ಸಿ.ಎಚ್.ವಿಜಯ ಶಂಕರ್ ಜೊತೆ ಕಾಂಗ್ರೆಸ್ ನಾಯಕರ ಚರ್ಚೆ
ಮೈಸೂರು, ನವೆಂಬರ್ 29 : ಮಾಜಿ ಸಚಿವ ಸಿ.ಎಚ್.ವಿಜಯ ಶಂಕರ್ ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದ ಅವರು ಪಕ್ಷ ತೊರೆದಿದ್ದರು.
ಚಾಮರಾಜನಗರ ಸಂಸದ ಆರ್.ಧ್ರುವನಾರಾಯಣ ಮತ್ತು ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಸಿ.ಎಚ್.ವಿಜಯ ಶಂಕರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಬೆಂಬಲಿಗರ ಜೊತೆ ಮಾತುಕತೆ ನಡೆಸಿ ಅಧಿಕೃತವಾಗಿ ಪಕ್ಷ ಸೇರುವ ಕುರಿತು ತೀರ್ಮಾನ ಪ್ರಕಟಿಸುತ್ತೇನೆ ಎಂದು ವಿಜಯ ಶಂಕರ್ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸಿ.ಎಚ್.ವಿಜಯ ಶಂಕರ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಸೂಚನೆಯಂತೆಯೇ ಧ್ರುವ ನಾರಾಯಣ ಅವರು ವಿಜಯ ಶಂಕರ್ ಅವರನ್ನು ಭೇಟಿ ಮಾಡಿದ್ದಾರೆ.
ವಿಜಯ ಶಂಕರ್ ಜೊತೆಗಿನ ಭೇಟಿ ಬಳಿಕ ಮಾತನಾಡಿದ ಆರ್.ಧ್ರುವ ನಾರಾಯಣ ಅವರು, 'ವಿಜಯ ಶಂಕರ್ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಉತ್ತಮವಾದ ಸ್ಥಾನಮಾನ ದೊರೆಯಲಿದೆ' ಎಂದರು.
'ವಿಜಯ ಶಂಕರ್ ಅವರು ಪಕ್ಷ ಸೇರಿದರೆ ಪಕ್ಷ ಮತ್ತಷ್ಟು ಬಲವರ್ಧನೆಗೊಳ್ಳಲಿದೆ. ಅವರ ಪಕ್ಷ ಸೇರ್ಪಡೆಗೆ ಯಾವುದೇ ವಿರೋಧವಿಲ್ಲ. ಮುಖ್ಯಮಂತ್ರಿಗಳ ಜೊತೆಗೂ ಅವರು ಮಾತುಕತೆ ನಡೆಸಿದ್ದಾರೆ' ಎಂದು ಹೇಳಿದರು.












Click it and Unblock the Notifications