ವರುಣಾ ವ್ಯಾಪ್ತಿಯಲ್ಲಿ ಬಿವೈ ವಿಜಯೇಂದ್ರ ಅಭಿಮಾನಿ ನೇಣಿಗೆ ಶರಣು?
ನಂಜನಗೂಡು, ಏಪ್ರಿಲ್ 26 : ಬಿಜೆಪಿ ರಾಜ್ಯ ಮುಖಂಡ ಬಿ.ವೈ. ವಿಜಯೇಂದ್ರ ಅವರ ಅಭಿಮಾನಿ ಎಂದು ಹೇಳಲಾದ ವ್ಯಕ್ತಿಯೊಬ್ಬರು ಗುರುವಾರ ನೇಣಿಗೆ ಶರಣಾದ ಘಟನೆ ವರುಣಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಸರಗೂರು ಗ್ರಾಮದಲ್ಲಿ ನಡೆದಿದೆ.
ಸರಗೂರು ಗ್ರಾಮದ ಗುರುಸ್ವಾಮಿ ಅಲಿಯಾಸ್ ಗೂಳಪ್ಪ (32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ವರುಣಾ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿದ್ದ ವಿಜಯೇಂದ್ರ ಅವರಿಗೆ ಪಕ್ಷದ ಟಿಕೆಟ್ ನೀಡದ ಕಾರಣ ಮನನೊಂದು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ವಿಜಯೇಂದ್ರಗೆ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ಮೈಸೂರಲ್ಲಿ ಭಾರೀ ಆಕ್ರೋಶ
ಕಳೆದೊಂದು ದಶಕದಿಂದ ಬಿಜೆಪಿ ಕಾರ್ಯಕರ್ತರಾಗಿದ್ದ ಗೂಳಪ್ಪ ತಗಡೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯರಾದ ಸದಾನಂದ ಎಂಬುವರ ಸಂಬಂಧಿಯಾಗಿದ್ದು, ಅವರ ಜೊತೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ಕೈತಪ್ಪಿದ ಕಾರಣ ನಂಜನಗೂಡಿನ ಹುಲ್ಲಹಳ್ಳಿ ವೃತ್ತದ ಬಳಿ ಆಕ್ರೋಶ ವ್ಯಕ್ತಪಡಿಸಿದ್ದವರೊಂದಿಗೆ ಗುರುಸ್ವಾಮಿ ಕೂಡ ಇದ್ದರು. ಇತ್ತೀಚೆಗಷ್ಟೆ ವಿವಾಹವಾಗಿದ್ದ ಗೂಳಪ್ಪ ಅವರಿಗೆ ಪತ್ನಿ ಹಾಗೂ ಒಂದು ಮಗು ಇದೆ.