ಲೋಕ ಚುನಾವಣೆ: ರಾಜಕೀಯ ನಾಯಕರ ಚಿತ್ತ ಸ್ತ್ರೀ ಶಕ್ತಿ ಸಂಘಗಳತ್ತ
ಮೈಸೂರು, ಏಪ್ರಿಲ್ 13 : ಲೋಕಸಭಾ ಚುನಾವಣೆಯು ಸಮಯ ದಿನದಿಂದ ದಿನಕ್ಕೆ ಹತ್ತಿರವಾಗುತ್ತಿದ್ದಂತೆ ಮತಯಾಚನೆ ಭರಾಟೆ ಬಿರುಸುಗೊಂಡಿದೆ. ಗೆಲುವು ತಮ್ಮದಾಗಿಸಿಕೊಳ್ಳಲೇಬೇಕೆಂದು ಹಠ ತೊಟ್ಟಿರುವ ಅಭ್ಯರ್ಥಿಗಳು ಹಲವು ಸರ್ಕಸ್ ನಡೆಸುತ್ತಿದ್ದಾರೆ. ತಮ್ಮ ದಾಳ ಉರುಳಿಸಿಕೊಳ್ಳಲು ನಾಯಕರ ಪ್ರಮುಖ ಶಕ್ತಿ ಮಹಿಳೆಯರು. ಹಾಗಾಗಿ ಸ್ತ್ರೀಶಕ್ತಿಯತ್ತ ಮುಖ ಮಾಡಿ ಬೆಂಬಲ ಪಡೆಯಲು ಹುರಿಯಾಳುಗಳು ಹರಸಾಹಸ ನಡೆಸುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಚುನಾವಣೆ ಎಂದರೆ ಸ್ತ್ರೀಶಕ್ತಿಯರ ಪಾರುಪತ್ಯ ಮೇಲುಗೈ ಸಾಧಿಸುತ್ತದೆ. ಅವರ ಓಲೈಕೆ ಇಲ್ಲದೇ ಯಾವ ಕೆಲಸವೂ ನಡೆಯುವುದಿಲ್ಲ ಎಂಬುದು ರಾಜಕಾರಣಿಗಳಿಗೂ ತಿಳಿದಿರುವ ವಿಷಯ. ಹಾಗಾಗಿ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಕ್ರಿಯವಾಗಿರುವ ಸ್ತ್ರೀ ಶಕ್ತಿ ಸಂಘಟನೆಗಳನ್ನು ಚುನಾವಣೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಮುಖ ಪಾತ್ರವನ್ನು ವಹಿಸುವಂತೆ ಮಾಡುತ್ತಿದ್ದಾರೆ .
ಈ ಸಂಘಟನೆಗಳಲ್ಲಿ ತಿಂಗಳಿಗೊಮ್ಮೆ ಸಭೆ ನಡೆಯುವುದು ಸಾಮಾನ್ಯ. ಸಭೆ ಸೇರಿದ್ದಕ್ಕೆ ದಾಖಲೆಯಲ್ಲಿ ನಮೂದು ಮಾಡುವುದು ಸಹ ವಾಡಿಕೆ. ಆದರೆ ಸದ್ಯ ಮೂರು ದಿನಕ್ಕೊಮ್ಮೆ ಗೌಪ್ಯವಾಗಿ ಸಭೆ ನಡೆಸಿ ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕೆಂಬುದನ್ನು ಚರ್ಚಿಸುತ್ತಿದ್ದಾರೆ. ಅಲ್ಲದೆ ಇದುವರೆಗೂ ಸಂಪರ್ಕಿಸಿರುವ ರಾಜಕೀಯ ಪಕ್ಷಗಳ ಮುಖಂಡರು ನೀಡಿರುವ ಭರವಸೆಯನ್ನು ತಿಳಿಸಿ ಯಾವ ಪಕ್ಷದಿಂದ ಸಂಘಕ್ಕೆ ಹೆಚ್ಚು ಲಾಭವಾಗಲಿದೆ ಎಂಬುದನ್ನು ನಿರೀಕ್ಷೆಯಲ್ಲಿಟ್ಟುಕೊಂಡು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿ ಈಗಾಗಲೇ ಸಾವಿರಾರು ಮಹಿಳಾ ಸಂಘಗಳು ನೋಂದಣಿ ಮಾಡಿಕೊಂಡಿದೆ. ಮೈಸೂರು ನಗರದಲ್ಲಿಯೇ 146, ಗ್ರಾಮಾಂತರ ಪ್ರದೇಶದಲ್ಲಿ 967, ಹೆಚ್ ಡಿ ಕೋಟೆಯಲ್ಲಿ 69, ಕೆ. ಆರ್ ನಗರದಲ್ಲಿ 109 ಒಂಬತ್ತು ನಂಜನಗೂಡಿನಲ್ಲಿ 947, ಹೀಗೆ ಮೈಸೂರಿನಲ್ಲಿ 6 ಸಾವಿರಕ್ಕೂ ಹೆಚ್ಚು ಸ್ತ್ರೀ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿದೆ ಎಂದರೆ ಆಶ್ಚರ್ಯ ಪಡುವಂಥದ್ದೇನೂ ಇಲ್ಲ. ಈ ಎಲ್ಲಾ ಸಂಘಗಳಿಗೂ ಬಹು ಬೇಡಿಕೆ ಸಹ ವ್ಯಕ್ತವಾಗಿದೆ.
ಒಂದೆಡೆ ಸ್ತ್ರೀಶಕ್ತಿ ಸಂಘಗಳಿದ್ದರೆ, ಮತ್ತೊಂದೆಡೆ ಕೆಲ ಸಂಸ್ಥೆಗಳು ನಡೆಸುವ ಸ್ವಸಹಾಯ ಗುಂಪುಗಳ ಸಂಖ್ಯೆಯೂ ಹೆಚ್ಚಿದೆ. ಧರ್ಮಸ್ಥಳ ಸ್ವಸಹಾಯ ಗುಂಪು, ಒಡಿಪಿ ಇನ್ನಿತರ ಸಂಸ್ಥೆಗಳಲ್ಲಿ ನೂರಾರು ಗುಂಪುಗಳು ರಚನೆಯಾಗಿದೆ. ಖಾಸಗಿ ಸಂಸ್ಥೆಗಳು ರಚಿಸಿರುವ ಒಕ್ಕೂಟಗಳಲ್ಲಿ ನೂರಾರು ಮಹಿಳೆಯರ ಸ್ವಸಹಾಯ ಗುಂಪುಗಳನ್ನು ನೋಂದಣಿ ಮಾಡಿಕೊಳ್ಳಲಾಗಿದೆ. ಈ ಎಲ್ಲ ಗುಂಪುಗಳು ಚುನಾವಣೆ ಹಿನ್ನೆಲೆಯಲ್ಲಿ ಬಿರುಸಿನ ಚಟುವಟಿಕೆಗೆ ಈಗಾಗಲೇ ನಾಂದಿ ಹಾಡಿದೆ.
ಈ ಬಾರಿ ಚುನಾವಣಾ ಆಯೋಗ ಕಟ್ಟುನಿಟ್ಟು ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ನೇರವಾಗಿ ಈ ಸಂಘಟನೆಗಳ ಬಾಗಿಲು ತಟ್ಟುವುದಕ್ಕೆ ಹಿಂದೇಟು ಹಾಕುತ್ತಿದ್ದರಾದರೂ, ಸಂಘಗಳ ಅಧ್ಯಕ್ಷರು ಅಥವಾ ಗುಂಪಿನ ನಾಯಕರನ್ನು ಸಂಪರ್ಕಿಸಿ ಬೆಂಬಲ ಯಾಚಿಸುತ್ತಿದ್ದಾರೆ. ಇದನ್ನು ಆ ಗುಂಪಿನ ನಾಯಕರು ಯಾವುದಾದರೂ ಸದಸ್ಯರ ಮನೆಯಲ್ಲಿ ಗೌಪ್ಯ ಸಭೆ ನಡೆಸಿ ತಮಗೆ ಬಂದಿರುವ ಪ್ರಸ್ತಾಪವನ್ನು ಮುಂದಿಡುತ್ತಿದ್ದಾರೆ. ಸರ್ವಾನುಮತ ವ್ಯಕ್ತವಾದರೆ ಬೆಂಬಲ ನೀಡುವುದಾಗಿ ಘೋಷಣೆ ಮಾಡುತ್ತಾರೆ. ಸರ್ವಾನುಮತ ಲಭಿಸದಿದ್ದರೆ ಕಾದು ನೋಡುವ ತಂತ್ರಕ್ಕೆ ಮಣೆ ಹಾಕಲಾಗುತ್ತಿದೆ.
ಬಹುತೇಕ ಸಂಘಗಳ ಸದಸ್ಯರು ಕಾದು ನೋಡುವ ತಂತ್ರಕ್ಕೆ ಕಟ್ಟುಬಿದ್ದಿದ್ದಾರೆ. ಯಾವ ಪಕ್ಷದ ಅಭ್ಯರ್ಥಿಯಿಂದ ಲಾಭವಾಗುತ್ತದೆ ಎಂಬುದು ಲೆಕ್ಕಾಚಾರದಲ್ಲಿ ಈಗಾಗಲೇ ತೊಡಗಿದ್ದಾರೆ. ಇನ್ನು ಮತದಾನಕ್ಕೆ ಎರಡು ಮೂರು ದಿನ ಇರುವಾಗಲೇ ಸ್ತ್ರೀಶಕ್ತಿ ಹಾಗೂ ಇನ್ನಿತರ ಸಂಘಟನೆಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತದೆ. ಹಲವು ಸುತ್ತಿನ ಮಾತುಕತೆಯ ಮೂಲಕ ಚರ್ಚಿಸಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಯಾವ ಅಭ್ಯರ್ಥಿ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎಂಬುದು ಗಮನಿಸಿ ಅವರಿಗೆ ಜೈ ಎನ್ನುತ್ತಾರೆ ಎಂಬುದು ಮೂಲಗಳ ಮಾಹಿತಿ. ಒಟ್ಟಾರೆ ಈ ಚುನಾವಣೆಯಲ್ಲಿ ಸ್ತ್ರೀಶಕ್ತಿ ಯಾರಿಗೆ ಗೆಲುವಿನ ಹಾರ ಹಾಕಲಿದೆ ಎಂಬುದನ್ನು ಮಾತ್ರ ಕಾದು ನೋಡಬೇಕಾಗಿದೆ.












Click it and Unblock the Notifications