ಕಾಶ್ಮೀರವಾಯ್ತು, ಬಿಜೆಪಿಯ ಮುಂದಿನ ಗುರಿ ರಾಮಮಂದಿರ ನಿರ್ಮಾಣ: ನಳಿನ್ ಕುಮಾರ್
ಮೈಸೂರು, ಆಗಸ್ಟ್ 29: "370 ಕಾಯ್ದೆ ರದ್ದತಿ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದು ಹಾಕಿದ್ದೇವೆ. ಬಿಜೆಪಿಯ ನಮ್ಮ ಮುಂದಿನ ಗುರಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ" ಎಂದಿದ್ದಾರೆ ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್.
ಒಂದೇ ದಿನ ನಳಿನ್ ಕುಮಾರ್ ಕಟೀಲ್ಗೆ ಎರಡೆರಡು ಗಿಫ್ಟ್
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, "ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸುವ ಮೂಲಕ ಪ್ರಧಾನಿ ಮೋದಿ ನುಡಿದಂತೆ ನಡೆದಿದ್ದಾರೆ. ಬಿಜೆಪಿ ವಿಚಾರಧಾರೆಗಳ ಬಗ್ಗೆ ಜನರಲ್ಲಿ ನಂಬಿಕೆ ಹಾಗೂ ವಿಶ್ವಾಸ ಬಂದಿದೆ. ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಹಾಗೂ ಯಡಿಯೂರಪ್ಪ ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವುದು ನನ್ನ ಗುರಿ. ಈ ನಿಟ್ಟಿನಲ್ಲಿ ಕಾರ್ಯಕರ್ತರಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ" ಎಂದರು.
"ಸದ್ಯ ನಾವೀಗ ಸಂಘಟನಾ ಪರ್ವದಲ್ಲಿ ಇದ್ದೇವೆ. ರಾಜ್ಯ ಮತ್ತು ಕೇಂದ್ರದಲ್ಲಿ ಪಕ್ಷ ಅಧಿಕಾರದಲ್ಲಿರುವ ವಿಶಿಷ್ಟ ಸಂದರ್ಭದಲ್ಲಿ ಪಕ್ಷದ ಚುಕ್ಕಾಣಿ ಹಿಡಿದಿದ್ದೇನೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಸವಾಲು ನನ್ನ ಮೇಲಿದೆ. ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಪಕ್ಷ ಹಾಗೂ ಸರ್ಕಾರದ ಕೊಂಡಿಯಾಗಿ ಕೆಲಸ ಮಾಡಬೇಕಾಗಿದೆ. ಪಕ್ಷದ ಕಾರ್ಯಕರ್ತರ ಶ್ರಮದಿಂದ ಚುನಾವಣೆ ಗೆಲ್ಲಲು ಗಮನ ಹರಿಸಲಾಗುವುದು. ಮೈಸೂರಲ್ಲಿ ಕ್ರಿಯಾಶೀಲರಾದ ಪ್ರತಾಪಸಿಂಹ ಇದ್ದಾರೆ. ಯಾವುದೇ ಸಂದರ್ಭದಲ್ಲಿ ಪ್ರಧಾನಿ ಬಳಿ ಹೋಗಿ ಮಾತನಾಡುವ ಸಾಮರ್ಥ್ಯ ಅವರಲ್ಲಿದೆ" ಎಂದು ಹೊಗಳಿದರು.
ಇಲ್ಲಿಯೂ ರಾಮ್ ದಾಸ್ ಅನುಪಸ್ಥಿತಿ: ಶಾಸಕ ಎಸ್.ಎ.ರಾಮದಾಸ್ ದಸರಾ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದು, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮೈಸೂರಿಗೆ ಭೇಟಿ ನೀಡಿದ್ದಾರೆ ಎನ್ನುವ ವಿಷಯ ಗೊತ್ತಿದ್ದರೂ ಅವರನ್ನು ಭೇಟಿಯಾಗದೆ ದ್ವಂದ್ವ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಬಿಜೆಪಿಯಲ್ಲಿ ಉಂಟಾಗಿರುವ ಅಸಮಾಧಾನದ ಬಗ್ಗೆ ಮಾಧ್ಯಮಗಳು ಪ್ರಶ್ನಿಸುತ್ತಾರೆ ಎಂದು ಅರಿತ ನಳಿನ್ ಕುಮಾರ್ ಕಟೀಲ್ ರವರು ಸಹ ಮಾಧ್ಯಮಗಳ ಸಮೀಪಕ್ಕೆ ಬರಲೇ ಇಲ್ಲ. ಮಾಧ್ಯಮಗಳಿಂದ ದೂರ ಉಳಿದು, ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟುಹೋದರು.