ಮೈಸೂರು ಗ್ಯಾಸ್ ಪೈಪ್ಲೈನ್ ವಿಚಾರ; ಪ್ರತಾಪ್ ಸಿಂಹ ವಿರುದ್ಧ ತಿರುಗಿಬಿದ್ದ ಸ್ವಪಕ್ಷದ ಶಾಸಕರು
ಮೈಸೂರು, ಜನವರಿ 28: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಜೆಪಿ ಸಂಸದ ಹಾಗೂ ಶಾಸಕರುಗಳ ನಡುವೆ ಶುರುವಾಗಿರುವ ಹಗ್ಗಜಗ್ಗಾಟ ತಾರಕಕ್ಕೇರಿದ್ದು, ಶಾಸಕ ಎಸ್.ಎ. ರಾಮದಾಸ್ ಬೆನ್ನಲ್ಲೇ ಇದೀಗ ಎಲ್. ನಾಗೇಂದ್ರ ಕೂಡ ತಮ್ಮದೇ ಪಕ್ಷದ ಸಂಸದ ಪ್ರತಾಪ್ ಸಿಂಹ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಮೈಸೂರಿನಲ್ಲಿ ನಡೆಯುತ್ತಿರುವ ಗ್ಯಾಸ್ ಪೈಪ್ಲೈನ್ ಕಾಮಗಾರಿ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರುಗಳ ವಿರುದ್ಧ ಕಿಡಿಕಾರಿದ್ದ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಎಲ್. ನಾಗೇಂದ್ರ, "ನಾವು, ನಮ್ಮ ಕಾರ್ಯಕರ್ತರು ಹಾಗೂ ಮೈಸೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ಗಳೆಲ್ಲಾ ಓಡಾಡಿ ಪ್ರತಾಪ್ ಸಿಂಹ ಅವರಿಗೆ ಓಟ್ ಹಾಕಿಸಿದ್ದೇವೆ. ಪಕ್ಷದ ಕಾರ್ಯಕರ್ತರು, ಕಾರ್ಪೋರೇಟರ್ಗಳು ಇಲ್ಲದಿದ್ದರೆ ಅವರು ಗೆಲ್ಲೋಕೆ ಆಗುತ್ತಾ?," ಎಂದು ಹೇಳುವ ಮೂಲಕ, ಶಾಸಕರಿಗಿಂತ ಹೆಚ್ಚಿನ ಅಂತರದಲ್ಲಿ ಮತಗಳಿಸಿದ್ದೇನೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಶಾಸಕ ಎಲ್. ನಾಗೇಂದ್ರ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
"ಅಲ್ಲದೇ, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಹೀಗಾಗಿ ಹೆಚ್ಚಿನ ಲೀಡ್ನಲ್ಲಿ ಗೆದ್ದಿದ್ದಾರೆ. ನಾನು ಕೂಡ ಈ ಬಾರಿ ಒಂದು ಲಕ್ಷ ಅಂತರದಲ್ಲಿ ಗೆಲುವು ಸಾಧಿಸಲಿದ್ದು, ನನ್ನ ಕ್ಷೇತ್ರದಲ್ಲಿ ಅಷ್ಟರ ಮಟ್ಟಿಗೆ ಕೆಲಸ ಮಾಡಿದ್ದೇನೆ. ಹೀಗಾಗಿ ಕೆಲಸದಿಂದ ಜನರ ವಿಶ್ವಾಸ ಗಳಿಸಬೇಕೇ ಹೊರತು, ಮಾತಿನಿಂದಲ್ಲ," ಎಂದು ಪ್ರತಾಪ್ ಸಿಂಹಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಟಾಂಗ್ ಕೊಟ್ಟಿದ್ದಾರೆ.

"ಪ್ರತಾಪ್ ಸಿಂಹ ಆರೋಪದಿಂದ ನನ್ನ, ಪಕ್ಷದ ನಾಯಕರ ವಿಶ್ವಾಸಕ್ಕೆ ಯಾವುದೇ ಧಕ್ಕೆ ಆಗಲ್ಲ. ಈಗಾಗಲೇ ನಾನು ಪಕ್ಷದ ನಾಯಕರ ಗಮನಕ್ಕೆ ವಿಚಾರವನ್ನು ತಂದಿದ್ದೇನೆ. ಜನರಿಗೆ ತೊಂದರೆ ಆಗುವ ಕಾಮಗಾರಿ ಮಾಡಲು ಬಿಡಲ್ಲ. ರಸ್ತೆ ಹಾಳಾದರೆ ಜನರಿಗೆ ನಾವು ಉತ್ತರ ಕೊಡಬೇಕಾಗುತ್ತದೆ. ಅಗತ್ಯ ಹಣ ಕೊಟ್ಟು ಕಾಮಗಾರಿ ಆರಂಭಿಸಲಿ ಎಂದ ಅವರು, ಅಗೆದ ರಸ್ತೆಯನ್ನು ಪ್ರತಾಪ್ ಸಿಂಹ ಬಂದು ಮುಚ್ಚುತ್ತಾರಾ? ರಸ್ತೆ ಹಾಳಾಗುವ ಯೋಜನೆ ಮಾಡಲು ನಾವು ಬಿಡುವುದಿಲ್ಲ," ಎಂದು ಮೈಸೂರಿನಲ್ಲಿ ಶಾಸಕ ಎಲ್. ನಾಗೇಂದ್ರ ಹೇಳಿದ್ದಾರೆ.
ಬಿಜೆಪಿ ನಾಯಕರ ಪ್ರತಿಷ್ಠೆಗೆ ಕಾರಣವಾಯ್ತಾ ಗ್ಯಾಸ್ ಪೈಪ್ಲೈನ್?
ಮೈಸೂರಿನಲ್ಲಿ ನಡೆಯುತ್ತಿರುವ ಮನೆ ಮನೆಗೆ ಅಡುಗೆ ಅನಿಲ ಪೂರೈಸುವ ಯೋಜನೆ ಈಗಾಗಲೇ ಭರದಿಂದ ಸಾಗುತ್ತಿದೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಸದ ಪ್ರತಾಪ್ ಸಿಂಹ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ ಮಹತ್ವದ ಈ ಯೋಜನೆ ಇದೀಗ ಸ್ಥಳೀಯ ಬಿಜೆಪಿ ನಾಯಕರ ಸ್ವಪ್ರತಿಷ್ಠೆಗೆ ಕಾರಣವಾಯಿತೇ? ಎಂಬ ಪ್ರಶ್ನೆ ಮೂಡುತ್ತಿದೆ.

ಸದರಿ ಯೋಜನೆಯ ಕಾಮಗಾರಿ ಈಗಾಗಲೇ ಮೈಸೂರಿನ ಹೊರವಲಯದ ರಿಂಗ್ ರಸ್ತೆಯಲ್ಲಿ ಗ್ಯಾಸ್ ಪೈಪ್ ಅಳವಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ನಗರ(ಪಾಲಿಕೆ ವ್ಯಾಪ್ತಿಯಲ್ಲಿ) ಪ್ರದೇಶದಲ್ಲಿ ಯೋಜನೆಯ ಕಾಮಗಾರಿ ಆರಂಭಿಸಲು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದಕ್ಕಾಗಿ ಸಂಸದ ಪ್ರತಾಪ್ ಸಿಂಹ ಅವರು ಮಹಾನಗರ ಪಾಲಿಕೆಯಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಎರಡು ಬಾರಿ ತಿರಸ್ಕರಿಸಲಾಗಿದೆ ಎನ್ನಲಾಗಿದೆ.
ಅಲ್ಲದೇ ರಸ್ತೆ ಅಗೆದು ಮನೆಮನೆಗೆ ಗ್ಯಾಸ್ ಸಂಪರ್ಕ ಮಾಡುವ ಯೋಜನೆಗಾಗಿ ರಸ್ತೆ ಅಗೆಯುವುದಕ್ಕೆ ಪಾಲಿಕೆ ಸದಸ್ಯರು, ಶಾಸಕರ ವಿರೋಧ ವ್ಯಕ್ತಪಡಿಸಿದ್ದಾರೆ. ಸದ್ಯ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಯೊಂದು ಬಿಜೆಪಿ ಸಂಸದ ಹಾಗೂ ಶಾಸಕರಲ್ಲೇ ಭಿನ್ನಾಭಿಪ್ರಾಯಕ್ಕೆ ಎಡೆಮಾಡಿಕೊಟ್ಟಿದ್ದು, ನಾಯಕರ ಈ ಕಿತ್ತಾಟ ಎಲ್ಲಿಗೆ ತಲುಪುತ್ತದೆ? ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications