ಆಗಾಗ್ಗೆ ಯುದ್ಧ ಸಾರುತ್ತಿದ್ದುದನ್ನು ಗಮನಿಸಿ ಫ್ರೆಂಚರ ಸಹಾಯ ಪಡೆದು ಮೈಸೂರಿನ ಗಡಿಯನ್ನು ಭದ್ರಪಡಿಸಿಕೊಂಡರು.
ಇಮ್ಮಡಿ ಕೃಷ್ಣರಾಜ ಒಡೆಯರ್ ನಂತರ ನವಾಬ್ ಹೈದರಾಲಿ ಖಾನರ ಸಲಹೆ ಮೇರೆಗೆ ಚಲುವಾಜಮ್ಮಣ್ಣಿ ಅವರು ನಂಜರಾಜ ಒಡೆಯರ್ ಗೆ ಪಟ್ಟ ಕಟ್ಟಿದರು ಅವರು 1766ರಿಂದ 1770ರವರೆಗೆ ರಾಜಭಾರ ನಡೆಸಿದರು.

ಕಾಲವಾದ ನಾಲ್ವಡಿ ಕೃಷ್ಣರಾಜ ಒಡೆಯರ್
1770 ರಿಂದ 1776ರವರೆಗೆ ಎಂಟನೇ ಬೆಟ್ಟದ ಚಾಮರಾಜ ಒಡೆಯರ್ ಆಡಳಿ ನಡೆಸಿದರಾದರೂ ಹೈದರಾಲಿಯೇ ಸರ್ವಾಧಿಕಾರಿಯಾಗಿದ್ದನು. 1776ರಿಂದ 1796ರವರೆಗೆ ಒಂಬತ್ತನೇ ಖಾಸಾ ಚಾಮರಾಜ ಒಡೆಯರ್ ಆಡಳಿತ ನಡೆಸಿದರು. ಇವರ ಕಾಲದಲ್ಲಿ ಬಹಳಷ್ಟು ಐತಿಹಾಸಿಕ ಘಟನೆಗಳು ನಡೆದವು.
ಟಿಪ್ಪು ಸುಲ್ತಾನ್ ರಾಜ ಕುಟುಂಬವನ್ನು ಅರಮನೆಯಿಂದ ಸ್ಥಳಾಂತರಿಸಿದನು. ಆಂಗ್ಲರೊಡನೆ ನಡೆದ ಯುದ್ಧದಲ್ಲಿ ಟಿಪ್ಪು ಮೃತಪಟ್ಟ ಬಳಿಕ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಲಾಯಿತು.
ನಂತರ ಮೂರನೇ ಮುಮ್ಮಡಿ ಕೃಷ್ಣರಾಜ ಒಡೆಯರ್ 1799ರಿಂದ 1863ರವರೆಗೆ ಆಡಳಿತ ನಡೆಸಿದರು. 1863ರಿಂದ 1894ರವರೆಗೆ ರಾಜ್ಯವಾಳಿದ ಚಾಮರಾಜೇಂದ್ರ ಒಡೆಯರ್ ಅವರು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ದತ್ತುಪುತ್ರನಾಗಿದ್ದು, 18ನೇ ವಯಸ್ಸಲ್ಲೇ ರಾಜ್ಯಭಾರವನ್ನು ವಹಿಸಿಕೊಂಡಿದ್ದರು.
1895ರಲ್ಲಿ, ಕೇವಲ 10 ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಹಾರಾಣಿ ವಾಣಿ ವಿಲಾಸದವರು ರಿಜೇಂಟರಾಗಿ ಆಡಳಿತ ನಿರ್ವಹಣೆ ಮಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ 1940ರಲ್ಲಿ ಕಾಲವಾದರು. ಇವರ ಆಡಳಿತದ ವೈಖರಿಯನ್ನು ಕಂಡು ರಾಜರ್ಷಿ ಕರೆಯಲಾಗಿತ್ತು.

ಜಯಚಾಮರಾಜೇಂದ್ರ ಒಡೆಯರ್ ನಿಧನ
1919ರಲ್ಲಿ ಜನಿಸಿದ ಜಯಚಾಮರಾಜೇಂದ್ರ ಒಡೆಯರ್ 1940ರಲ್ಲಿ ಪಟ್ಟಾಭಿಷೇಕ ನಡೆಯಿತು. ಇವರು ರಾಜ್ಯಭಾರ ವಹಿಸಿಕೊಂಡ ಏಳು ವರ್ಷಕ್ಕೆ ಭಾರತ ಸ್ವಾತಂತ್ರ್ಯವಾಯಿತು. ಆ ನಂತರ 1950ರಲ್ಲಿ ಜಾರಿಗೆ ಬಂದ ರಾಜ್ಯಾಂಗ ರಚನೆಯ ಪ್ರಕಾರ ರಾಜತ್ವಕೊನೆಗೊಂಡು ಅಖಂಡ ಭಾರತದಲ್ಲಿ ಲೀನವಾಯಿತು.
ಅಲ್ಲಿಗೆ ಸುಮಾರು 550 ವರ್ಷಗಳ ಮೈಸೂರು ರಾಜರ ರಾಜ್ಯಭಾರವೂ ಕೊನೆಗೊಂಡಿತು. ಆ ನಂತರ 1950ರಿಂದ 1956ರವರೆಗೆ ಜಯಚಾಮರಾಜೇಂದ್ರ ಒಡೆಯರ್ ಮೈಸೂರಿನ ಗೌವರ್ನರ್ ಆಗಿ ಸೇವೆ ಸಲ್ಲಿಸಿದರು. 1964ರಲ್ಲಿ ಮದ್ರಾಸಿನ ರಾಜ್ಯಪಾಲರಾಗಿ ನೇಮಕಗೊಂಡು ಕೆಲವು ಕಾಲ ಆ ಹುದ್ದೆಯಲ್ಲೂ ಇದ್ದರು.
ಇದಾದ ಬಳಿಕ 1974ಕ್ಕೆ ಜಯಚಾಮರಾಜೇಂದ್ರ ಒಡೆಯರ್ ನಿಧನರಾದರು.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಜಯಚಾಮರಾಜೇಂದ್ರ ಒಡೆಯರ್ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರಾಜಮನೆತನದ ಭಾಗವಾಗಿ ಮುಂದುವರೆದರು. ಇವರು ಸಹ ತಮ್ಮ 60ರವಯಸ್ಸಿನವರೆಗೂ ರಾಜರಾದರೂ ಸಾಮಾನ್ಯನಾಗಿ ಇರುವುದು ಹೇಗೆ ? ಜನರ ವಿಶ್ವಾಸ ಗಳಿಸುವುದು ಹೇಗೆ ? ಎಂದು ತೋರಿಸಿಕೊಟ್ಟ ಮಹಾರಾಜರು ಇವರು.
1996ರಲ್ಲಿ ಜೆ.ಎಚ್. ಪಟೇಲರ ಸರ್ಕಾರ, ಒಡೆಯರ ಖಾಸಗಿ ಸ್ವತ್ತಾದ ಬೆಂಗಳೂರು ಮತ್ತು ಮೈಸೂರು ಅರಮನೆಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಮುಂದಾದಾಗ, ಆ ಆದೇಶವನ್ನು ಕೋರ್ಟಿನಲ್ಲಿ ಪ್ರಶ್ನಿಸಿದ ಒಡೆಯರ್, ಅರಮನೆಗಳನ್ನು ತಮ್ಮ ಸ್ವಾಧೀನಕ್ಕೆ ಪಡೆಯಲು ಬದುಕಿರುವ ತನಕ ಹೋರಾಡಿದರು. 2013ರಲ್ಲಿ ಕಾಲವಾದರು.
ಇದಾದ ಬಳಿಕ ರಾಜಮಾತೆ ಪ್ರಮೋದಾದೇವಿಯವರೇ ಅರಮನೆಯ ಎಲ್ಲವನ್ನು ನಿಭಾಯಿಸಿದರು. ಇವರಿಗೆ ಮಕ್ಕಳಿಲ್ಲದ ಕಾರಣ 2015ರಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರಿನ ನೂತನ ಯದುವಂಶದ ಉತ್ತರಾಧಿಕಾರಿಯಾಗಿ ಸ್ವೀಕರಿಸಲಾಯಿತು.

ಮೊದಲ ದಸರಾಗೆ ಸಜ್ಜಾದ ಆದ್ಯವೀರ್
ಈ ಬಾರಿಯ ದಸರಾ ವಿಶೇಷವಾಗಿದೆ. ಯಾಕೆಂದರೆ ಯದುವಂಶದ ಆದ್ಯವೀರ್ ನರಸಿಂಹರಾಜ ಒಡೆಯರ್ ಕೂಡ ತನ್ನ ಮೊದಲ ದಸರಾ ಹಬ್ಬಕ್ಕೆ ತಯಾರಾಗುತ್ತಿದ್ದಾರೆ.
ಮೈಸೂರಿನ ಸಂಸ್ಥಾನದ ಯದುವಂಶಕ್ಕೆ ಸುಮಾರು 6 ದಶಕಗಳಿಂದ ಸಂತಾನ ಇರಲಿಲ್ಲ. ಆದರೆ ಕಳೆದ ವರ್ಷ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ದಂಪತಿಗೆ ಆದ್ಯವೀರ್ ಜನಿಸುವ ಮೂಲಕ ರಾಜಮನೆತನಕ್ಕೆ ಸಂತಾನ ಪ್ರಾಪ್ತಿಯಾಗಿತ್ತು.
ಈ ಸಂತಸವನ್ನು ಇಡೀ ನಾಡಿನ ಜನತೆಯೂ ಸಂಭ್ರಮಿಸಿತ್ತು. ಆದ್ಯವೀರ್ ಡಿಸೆಂಬರ್ 6, 2017ರಲ್ಲಿ ಜನಿಸಿದ್ದರು. ಆದ್ದರಿಂದ ಆದ್ಯವೀರ್ ಗೆ ಇದೇ ಮೊದಲ ದಸರಾವಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications