ಅಪ್ಪನ ಹೆಗಲ ಮೇಲೆ ಕೂತು ದಸರಾ ನೋಡ್ತಿದ್ದೆ: ಬಾಲ್ಯದ ನೆನಪು ಮೆಲುಕು ಹಾಕಿದ ಸಿಎಂ ಸಿದ್ದರಾಮಯ್ಯ
ಮೈಸೂರು, ಅಕ್ಟೋಬರ್, 15: ನಾನು ಚಿಕ್ಕವನಾಗಿದ್ದಾಗ ನಮ್ಮಪ್ಪನ ಹೆಗಲ ಮೇಲೆ ಕೂತು ದಸರಾ ನೋಡುತ್ತಿದ್ದೆ. ಮಹಾರಾಜರಿಗೆ ಕೈ ಮುಗಿದಿದ್ದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಚಾಮುಂಡಿಬೆಟ್ಟದಲ್ಲಿ ಭಾನುವಾರ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಹತ್ತು ದಿನಗಳ ನಾಡಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು. ದೊಡ್ಡವನಾದ ಮೇಲೆ ಪ್ರತಿವರ್ಷ ದಸರಾ ನೋಡಿದ್ದೇನೆ. ವಸ್ತುಪ್ರದರ್ಶನಕ್ಕೆ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ದಸರಾ ನಮ್ಮ ಸಂಸ್ಕೃತಿ ಪ್ರತೀಕ. ಹಾಗಾಗಿ ಈ ಮಹೋತ್ಸವ ಸದಾ ಕಾಯಬೇಕು ಎಂದು ಆಶಿಸಿದರು.

ನಾಡಹಬ್ಬಕ್ಕೆ ದೊಡ್ಡ ಇತಿಹಾಸ ಇದೆ. ಇದು ನವರಾತ್ರಿ ಹಬ್ಬ. 10ನೇ ದಿನ ಜಂಬೂಸವಾರಿ ನಡೆಯುತ್ತದೆ. ದಸರಾ ಅಂದಿಗೆ ಮುಕ್ತಾಯಗೊಳ್ಳುತ್ತದೆ. ವಿಜಯನಗರ ಕಾಲದಿಂದ ದಸರಾ ಆಚರಣೆಯಲ್ಲಿದೆ. ನಂತರ ಮೈಸೂರು ಅರಸರು ಇದನ್ನು ಮುಂದುವರಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್ ಶ್ರೀರಂಗಪಟ್ಟಣದಿಂದ ಶುರು ಮಾಡಿದರು. ಇದೀಗ ರಾಜ್ಯ ಸರ್ಕಾರ ನಾಡಹಬ್ಬವಾಗಿ ಆಚರಿಸುತ್ತಿದೆ. ಇದು ವಿಶ್ವ ವಿಖ್ಯಾತ ದಸರಾ ಎಂದು ಹೆಸರುವಾಸಿ ಆಗಿದೆ ಎಂದರು.
ಸಮಾಜದಲ್ಲಿ ಜಾತಿ ತಾರತಮ್ಯ ಇರಬಾರದು. ಎಲ್ಲರನ್ನೂ ಗೌರವ ಪ್ರೀತಿಯಿಂದ ಕಾಣಬೇಕಿದೆ. ಭಾರತದ ಸಂವಿಧಾನ ಕೂಡ ಇದನ್ನೇ ಹೇಳುತ್ತದೆ. ಕಾನೂನಿನ ಅಡಿಯಲ್ಲಿ ಎಲ್ಲರೂ ಒಂದೇ. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಸಂವಿಧಾನದ ಉದ್ದೇಶ ಈಡೇರಿಸುವುದು ಪ್ರತಿ ಸರ್ಕಾರದ ಕರ್ತವ್ಯ. ಈ ನಾಡಿನ ಸಂಪತ್ತು ಎಲ್ಲರಿಗೂ ಹಂಚಿಕೆ ಆಗಬೇಕು. ಅಂಬೇಡ್ಕರ್ ಅವರು ಹೇಳಿದಂತೆ ಜನರಿಗೆ ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕಿದೆ. ಈ ನಿಟ್ಟಿನಲ್ಲಿ ನಾಲ್ಕು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಜನವರಿಯಲ್ಲಿ 5ನೇ ಗ್ಯಾರಂಟಿ ಈಡೇರಿಸಲಾಗುವುದು ಎಂದರು.
ಈ ಬಾರಿ ರಾಜ್ಯದಲ್ಲಿ ಬರ ಇದೆ. ಹಾಗಂತ ಈ ಪರಂಪರೆ ನಿಲ್ಲಬಾರದು ಎಂಬ ಉದ್ದೇಶದಿಂದ ಪಾರಂಪರಿಕ ದಸರಾ ಮಾಡಲಾಗುತ್ತಿದೆ. 42 ಲಕ್ಷ ಹೇಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. 30 ಸಾವಿರ ಕೋಟಿ ನಷ್ಟವಾಗಿದೆ. ಈ ಬಾರಿ ಹಸಿರು ಬರ ಇದೆ. ಕೇಂದ್ರ ಅಧ್ಯಯನದ ತಂಡ ಬಂದು ಹೋಗಿದೆ. ಉತ್ತಮ ಸ್ಪಂದನೆ ಸಿಗುವ ಭರವಸೆ ಇದೆ. ಚಾಮುಂಡಿ ಬಳಿ ಹಿಂಗಾರು ಬರುವಂತೆ ಪ್ರಾರ್ಥನೆ ಮಾಡಿದ್ದೇವೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕನ್ನಡಕ್ಕೆ 50 ವರ್ಷ ಸಂದಿದೆ. ದುಃಖವನ್ನು ದೂರ ಮಾಡುವ ದೇವಿ ಸನ್ನಿಧಾನದಲ್ಲಿ ಇದ್ದೇವೆ. ಇದು ನಮ್ಮ ಸಂಸ್ಕೃತಿ ಬಿಂಬಿಸುವ ಹಬ್ಬ. ಯಾವ ಊರಿಗೆ ಹೋದರೂ ಗ್ರಾಮದೇವತೆ ಇರುತ್ತಾಳೆ. ನಾಡಿನ ದೇವತೆ ಚಾಮುಂಡಿ. ಮಳೆಬೆಳೆ ಆಗಲಿ ಎಂಬುದು ನಮ್ಮ ಉದ್ದೇಶ. ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು. ರಾಜರ ಕಾಲದಿಂದ ಇಂದಿಗೂ ದಸರಾ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಚುನಾವಣೆಗೂ ಮುನ್ನ ನುಡಿದಂತೆ ನಡೆಯಲು ಶಕ್ತಿಕೊಡು ಎಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದೆವು. ಅದರಂತೆ ನಮ್ಮ ಐದು ಗ್ಯಾರಂಟಿ ಯಶಸ್ವಿಯಾಗಿ ನಡೆದಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ದಸರಾ ಉತ್ಸವ ರಾಜರ ಆಡಳಿತದಲ್ಲಿ ಜನಪರ ನಿಲುವಿನೊಂದಿಗೆ ಆರಂಭವಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಜನಪರ ನಿಲುವು ಇತ್ತು. ವಿಶ್ವದಲ್ಲೇ ಮಾದರಿ ಆಡಳಿತ ನೀಡಿದ್ದಾರೆ. ಅವರ ಆಶಯದಂತೆ ನಮ್ಮ ಸರ್ಕಾರ ಸಂವಿಧಾನ ಪೀಠಿಕೆಯನ್ನು ಶಾಲಾ-ಕಾಲೇಜುಗಳಲ್ಲಿ ಬೋಧನೆ ಮಾಡಲು ತಿಳಿಸಿದೆ. ಪ್ರಭಾಪ್ರಭುತ್ವ ದಿನ ಎಂದು ಸರ್ಕಾರ ಘೋಷಿಸಿದೆ. ಇದಕ್ಕೆ ನಾಲ್ವಡಿ ಒಡೆಯರ್ ಆಡಳಿತ ಪ್ರೇರಣೆ. ನುಡಿದಂತೆ ನಡೆಯಲು ನಾವು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ. ನಿಷ್ಠುರವಾದ ನಿರ್ಧಾರಗಳನ್ನು ಸ್ವೀಕರಿಸಿದ್ದೇವೆ ಎಂದರು.
ಈ ವೇಳೆ ಸಂಗೀತ ನಿರ್ದೇಶಕ ಹಂಸಲೇಖ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮೇಯರ್ ಶಿವಕುಮಾರ್, ಸಂಸದ ಪ್ರತಾಪ್ ಸಿಂಹ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಪಶು ಸಂಗೋಪನೆ ಸಚಿವ ಕೆ.ವೆಂಕಟೇಶದ, ಇಂಧನ ಸಚಿವ ಕೆ.ಜೆ.ಜಾರ್ಚ್ ಸೇರಿದಂತೆ ಇತರ ಸಚಿವರು ಹಾಗೂ ಶಾಸಕರು ಹಾಜರಿದ್ದರು.












Click it and Unblock the Notifications