ಮೈಸೂರು ಹೊರವಲಯದಲ್ಲಿ ಝಳಪಿಸಿದ ಮಚ್ಚು, ಲಾಂಗು: ಇಬ್ಬರಿಗೆ ಗಂಭೀರ ಗಾಯ!
ಮೈಸೂರು, ಅಕ್ಟೋಬರ್ 2: ಇತ್ತೀಚೆಗೆ ಅಪರಾಧ ಚಟುವಟಿಕೆಗಳಿಂದಲೇ ಸದ್ದು ಮಾಡುತ್ತಿರುವ ಮೈಸೂರು ಈಗ ಮತ್ತೊಮ್ಮೆ ವಿವಾದಕ್ಕೆ ಸಾಕ್ಷಿಯಾಗಿದೆ. ಹಾಡಹಗಲೇ ಎರಡು ಯುವಕರ ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಮೈಸೂರು ನಗರದ ಹೊರವಲಯದಲ್ಲಿರುವ ಹಂಚ್ಯಾ ಗ್ರಾಮದಲ್ಲಿ ನಡೆದಿದೆ.
ಘಟನೆಗೆ ಹಳೆ ವೈಷಮ್ಯ ಕಾರಣ ಎಂದು ತಿಳಿದುಬಂದಿದ್ದು, ಹಳೆ ವೈಷಮ್ಯದ ಹಿನ್ನೆಲೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು, ಇಬ್ಬರು ಯುವಕರು ಗಾಯಗೊಂಡಿರುವ ಘಟನೆ ಇಲ್ಲಿನ ಹಂಚ್ಯಾದಲ್ಲಿ ನಡೆದಿದೆ. ಘಟನೆಯ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹಂಚ್ಯಾ ಗ್ರಾಮಕ್ಕೆ ಪಕ್ಕದ ಗ್ರಾಮದ ರಮ್ಮನಹಳ್ಳಿಯ ಯುವಕರ ಗುಂಪೊಂದು ಚಾಕು, ಮಚ್ಚುಗಳನ್ನು ಹಿಡಿದು ನುಗ್ಗಿ ಹೋಟೆಲ್ನಲ್ಲಿ ಕುಳಿತಿದ್ದ ಕುಮಾರ್ ಹಾಗೂ ಪೈಲ್ವಾನ್ ನಂದೀಶ್ ಎಂಬುವರ ಮೇಲೆ ಹಲ್ಲೆ ಮಾಡಿದೆ. ಸ್ಥಳಕ್ಕೆ ಬಂದ ಹಂಚ್ಯಾ ಗ್ರಾಮಸ್ಥರು ಯುವಕರನ್ನು ಓಡಿಸಿದ್ದಾರೆ. ಸ್ಥಳಕ್ಕೆ ರಮ್ಮನಹಳ್ಳಿ ಉಪ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆಗೊಳಗಾದ ಯುವಕರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ
ಶುಕ್ರವಾರ ರಾತ್ರಿ ಸಣ್ಣ ಗಲಾಟೆಯಾಗಿತ್ತು. ಈ ಕುರಿತು ದೂರು ನೀಡಲು ನಿರ್ಧರಿಸಿದ್ದೆವು. ಇದೇ ಕಾರಣಕ್ಕೆ ಇಂದು ಹೋಟೆಲ್ನಲ್ಲಿ ಕುಳಿತಿದ್ದಾಗ ನಂದೀಶ್ ಹಾಗೂ ಕುಮಾರ್ ಗುರಾಯಿಸಿ ನೋಡಿದರು ಎಂಬ ಕಾರಣಕ್ಕೆ ಮಚ್ಚು ಮತ್ತು ಲಾಂಗ್ನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿದವರು ಪರಿಚಯಸ್ಥರು ಎಂದು ಚಿಕಿತ್ಸೆ ಪಡೆಯುತ್ತಿರುವ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಹಾಡಹಗಲೇ ಅಟ್ಯಾಕ್
ಹಂಚ್ಯಾ ಗ್ರಾಮದ ಹೋಟೆಲ್ನಲ್ಲಿ ಕುಮಾರ್ ಎಂಬಾತನಿಗೂ ಇತರರಿಗೂ ಹಳೆ ದ್ವೇಷದ ಹಿನ್ನೆಲೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಮಚ್ಚು, ಲಾಂಗು, ಚಾಕು ಹಿಡಿದು ಕುಮಾರನ ಮೇಲೆ ವಿರೋಧಿಗಳು ಅಟ್ಯಾಕ್ ಮಾಡಿದ್ದಾರೆ.

ಕುಮಾರನ ಸ್ನೇಹಿತರು ಪ್ರತಿ ಅಟ್ಯಾಕ್ ಮಾಡಿ ರಕ್ಷಿಸಿದ್ದಾರೆ. ತರುವಾಯ ಆರೋಪಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇದರಿಂದ ಕುಮಾರ್ಗೆ ಗಂಭೀರವಾಗಿ ಗಾಯವಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಮ್ಮನಹಳ್ಳಿ ಉಪ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಗ್ರಾಮದಲ್ಲಿ ಬಿಗುವಿನ ವಾತಾವರಣ
ಇನ್ನು ಘಟನೆ ನಡೆಯುತ್ತಿದ್ದಂತೆ ಹಂಚ್ಯಾ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಹಾಡಹಗಲೆ ಮಚ್ಚು, ಲಾಂಗುಗಳು ಝಳಪಳಿಸಿರುವುದು ಗ್ರಾಮಸ್ಥರನ್ನು ಭಯದಲ್ಲಿರುವಂತೆ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿ ಪೋಲಿಸರನ್ನು ನಿಯೋಜಿಸಲಾಗಿದೆ.

ದುಷ್ಕರ್ಮಿಗಳಿಗೆ ತಲಾಶ್
ಇನ್ನು ಘಟನೆಯಿಂದ ಮೈಸೂರು ಪೊಲೀಸರು ಅಲರ್ಟ್ ಆಗಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿರುವ ದುಷ್ಕರ್ಮಿಗಳನ್ನು ಬಂಧಿಸಲು ಖೆಡ್ಡಾ ತೋಡಿದ್ದಾರೆ. ಬಂಧನ ಭೀತಿಯಿಂದ ಕಂಗಾಲಾಗಿರುವ ದುಷ್ಕರ್ಮಿಗಳು ತಲೆಮರೆಸಿಕೊಂಡಿದ್ದಾರೆ. ಎಲ್ಲಾ ಆಯಾಮಗಳಲ್ಲೂ ಬಲೆ ಬೀಸಿರುವ ಖಾಕಿ ಪಡೆ, ಆರೋಪಿಗಳಿಗಾಗಿ ತಲಾಶ್ ನಡೆಸುತ್ತಿದೆ.












Click it and Unblock the Notifications