ಯಶ್ ವರ್ಚಸ್ಸನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ: ಎಂ. ಲಕ್ಷ್ಮಣ್
ಮೈಸೂರು, ಆಗಸ್ಟ್ 12: 'ನಗರದ ಮಹಾರಾಜ ಕಾಲೇಜಿನ ಮೈದಾನದಲ್ಲಿ ಗುರುವಾರ ನಡೆದ ಯುವಜನ ಮಹೋತ್ಸವ ಕಾರ್ಯಕ್ರಮಕ್ಕೆ ನಟ ಯಶ್ ಬಾರದಿದ್ದರೆ ಯುವಕರು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣಗೆ ಕಲ್ಲಿನಿಂದ ಹೊಡೆಯುತ್ತಿದ್ದರು. ಯಶ್ ಬಂದಿದ್ದಕ್ಕೆ ಅವರ ಮಾನ ಮರ್ಯಾದೆ ಉಳಿದಿದೆ" ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಟೀಕಿಸಿದರು.
ಮೈಸೂರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಯುವಜನ ಮಹೋತ್ಸವ ಕಾರ್ಯಕ್ರಮದಲ್ಲಿ ನಟ ಯಶ್ ಅವರ ವರ್ಚಸ್ಸನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ. ಯುವಜನ ಮಹೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ, ಡಾ. ಬಿ. ಆರ್. ಅಂಬೇಡ್ಕರ್ ಸೇರಿದಂತೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಯಾವುದೇ ವ್ಯಕ್ತಿಗಳನ್ನು ನೆನಪಿಸಿಕೊಳ್ಳಲಿಲ್ಲ" ಎಂದು ಆರೋಪಿಸಿದರು.
ಎಸಿಬಿ ರಚನೆ ರದ್ದು ವಿಚಾರ- ಕಾದು ನೋಡುವ ತಂತ್ರಕ್ಕೆ ಬೊಮ್ಮಾಯಿ ಸರ್ಕಾರ!
"ರಾಷ್ಟ್ರ ಧ್ವಜವನ್ನು ಬಳಸಿಕೊಂಡು ಯುವ ಸಮುದಾಯವನ್ನು ಬಿಜೆಪಿಗೆ ಸೆಳೆಯುವ ತಂತ್ರವಾಗಿದೆ. ಯುವಜನ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದರೆ ಹೊರತೂ, ಯುವಕರಿಗಾಗಿ ಉದ್ಯೋಗ ನೀಡುವ ಯಾವುದೇ ಘೋಷಣೆ ಮಾಡಲಿಲ್ಲ" ಎಂದು ಕುಟುಕಿದರು.
ಯಶ್ ಬರದಿದ್ದರೆ ಬಿಜೆಪಿಗೆ ಮುಖಭಂಗ; "ಯುವಜನ ಮಹೋತ್ಸವದಲ್ಲಿ ಯುವಕರು ನೆನೆಯುವಂತಹ ಯಾವುದೇ ಕಾರ್ಯಕ್ರಮವನ್ನು ರೂಪಿಸಿರಲಿಲ್ಲ. ಅನಗತ್ಯವಾಗಿ ಮೈಸೂರಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ, ಯಶ್ ಅವರನ್ನು ಬಿಂಬಿಸಿ ಕಾರ್ಯಕ್ರಮ ನಡೆಸಲಾಯಿತು. ಯಶ್ ಬಾರದಿದ್ದರೆ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಬರುತ್ತಿರಲಿಲ್ಲ. ಇದರಿಂದ ಬಿಜೆಪಿಗೆ ಮುಖಭಂಗವಾಗುತ್ತಿತ್ತು. ಮುಖಭಂಗ ತಪ್ಪಿಸಿಕೊಳ್ಳಲು ಯಶ್ ಅವರನ್ನು ಕಾರ್ಯಕ್ರಮಕ್ಕೆ ಕರೆಸಿದ್ದಾರೆ" ಎಂದು ವ್ಯಂಗ್ಯವಾಡಿದರು.
"ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವುದು ನೂರಕ್ಕೆ ನೂರರಷ್ಟು ಸತ್ಯ. ಬಿಜೆಪಿ ಮುಖಂಡರಿಗೆ ತಮ್ಮ ಹೇಳಿಕೆಗೆ ತದ್ವಿರುದ್ಧ ನಡೆಯುವುದು ವಾಡಿಕೆಯಾಗಿದೆ. ಈ ಹಿಂದೆ ಜೆ. ಪಿ. ನಡ್ಡಾ ಹಾಗೂ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿ ನಡೆಸಿ ಬಿ. ಎಸ್. ಯಡಿಯೂರಪ್ಪರನ್ನು ಸಿಎಂ ಹುದ್ದೆಯಿಂದ ಇಳಿಸುವುದಿಲ್ಲ ಎಂದು ಹೇಳಿದ್ದರು. ಆದರೆ, ಹೇಳಿಕೆ ನೀಡಿದ 20 ನಿಮಿಷಗಳ ನಂತರ ಬಿಎಸ್ವೈರನ್ನು ಸಿಎಂ ಸ್ಥಾನದಿಂದ ಕಿತ್ತೊಗೆಯಲಾಯಿತು. ಬೊಮ್ಮಾಯಿ ಅವರಿಗೂ ಇದೇ ಸ್ಥಿತಿ ಬರಲಿದೆ" ಎಂದು ಹೇಳಿದರು.
"ಸಿದ್ದರಾಮೋತ್ಸವದಲ್ಲಿ ಸೇರಿದ ಜನ ನೋಡಿ ಎಚ್. ಡಿ. ಕುಮಾರಸ್ವಾಮಿ ಮೈಮೇಲೆ ಚೇಳುಬಿದ್ದವರಂತೆ ಆಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಟೀಕಿಸುವ ಮೂದಲು ಭಾಷೆ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಬೇಕು. ಸಿದ್ದರಾಮಯ್ಯ ನಿಮಗೆ ಬೈದರೆ, ಒಕ್ಕಲಿಗ ವೋಟು ಚದರುತ್ತದೆ ಎಂಬ ಭ್ರಮೆ ಬೇಡ" ಎಂದು ಎಂ. ಲಕ್ಷ್ಮಣ್ ಹೇಳಿದರು.