ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ: ಪಕ್ಷ ಬಿಟ್ಟವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ: ಸಿಎಂ ಬೊಮ್ಮಾಯಿ
ಮೈಸೂರು, ಏಪ್ರಿಲ್ 17: ಕರ್ನಾಟಕದಲ್ಲಿ ಬಿಜೆಪಿ ಆಡಳಿತ ಬರುವುದು ನೂರಕ್ಕೆ ನೂರರಷ್ಟು ಸತ್ಯ. ಪಕ್ಷ ತೊರೆದು ಹೋಗಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಯಾವ ಯಾವ ಕ್ಷೇತ್ರದಲ್ಲಿ ಪಕ್ಷ ಬಿಟ್ಟು ಹೋಗಿದ್ದಾರೆ, ಅಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಈ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಮೈಸೂರು ಜಿಲ್ಲೆ ವರುಣಾ ಹಾಗೂ ಟಿ.ನರಸೀಪುರ ಕ್ಷೇತ್ರದಲ್ಲಿನ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಕ್ರಮವಾಗಿ ವಿ.ಸೋಮಣ್ಣ ಮತ್ತು ಡಾ.ರೇವಣ್ಣ ಅವರಿಗೆ ಸಾಥ್ ನೀಡಿದರು. ಬಳಿಕ ಬಿಜೆಪಿ ವತಿಯಿಂದ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಬೊಮ್ಮಾಯಿ ಮಾತನಾಡಿದರು.

ವಸತಿ ಸಚಿವ ವಿ ಸೋಮಣ್ಣ ಅವರು ಅಭಿವೃದ್ಧಿಗೆ ಮಾದರಿ ಆದವರು. ಅವರು ವರುಣಾಗೆ ಬಂದಿದ್ದು, ಇಲ್ಲೆಲ್ಲವು ಸೋಮಣ್ಣಮಯವಾಗಿದೆ. ವರುಣಾ ಹೆಸರು ಮೈಸೂರು ಜಿಲ್ಲೆ ದಾಟಿ ಹೋಗಲಿದೆ. ಸೋಮಣ್ಣಗೆ ಚಾಮುಂಡಿ ತಾಯಿಯ ಆಶೀರ್ವಾದ ಇದೆ ಎನ್ನುವ ಮೂಲಕ ಸೊಮಣ್ಣನವರು ಇಲ್ಲಿ ಗೆಲ್ಲಲಿದ್ದಾರೆ ಎಂದರು.
ಕರ್ನಾಟಕ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ದುರ್ಬಲರ ಹೆಸರು ಹೇಳಿ ಕೆಲವರು ಅಧಿಕಾರ ಪಡೆದರು. ನಾಯಕರು ಬೆಳೆದರು, ದುರ್ಬಲ ವರ್ಗ ಬೆಳೆಯಲೇ ಇಲ್ಲ. ಭಾಷಣದಿಂದ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ರಾಜಕೀಯ ಇಚ್ಚಾಶಕ್ತಿಯಿಂದ ಸಮಾನತೆ ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್ಗೆ ಟಾಂಗ್ ನೀಡಿದರು.

ಕಾಂಗ್ರೆಸ್ನವರದ್ದು ಚುನಾವಣೆ ಗಿಮಿಕ್
ಕಾಂಗ್ರೆಸ್ ಬಡವರ ಪರ ಒಂದೇ ಒಂದು ಕೆಲಸ ಮಾಡಿಲ್ಲ. ದೀನ-ದಲಿತರಿಂದ ಮತ ಹಾಕಿಸಿಕೊಂಡು ಗೆದ್ದರು. ಅನ್ನಭಾಗ್ಯದ ಅಕ್ಕಿ ಬ್ಲಾಕ್ ಮಾರ್ಕೆಟ್ ಗೆ ಹೋಗುತ್ತಿದೆ. ಸಿದ್ದು ಅವಧಿಯಲ್ಲಿ ಭ್ರಷ್ಟಾಚಾರ ನಡೆದಿತ್ತು. ಬಿಡಿಎ, ಗೃಹ ಮಂಡಳಿ ಸೇರಿಸಂತೆ ಅನೇಕ ಭ್ರಷ್ಟಾಚಾರಗಳು ನಡೆದಿವೆ. ಇದೀಗ ಅವರು ನಮ್ಮ ವಿರುದ್ಧ 40% ಆರೋಪ ಮಾಡುತ್ತಿದ್ದಾರೆ. ಇದೆಲ್ಲವು ಚುನಾವಣೆ ಗಿಮಿಕ್ ಎಂದು ತಿರುಗೇಟು ನೀಡಿದರು.
ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಿದ್ದಾರೆ. ವರುಣಾ ಕೂಡಾ ಗೋವಿಂದರಾಜನಗರದಂತೆ ಬೆಳೆಯಬೇಕು. ಕಾಂಗ್ರೆಸ್ ಸರ್ಕಾರ ಎಲ್ಲದರಲ್ಲಿ ಭ್ರಷ್ಟಾಚಾರ ಮಾಡಿದೆ. ಈಗ ಕಾಂಗ್ರೆಸ್ಸಿಗರು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. 50 ವರ್ಷದಿಂದ ಬಡವರು ಬಡವರಾಗಿ ಉಳಿಯುತ್ತಿರಲಿಲ್ಲ. ಸಮಸ್ಯೆ ಬಗ್ಗೆ ಭಾಷಣ ಮಾಡಿದರೆ ಏನು ಪ್ರಯೋಜನ, ಸಮಸ್ಯೆಗೆ ಪರಿಹಾರ ನೀಡುವವರು ಯಾರು? ಕಾಂಗ್ರೆಸ್ ಎಲ್ಲ ಭಾಗ್ಯಗಳನ್ನ ಘೋಷಣೆ ಮಾಡಿತು? ಗ್ಯಾರಂಟಿ ಕೊಟ್ಟಿದೆ, ನೀವು ಬರೋಕು ಮುನ್ನ ಅನ್ನಭಾಗ್ಯ ಯೋಜನೆ ಇರಲಿಲ್ಲವೇ ಎಂದು ಅವರು ಪ್ರಶ್ನಿಸಿದರು.
ಬಿಟ್ಟು ಹೋದವರ ಬಗ್ಗೆ ಚಿಂತೆ ಬೇಡ
ಬಿಜೆಪಿಯಿಂದ ಕೆಲವು ನಾಯಕರು ಪಕ್ಷದಿಂದ ಹೋಗಿದ್ದರೂ ನಮ್ಮದು ಇತರೆ ಪಕ್ಷಗಳಂತೆ ನಾಯಕ ಆಧಾರಿತ ಪಕ್ಷ ಅಲ್ಲ. ಆದ್ದರಿಂದ ಈ ರೀತಿಯ ಪಕ್ಷಾಂತರ ಯಾವುದೇ ರೀತಿಯ ಪರಿಣಾಮ ಬೀರಲ್ಲ. ಕಾಂಗ್ರೆಸ್ ಅವರಿಗೆ ಸುಮಾರು 60 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಇರಲಿಲ್ಲ. ಹಾಗಾಗಿ ಅವರು ಪೂರ್ಣ ಪಟ್ಟಿ ಬಿಡುಗಡೆ ಮಾಡದೇ ವೀರಾವೇಶದಲ್ಲಿ 150 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರು. ಬಿಜೆಪಿ ಬಲಿಷ್ಠ ಇರುವ ಕಡೆಗಳಲ್ಲಿ ಪಕ್ಷಾಂತರ ಮಾಡಿಸಿ ಟಿಕೆಟ್ ಕೊಟ್ಟರೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಗುಡುಗಿದರು.












Click it and Unblock the Notifications