ಕರೆಯದಿದ್ದರೂ ಮೋದಿ ಜೊತೆ ಉದ್ಘಾಟನೆಗೆ ಹೋಗಲಿರುವ ಸಿಎಂ
ಮೈಸೂರು, ಫೆಬ್ರವರಿ 19: ನಗರದಲ್ಲಿ ಇಂದು ಮಧ್ಯಾಹ್ನಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿರುವ ರೈಲು ಮಾರ್ಗ ಉದ್ಘಾಟನೆಯ ಸರ್ಕಾರಿ ಕಾರ್ಯಕ್ರಮದಲ್ಲಿ ಆಹ್ವಾನ ಇಲ್ಲದಿದ್ದರೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಲಿದ್ದಾರೆ.
ಸುದ್ದಿಗಾರರೊಂದಿಗೆ ಈ ವಿಷಯ ಸ್ಪಷ್ಟ ಪಡಿಸಿದ ಮುಖ್ಯಮಂತ್ರಿಗಳು ಮೈಸೂರು-ಬೆಂಗಳೂರು ಜೋಡಿ ರೈಲು ಮಾರ್ಗಕ್ಕೆ ಕೇಂದ್ರಕ್ಕಿಂತ ನಾವೇ ಜಾಸ್ತಿ ಅನುದಾನ ಕೊಟ್ಟಿದ್ದೇವೆ, ಅದೊಂದು ಸರ್ಕಾರಿ ಕಾರ್ಯಕ್ರಮ ಹಾಗಾಗಿ ನಾನು ರೈಲು ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದರು.
In Pics: ಮೈಸೂರಿಗೆ ಆಗಮಿಸಿದ ನರೇಂದ್ರ ಮೋದಿಗೆ ಸ್ವಾಗತ ಕೋರಿದ ಸಿದ್ದರಾಮಯ್ಯ
ಪ್ರಧಾನಿ ಮೋದಿ ಅವರು ಇಂದು ಮೈಸೂರಿನಲ್ಲಿ 'ಹಮ್ ಸಫರ್' ರೈಲು ಲೋಕಾರ್ಪಣೆ ಮತ್ತು ಇಎಸ್ಐ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇವರೆಡೂ ಸರ್ಕಾರಿ ಕಾರ್ಯಕ್ರಮಗಳಾಗಿದ್ದರೂ ಸಹಿತ ಸ್ಥಳೀಯ ಬಿಜೆಪಿ ಸಂಸದರು ಶಿಷ್ಟಾಚಾರ ಪಾಲಿಸದೆ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿರಲಿಲ್ಲ. ಇದು ರಾಜ್ಯ ಕಾಂಗ್ರೆಸ್ ಮುಖಂಡರನ್ನು ಕೆರಳಿಸಿತ್ತು.

ಮುಖ್ಯಮಂತ್ರಿಗಳನ್ನು ಸರ್ಕಾರಿ ಕಾರ್ಯಕ್ರಮಕ್ಕೆ ಕರೆಯದೆ ಬಿಜೆಪಿ ಸಣ್ಣತನ ಪ್ರದರ್ಶಿಸಿದೆ ಎಂದು ಅವರು ಆರೋಪ ಮಾಡಿದ್ದರು.
ಇಂದು ಮೋದಿ ಅವರು ಉದ್ಘಾಟಿಸಲಿರುವ ಹಮ್ ಸಫರ್ ರೈಲು ಮತ್ತು ವಿವಿಧ ರೈಲ್ವೆ ಯೋಜನೆಗಳಿಗೆ ಕರ್ನಾಟಕ ಸರ್ಕಾರವೂ ಶೇ50 ಅನುದಾನ ನೀಡುತ್ತಿದೆ. ಇಂದು ಉದ್ಘಾಟನೆಯಾಗಲಿರುವ ಬೆಂಗಳೂರು-ಮೈಸೂರು ರೈಲ್ವೆಗೆ 990 ಕೋಟಿ ವೆಚ್ಚವಾಗಿದ್ದು, ಇದರಲ್ಲಿ 409 ಕೋಟಿ ಹಣವನ್ನು ರೈಲ್ವೆ ಇಲಾಖೆ ನೀಡಿದ್ದರೆ ರಾಜ್ಯ ಸರ್ಕಾರ 581 ಕೋಟಿ ಅನುದಾನ ನೀಡಿದೆ.
'ಸಮಾವೇಶ ತಾನೆ ಮಾಡ್ಲಿ ಬಿಡ್ರಿ'
ಮೈಸೂರಿನಲ್ಲಿ ಬಿಜೆಪಿ ಸಮಾವೇಶ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಮಾವೇಶ ತಾನೇ ಮಾಡಿಕೊಳ್ಳಲಿ ಎಂದು ಉಡಾಫೆಯಿಂದ ಹೇಳಿದ ಅವರು ಮೈಸೂರು ಭಾಗದಲ್ಲಿ ಬಿಜೆಪಿಗೆ ಬುನಾದಿಯೇ ಇಲ್ಲ. ಈ ಪ್ರಾಂತ್ಯದ ಯಾವ ಜಿಲ್ಲೆಯಲ್ಲಾದರೂ ಬಿಜೆಪಿ ಗೆದ್ದಿದೆಯೇ ತೋರಿಸಿ ನೋಡೋಣ? ಎಂದರು.












Click it and Unblock the Notifications