ಸಿಎಂ ಬದಲಾವಣೆ ಕಾಂಗ್ರೆಸ್ ಸೃಷ್ಟಿಸಿರುವ ಊಹಾಪೋಹ : ಎಸ್.ಟಿ. ಸೋಮಶೇಖರ್
ಮೈಸೂರು, ಆಗಸ್ಟ್, 10: ಸಿಎಂ ಬದಲಾವಣೆ ಕಾಂಗ್ರೆಸ್ ಸೃಷ್ಟಿಸಿರುವ ಊಹಾಪೋಹ ಅಷ್ಟೇ. ಕಾಂಗ್ರೆಸ್ ಕೃಪಾ ಪೋಷಿತನಾಟಕ ಮಂಡಳಿ ಸೃಷ್ಟಿಸಿರುವ ದೊಡ್ಡ ಸುಳ್ಳು ಇದು ಎಂದು ಸಹಕಾರ ಸಚಿವ ಎಸ್ಟಿ ಸೋಮಶೇಖರ್ ಹೇಳಿದರು.
ಸಿಎಂ ಬದಲಾವಣೆ ಕಾಂಗ್ರೆಸ್ ಸೃಷ್ಟಿಸಿರುವ ಊಹಾಪೋಹ ಅಷ್ಟೇ. ಕಾಂಗ್ರೆಸ್ ಕೃಪಾ ಪೋಷಿತನಾಟಕ ಮಂಡಳಿ ಸೃಷ್ಟಿಸಿರುವ ದೊಡ್ಡ ಸುಳ್ಳು ಇದು. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅವರಿಗೆ ಡಿ.ಕೆ.ಶಿವಕುಮಾರ್ ಟೋಪಿ ಹಾಕುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಟೋಪಿ ಹಾಕುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಸಿದ್ದರಾಮೋತ್ಸವದ ಕಿಡಿ ಈಗ ಬೆಂಕಿಯಾಗಿ ಹೊತ್ತಿ ಉರಿಯುತ್ತಿದೆ. ಈ ವಿಚಾರವನ್ನು ಡೈವರ್ಟ್ ಮಾಡಲು ಸಿಎಂ ಬದಲಾವಣೆ ವದಂತಿ ಸೃಷ್ಟಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಮೈಸೂರಿನಲ್ಲಿ ಅರಮನೆ ಪ್ರವೇಶಿಸಿದ ಗಜಪಡೆಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, "ಕಾಂಗ್ರೆಸ್ನ ತಟ್ಟೆಯಲ್ಲಿ ಹೆಗ್ಗಣ ಬಿದಿದ್ದೆ. ಅವರಿಗೆ ನಮ್ಮ ತಟ್ಟೆಯಲ್ಲಿರುವ ನೊಣದ ಬಗ್ಗೆ ಚಿಂತೆ. ಅವರ ತಟ್ಟೆಯನ್ನ ಅವರು ನೋಡಿಕೊಳ್ಳಲಿ," ಎಂದು ಟಾಂಗ್ ನೀಡಿದರು.

ಬಿಜೆಪಿಯಲ್ಲಿ ಮೂರನೇ ಸಿಎಂ ಪ್ರಸ್ತಾಪವೇ ಇಲ್ಲ. ಯಾವುದೇ ಕಾರಣಕ್ಕೂ ಬೊಮ್ಮಾಯಿ ಅವರ ಬದಲಾವಣೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ರೇಸ್ನಲ್ಲಿ ನೀವು ಇದ್ದೀರಾ? ಎಂಬ ಪ್ರಶ್ನೆಗೆ, ಮುಖ್ಯಮಂತ್ರಿ ರೇಸ್ನಲ್ಲಿ ನಾನಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಕೈ ಮುಗಿಯುವ ಮೂಲಕ ಸ್ಪಷ್ಟನೆ ನೀಡಿದರು. "ಸಿಎಂ ರೇಸ್ನಲ್ಲಿ ನಾನಿಲ್ಲ. ಹೇಗೋ ಸಹಕಾರ ಸಚಿವನಾಗಿದ್ದೇನೆ. ಅದು ಇಷ್ಟ ಇಲ್ಲ ಅಂದರೆ ಹೇಳಿ ಬಿಟ್ಟು ಬಿಡುತ್ತೇನೆ," ಎಂದರು.
ಲೆಕ್ಕ ಕೊಡಿ:
ಸಿದ್ದರಾಮೋತ್ಸವದಂತಹ 10 ಕಾರ್ಯಕ್ರಮ ಮಾಡುವ ಶಕ್ತಿ ಬಿಜೆಪಿಗೆ ಇದೆ. ಸಿದ್ದರಾಮೋತ್ಸವ ನೋಡಿ ನಾವು ಏಕೆ ಭಯ ಬೀಳಬೇಕು. ಸಿದ್ದರಾಮೋತ್ಸವದಲ್ಲಿ ಎಷ್ಟು ಜನ ಸೇರಿದ್ದರು ಎಂದು ಕಾಂಗ್ರೆಸ್ ನಾಯಕರು ಸತ್ಯ ಹೇಳಲಿ. ಎಷ್ಟು ಖುರ್ಚಿ ಹಾಕಿದ್ದರು ಎಂಬ ಲೆಕ್ಕ ನಮ್ಮ ಬಳಿ ಇದೆ. ಕಾಂಗ್ರೆಸ್ ನಾಯಕರಿಗೆ ತಾಕತ್ ಇದ್ದರೆ ಆ ಸಂಖ್ಯೆಯ ಬಗ್ಗೆ ಸತ್ಯ ಹೇಳಲಿ. ನಮ್ಮಲ್ಲಿ ಒಂದೇ ನಾಯಕತ್ವ. ಅದು ಮೋದಿ ನಾಯಕತ್ವ. ಹಾಗೆಯೇ ಕಾಂಗ್ರೆಸ್ನವರು ನಮಗೆ ಒಬ್ಬರೇ ನಾಯಕರು ಎಂದು ಹೇಳಲಿ ನೋಡೋಣ ಎಂದರು.

ಜಮೀರ್ ಅಹಮ್ಮದ್ ಒಕ್ಕಲಿಗರಿಗಿಂತ ಮುಸ್ಲಿಮರೇ ಹೆಚ್ಚಿದ್ದಾರೆ ಎಂದು ಹೇಳುತ್ತಾರೆ. ಅದಕ್ಕೆ ಕಾಂಗ್ರೆಸ್ನಲ್ಲಿ ಕೆಲವರು ಪ್ರೋತ್ಸಾಹ ಕೊಡುತ್ತಾರೆ. ಇನ್ನು ಎರಡು ವರ್ಷ ಬಿಟ್ಟರೆ ಜಮೀರ್ ಅಹಮ್ಮದ್ ದೇಶದಲ್ಲಿ ಮುಸ್ಲಿಮರೇ ಹೆಚ್ಚಿದ್ದಾರೆ ಎಂದು ಹೇಳಬಹುದು. ಕಾಂಗ್ರೆಸ್ ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.












Click it and Unblock the Notifications