ಕಿರುಕುಳ ಆರೋಪ, ಕಾಫಿ ಡೇ ನೌಕರನಿಂದ ಮೈಸೂರಲ್ಲಿ ಆತ್ಮಹತ್ಯೆ ಬೆದರಿಕೆ
ಮೈಸೂರು, ಅಕ್ಟೋಬರ್ 11: ಮ್ಯಾನೇಜರ್ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪ ಮಾಡಿ, ಕಟ್ಟಡ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ವ್ಯಕ್ತಿಯನ್ನು ಮೈಸೂರಿನ ದೇವರಾಜ ಠಾಣೆ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ. ಕಟ್ಟಡ ಮೇಲಿದ್ದ ವ್ಯಕ್ತಿಯನ್ನು ಕೆಳಗಿಳಿಯುವಂತೆ ಮನವೊಲಿಸುವಲ್ಲಿ ಕಾಫಿ ಡೇ ಸಿಬ್ಬಂದಿ ಯಶಸ್ವಿಯಾಗಿದ್ದರಿಂದ ಅನಾಹುತ ತಪ್ಪಿದೆ.
ಮಂಡ್ಯ ಜಿಲ್ಲೆಯ ಮೂಲದವರಾದ ಯೋಗೇಶ್ ಆತ್ಮಹತ್ಯೆಗೆ ಯತ್ನಿಸಿದವರು. ಇವರು ಮೈಸೂರು ನಗರದ ದೇವರಾಜ ರಸ್ತೆಯಲ್ಲಿರುವ ಕಾಫಿ ಡೇಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸೆಲ್ಫಿ ತೆಗೆದುಕೊಳ್ಳುತ್ತಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಮ್ಯಾನೇಜರ್ ರಿಂದ ತನಗೆ ಕಿರುಕುಳ ಆಗುತ್ತಿದೆ ಎಂಬುದು ಅವರ ಆರೋಪವಾಗಿತ್ತು.

ದೇವರಾಜ ರಸ್ತೆಯಲ್ಲಿರುವ ಕಾಫಿ ಡೇ ಕಟ್ಟಡದ ಮೇಲಿಂದ ಜಿಗಿಯುತ್ತೇನೆ ಎಂದು ಪಟ್ಟು ಹಿಡಿದಿದ್ದ ಯೋಗೇಶ್ ಅಲ್ಲಿಂದ ಕೆಳಗೆ ಬರುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮ್ಯಾನೇಜರ್ ರಿಂದ ಕಿರುಕುಳ ಎಂದು ಹೇಳಿದ್ದಾರೆ ವಿನಾ ಯಾವ ರೀತಿಯ ಕಿರುಕುಳ ಎಂಬುದನ್ನು ಯೋಗೇಶ್ ಬಹಿರಂಗ ಪಡಿಸಿಲ್ಲ. ಈ ಹಿಂದೆ ಕೂಡ ಬೆಂಗಳೂರಿನ ಕಾಫಿ ಡೇ ಮಳಿಗೆಯೊಂದರಲ್ಲಿ ಸಿಬ್ಬಂದಿಯಿಂದ ಇದೇ ರೀತಿ ಆರೋಪ ಕೇಳಿಬಂದಿತ್ತು.












Click it and Unblock the Notifications