ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಸಾಹುಕಾರ್ ಬೆನ್ನಿಗೆ ನಿಂತ ಬಿಜೆಪಿ ಸಚಿವ, ಶಾಸಕರು
ಮೈಸೂರು, ಮಾರ್ಚ್ 3: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದ ಸಿಡಿ ಬಿಡುಗಡೆ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಬಿಜೆಪಿ ಸಚಿವರು ಹಾಗೂ ಶಾಸಕರು, ಬೆಳಗಾವಿ ಸಾಹುಕಾರನ ಬೆನ್ನಿಗೆ ನಿಂತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, "ಪ್ರಕರಣದ ಕುರಿತು ಈಗಲೇ ಏನನ್ನೂ ಹೇಳುವಂತಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ, ಈ ವಿಚಾರದಲ್ಲಿ ನನ್ನ ಪಾತ್ರ ಏನೂ ಇಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಸಮಗ್ರವಾಗಿ ತನಿಖೆಯಾಗಲಿ. ಸತ್ಯಾಸತ್ಯತೆ ಏನು ಅಂತ ಗೊತ್ತಾಗಲಿ. ಆ ಮೇಲೆ ಪ್ರತಿಕ್ರಿಯೆ ನೀಡಬಹುದು'' ಎಂದಿದ್ದಾರೆ.

ರಮೇಶ್ ಜಾರಕಿಹೊಳಿ ದೈವ ಭಕ್ತ
ಮತ್ತೊಂದೆಡೆ, ಇದೇ ವಿಷಯದ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್, "ಇದೊಂದು ರಾಜಕೀಯ ಪಿತೂರಿಯಾಗಿದೆ, ಸಚಿವ ರಮೇಶ್ ಜಾರಕಿಹೊಳಿ ದೈವ ಭಕ್ತ. ಸಮಾಜಕ್ಕೆ ಅಂಜುವ ವ್ಯಕ್ತಿ. ಈ ರೀತಿಯ ತಪ್ಪು ಮಾಡಿರುತ್ತಾರೆ ಅಂತ ಅನ್ನಿಸುತ್ತಿಲ್ಲ. ಮಂಗಳವಾರದಿಂದಲೂ ನಾನು ಮೈಸೂರಿನಲ್ಲೇ ಇದ್ದೇನೆ. ಏನಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಸತ್ಯಾಸತ್ಯತೆ ಪರಿಶೀಲನೆ ಆಗುವವರೆಗೂ ಕಾದು ನೋಡೋಣ.''

ಜಾರಕಿಹೊಳಿ ಪರವಾಗಿ ನಿಲ್ಲುತ್ತೇನೆ
"ಆದರೆ, ಈ ಸಿಡಿ ವಿಚಾರದಲ್ಲಿ ನಾನು ರಮೇಶ್ ಜಾರಕಿಹೊಳಿ ಅವರ ಬೆಂಬಲಕ್ಕೆ ಇದ್ದೇನೆ. ಈಗಾಗಲೇ ಅವರ ಜೊತೆ ಮಾತನಾಡಿದ್ದೇನೆ, ಅವರು ನಾನು ತಪ್ಪು ಮಾಡಿಲ್ಲ ಎಂದಿದ್ದಾರೆ. ರಾಜಕಾರಣದಲ್ಲಿ ಯಶಸ್ಸು ಸಿಕ್ಕಾಗ ವಿರೋಧಿಗಳು ಷಡ್ಯಂತ್ರ ರೂಪಿಸುತ್ತಾರೆ. ರಮೇಶ್ ಜಾರಕಿಹೊಳಿ ವಿಚಾರದಲ್ಲೂ ಇದು ನಡೆದಿದೆ. ನಾನು ರಮೇಶ್ ಜಾರಕಿಹೊಳಿ ಪರವಾಗಿ ನಿಲ್ಲುತ್ತೇನೆ, ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಲಿದೆ ಇದಾದ ಬಳಿಕ ಸತ್ಯಾಸತ್ಯತೆ ಹೊರಬರತ್ತದೆ ಎಂದು ಸಚಿವ ಸಿಪಿ ಯೋಗೇಶ್ವರ್ ತಿಳಿಸಿದರು.

ಬಿಜೆಪಿ ಶಾಸಕರು ಏನಂದರು?
ರಾಸಲೀಲೆ ಸಿಡಿ ಸ್ಪೋಟ ಪ್ರಕರಣದ ಕುರಿತು ಮಾತನಾಡಿರುವ ಬಿಜೆಪಿ ಶಾಸಕ ಎಸ್.ಎ ರಾಮದಾಸ್, "ಸತ್ಯಾಸತ್ಯತೆಗಳು ಅವರಿಗೆ ಗೊತ್ತಿದೆ. ರಾಜ್ಯದ ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟವರು ಅವರ ಜೊತೆ ಮಾತನಾಡುತ್ತಾರೆ. ಸೂಕ್ತವಾದಂತ ನಿರ್ಧಾರಗಳನ್ನು ಅವರು ಕೈಗೊಳ್ಳುತ್ತಾರೆ'' ಎಂದಿದ್ದಾರೆ.

ಉನ್ನತ ಮಟ್ಟದಲ್ಲಿ ತನಿಖೆ
ಇನ್ನು ಬಿಜೆಪಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, "ಅದು ಯಾರದ್ದು ಅನ್ನೋದು ತನಿಖೆ ಆಗುತ್ತಿದೆ. ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಬೇಕು. ನಾನೇನು ತಪ್ಪು ಮಾಡಿಲ್ಲ ಅಂತಾ ಸಚಿವ ಜಾರಕಿಹೊಳಿ ಹೇಳಿದ್ದಾರೆ. ಹೀಗಾಗಿ ಸಿಡಿ ವಿಚಾರ ಉನ್ನತ ಮಟ್ಟದಲ್ಲಿ ತನಿಖೆ ಆಗಬೇಕಿದ್ದು, ತಪ್ಪು ಸಾಬೀತಾದರೆ ಹೈಕಮಾಂಡ್ ಕಠಿಣ ಕ್ರಮಕೈಗೊಳ್ಳುತ್ತದೆ'' ಎಂದರು.












Click it and Unblock the Notifications