ಬಿಜೆಪಿ ಟಾರ್ಗೆಟ್-22ನ್ನು ಉಡೀಸ್ ಮಾಡ್ತಾರಾ ದೋಸ್ತಿ ನಾಯಕರು?
Recommended Video

ಮೈಸೂರು, ಮಾರ್ಚ್ 06: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್ಡಿಎ ಸರ್ಕಾರ ಕರ್ನಾಟಕದ ಮೇಲೆ ಕಣ್ಣಿಟ್ಟಿದ್ದು, ಹೇಗಾದರೂ ಮಾಡಿ 22 ಸ್ಥಾನಗಳನ್ನು ಗೆಲ್ಲಿಸಿಕೊಡುವಂತೆ ರಾಜ್ಯ ನಾಯಕರಿಗೆ ಟಾರ್ಗೆಟ್ ನೀಡಿದೆ. ಹೀಗಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕುಂತಲ್ಲಿ, ನಿಂತಲ್ಲಿ 22 ಸೀಟು ಗೆದ್ದೇ ಗೆಲ್ಲುತ್ತೇವೆ ಎಂದು ಬಡಾಬಡಿಸುತ್ತಿದ್ದಾರೆ.
ಕರ್ನಾಟಕದಿಂದ ಬಿಜೆಪಿ ನಾಯಕರೇ ಹೇಳಿಕೊಳ್ಳುವಂತೆ 22 ಸೀಟುಗಳನ್ನು ಗೆಲ್ಲುತ್ತಾರೋ ಬಿಡುತ್ತಾರೋ ಆ ವಿಚಾರ ಆಚೆಗಿರಲಿ. ಆದರೆ ಗೆಲುವಿಗಾಗಿ ಈಗಿನಿಂದಲೇ ಹೋರಾಟವನ್ನಂತು ಮಾಡುತ್ತಿದ್ದಾರೆ ಎಂಬುದಂತು ಸತ್ಯ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ನಾಯಕರು ಇನ್ನೂ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಒಮ್ಮತಕ್ಕೆ ಬಂದಂತೆ ಕಾಣುತ್ತಿಲ್ಲ. ಜತೆಗೆ ಸೀಟು ಹಂಚಿಕೆಯಾಗುವ ಮುನ್ನವೇ ಮಂಡ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್(ಸುಮಲತಾಅಂಬರೀಶ್ ಬೆಂಬಲಿತ ಕಾಂಗ್ರೆಸ್) ನಡುವೆ ಜಟಾಪಟಿ ಆರಂಭವಾಗಿದೆ.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಚೆಲುವರಾಯ ಸ್ವಾಮಿ ಸೇರಿದಂತೆ ಹಲವು ನಾಯಕರು ಮತ್ತೆ ಜೆಡಿಎಸ್ ಅಭ್ಯರ್ಥಿ, ಕುಮಾರಸ್ವಾಮಿ ಅವರ ಪುತ್ರನೂ ಆಗಿರುವ ನಿಖಿಲ್ ಕುಮಾರಸ್ವಾಮಿಗೆ ಬೆಂಬಲ ನೀಡೋದಕ್ಕೆ ಸುತರಾಂ ಒಪ್ಪುತ್ತಿಲ್ಲ. ಹೀಗಾಗಿ ಒಳಂಗಿದೊಳಗೆ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಿದರೆ ಅಚ್ಚರಿ ಪಡಬೇಕಾಗಿಲ್ಲ.
ಇನ್ನೊಂದೆಡೆ ಎಚ್.ಡಿ.ದೇವೇಗೌಡರು ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟು ಮೈಸೂರಿನತ್ತ ಮುಖ ಮಾಡಿದ್ದಾರೆ. ಈ ಬೆಳವಣಿಗೆ ನಿಜವಾಗಿ ದೇವೇಗೌಡರು ಮೈಸೂರಿನಲ್ಲಿ ಸ್ಪರ್ಧಿಸುವ ನಿರ್ಧಾರ ಮಾಡಿದರೆ ಕೇಂದ್ರ ಮತ್ತು ರಾಜ್ಯದ ಹಿರಿಯ ನಾಯಕರು ಒಂದೇ ಒಂದು ಮಾತನಾಡದೆ ಕ್ಷೇತ್ರವನ್ನು ಬಿಟ್ಟುಕೊಡಲೇ ಬೇಕಾಗುತ್ತದೆ.
ಆಗ ಮೈಸೂರು ಕ್ಷೇತ್ರದಿಂದ ಟಿಕೆಟ್ ಕೊಡಿ ಎಂದು ಆಕಾಂಕ್ಷಿಗಳಾಗಿರುವ ಕಾಂಗ್ರೆಸ್ ನಾಯಕರ ಗತಿಯೇನು? ಮೈಸೂರು ಲೋಕ ಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು ತನಗೆ ಸ್ಪರ್ಧಿಸಲು ಕಾಂಗ್ರೆಸ್ನಿಂದ ಅವಕಾಶ ನೀಡಿಯೇ ನೀಡುತ್ತಾರೆ ಎಂಬ ನಂಬಿಕೆಯಿಂದಲೇ ಬಿಜೆಪಿ ಪಕ್ಷವನ್ನು ತೊರೆದು ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದ ಮುಖಂಡ ವಿಜಯಶಂಕರ್ ಗತಿಯೇನು? ಮುಂದೆ ಓದಿ...

ಮೇಲ್ನೋಟಕ್ಕೆ ಗೊತ್ತಾಗುತ್ತಿರುವುದೇನು?
ಒಂದು ವೇಳೆ ಮೈಸೂರು ಕ್ಷೇತ್ರದಿಂದ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ದೇವೇಗೌಡರು ಕಣಕ್ಕಿಳಿದರೆ ಈಗಾಗಲೇ ಆಕಾಂಕ್ಷಿಗಳಾಗಿರುವ ಕಾಂಗ್ರೆಸ್ ಮುಖಂಡರು ನಿಜವಾಗಿಯೂ ದೇವೇಗೌಡರ ಪರ ನಿಲ್ಲುತ್ತಾರಾ? ಅಥವಾ ತಟಸ್ಥರಾಗುತ್ತಾರಾ? ಹೀಗೆ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ಳತೊಡಗಿವೆ. ಸೀಟು ಹಂಚಿಕೆಯ ಗೊಂದಲ ಪರಿಹರಿಸಿಕೊಳ್ಳಲಾಗದೆ ದೋಸ್ತಿ ನಾಯಕರು ಒದ್ದಾಡುತ್ತಿದ್ದಾರೆ. ಈ ಹಿಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಒಮ್ಮತಕ್ಕೆ ಬಾರದೆ ಅವರವರ ದಾರಿ ಹಿಡಿದು ಹೋಗಿದ್ದನ್ನು ನಾವು ನೋಡಿದ್ದೇವೆ. ಇದೀಗ ಮತ್ತೊಮ್ಮೆ ಸಭೆ ಕರೆದು ಸೀಟು ಹಂಚಿಕೆ ಕುರಿತಂತೆ ನಿರ್ಧಾರಕ್ಕೆ ಬರುವ ಹೇಳಿಕೆಗಳನ್ನು ನೀಡುತ್ತಿದ್ದಾರೆಯಾದರೂ ಈ ಸಭೆಯಲ್ಲಿಯೂ ಒಮ್ಮತ ಮೂಡಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಕಾಂಗ್ರೆಸ್ ಮುಖಂಡರು ಸಹಾಯ ಮಾಡ್ತಾರಾ?
ಜೆಡಿಎಸ್ 12 ಸ್ಥಾನಗಳನ್ನು ಬಿಟ್ಟುಕೊಡುವಂತೆ ಹಠಕ್ಕೆ ಬಿದ್ದಿದೆ. ಕಳೆದ ಬಾರಿ ಎರಡು ಸ್ಥಾನಗಳಲ್ಲಷ್ಟೆ ಗೆಲುವು ಪಡೆದ ಜೆಡಿಎಸ್ ಗೆ ಈ ಬಾರಿ 12 ಸ್ಥಾನಗಳನ್ನು ಬಿಟ್ಟುಕೊಟ್ಟರೆ ನಮ್ಮ ಕಥೆ ಮುಗಿದಂತೆಯೇ ಎಂಬುದು ಕಾಂಗ್ರೆಸ್ ನಾಯಕರಿಗೂ ಮನವರಿಕೆಯಾಗಿದೆ. ಜೆಡಿಎಸ್ ನಾಯಕರು ಕೂಡ ತಮಗೆ ಎಲ್ಲಿ ರಾಜಕೀಯವಾಗಿ ಅನುಕೂಲವಾಗುತ್ತದೆಯೋ ಅಂತಹ ಕ್ಷೇತ್ರಗಳನ್ನೇ ಬೇಡಿಕೆಯ ಪಟ್ಟಿಯಲ್ಲಿಟ್ಟಿರುವುದರಿಂದ ಅದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಹೊಡೆಯುವ ದೇವೇಗೌಡರ ತಂತ್ರ ಎಂಬುದು ಎಂತಹ ದಡ್ಡರಿಗೂ ಅರ್ಥವಾಗಿ ಬಿಡುತ್ತದೆ. ಒಂದು ವೇಳೆ ಸಮನ್ವಯ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಜೆಡಿಎಸ್ ನ ಬೇಡಿಕೆಯನ್ನು ಈಡೇರಿಸಲು ಹಿಂದೇಟು ಹಾಕಿದರೆ ಅದು ನೇರವಾಗಿ ಕಾಂಗ್ರೆಸ್ನ ಹೈಕಮಾಂಡ್ ಅಂಗಳಕ್ಕೆ ಹೋಗಲಿದೆ. ಅಲ್ಲಿ ರಾಜ್ಯ ನಾಯಕರ ಮಾತಿಗಿಂತ ದೇವೇಗೌಡರ ಮಾತಿಗೆ ಹೆಚ್ಚಿನ ಕಿಮ್ಮತ್ತು ಇರುವುದರಿಂದಾಗಿ ಅನಿವಾರ್ಯವಾಗಿ 12 ಸ್ಥಾನಗಳನ್ನು ಬಿಟ್ಟುಕೊಡಬೇಕಾಗಬಹುದು. ಆಗ ಜೆಡಿಎಸ್ ವರಿಷ್ಠರ ಮಾತು ನಡೆದು ಕಾಂಗ್ರೆಸ್ 12 ಸ್ಥಾನಗಳನ್ನು ಬಿಟ್ಟು ಕೊಟ್ಟರೆ ಅಲ್ಲಿ ಗೆದ್ದು ಬರಲು ಜೆಡಿಎಸ್ ಗೆ ಕಾಂಗ್ರೆಸ್ ಮುಖಂಡರು ಸಹಾಯ ಮಾಡುತ್ತಾರಾ? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

ಮೋದಿ, ಅಮಿತ್ ಶಾ ಕಣ್ಣು ಕರ್ನಾಟಕದತ್ತ...
ಮೈತ್ರಿ ಪಕ್ಷಗಳ ನಡುವೆ ಕ್ಷೇತ್ರ ಹಂಚಿಕೆಗೆ ಒಮ್ಮತ ಮೂಡದಿರುವಾಗ ಮುಂದೆ ಕ್ಷೇತ್ರ ಹಂಚಿಕೆಯಾಗಿ ಅಭ್ಯರ್ಥಿ ಆಯ್ಕೆಯೂ ಇನ್ನಷ್ಟು ಜಟಿಲವಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಅಧಿಕಾರ ಹಿಡಿಯಲು ಸುಲಭವಾಗಿ ಎರಡು ಪಕ್ಷಗಳ ನಾಯಕರು ಒಂದಾಗಿ ಬಿಟ್ಟಿರಬಹುದು. ಆದರೆ ಎರಡು ಪಕ್ಷಗಳ ನಾಯಕರು ಒಟ್ಟಾಗಿ ಚುನಾವಣೆಯನ್ನು ಎದುರಿಸೋದು ಅಷ್ಟು ಸುಲಭವಲ್ಲ. ಏಕೆಂದರೆ ಎತ್ತು ನೀರಿಗಿಳಿದರೆ ಕೋಣ ಏರಿಗೆಳೆಯಿತು ಎಂಬಂತಹ ಸ್ಥಿತಿ ಇಲ್ಲಿ ಕಂಡು ಬರುತ್ತಿದೆ. ಆದರೆ ಕಾಂಗ್ರೆಸ್ ಮತ್ತು ಜಡಿಎಸ್ ನಾಯಕರು ಒಮ್ಮತಕ್ಕೆ ಬರುವ ಹೊತ್ತಿಗೆ ಅದಾಗಲೇ ಬಿಜೆಪಿ ಹಲವು ಚುನಾವಣಾ ಸಮಾವೇಶಗಳನ್ನು ಮುಗಿಸಿ ಬಿಟ್ಟಿರುತ್ತದೆ. ಈಗಾಗಲೇ ಮೋದಿ ಸೇರಿದಂತೆ ಅಮಿತ್ ಶಾ ಕರ್ನಾಟಕದತ್ತ ಕಣ್ಣಿಟ್ಟಿದ್ದಾರೆ. ಇಲ್ಲಿನ ಘಟಾನುಘಟಿ ಕಾಂಗ್ರೆಸ್ ನಾಯಕರನ್ನು ಹೇಗೆ ಸೋಲಿಸಬಹುದು? ಮತ್ತು ಏನೆಲ್ಲ ತಂತ್ರ ಮಾಡಿದರೆ ಸೋಲಿಸಲು ಸಾಧ್ಯ ಎಂಬ ಲೆಕ್ಕಾಚಾರವನ್ನು ಮಾಡುತ್ತಲೇ ಇದ್ದಾರೆ.

ಈಗಿನಿಂದಲೇ ಮಾಡಬೇಕಾದ ತಂತ್ರ
ಒಂದೆರಡು ಬಾರಿ ರಾಜ್ಯಕ್ಕೆ ಬಂದು ಹೋಗಿರುವ ಮೋದಿ ಮತ್ತೆ ಇವತ್ತು(ಮಾ.6) ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಈ ಬಾರಿಯ ಮೋದಿ ಭೇಟಿ ಬಹಳ ವಿಶೇಷತೆಯನ್ನು ಪಡೆದಿದೆ ಕಾರಣ ಅವರು ಭೇಟಿ ನೀಡುತ್ತಿರುವುದು ಲೋಕಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರ ಕಲಬುರ್ಗಿಗೆ. ಅಷ್ಟೇ ಅಲ್ಲ ಖರ್ಗೆ ವಿರುದ್ಧವೇ ಅವರದ್ದೇ ಪಕ್ಷದ ಪ್ರಬಲ ನಾಯಕನನ್ನು ತನ್ನ ಸಮ್ಮುಖದಲ್ಲೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರನ್ನೇ ಕಣಕ್ಕಿಳಿಸುವ ರಣತಂತ್ರವನ್ನೂ ಮಾಡಿದ್ದಾರೆ. ಕಾಂಗ್ರೆಸ್ನಲ್ಲಿ ಯಾರೆಲ್ಲ ಪ್ರಬಲ ನಾಯಕರಿದ್ದಾರೋ ಅವರನ್ನೆಲ್ಲ ರಾಜಕೀಯವಾಗಿ ಮಣಿಸಲೇಬೇಕಾದ ತಂತ್ರವನ್ನು ಈಗಿನಿಂದಲೇ ಮಾಡಲಾರಂಭಿಸಿದೆ. ಆದರೆ ಅದ್ಯಾಕೋ ಗೊತ್ತಿಲ್ಲ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮಾತ್ರ ನಾಕೊಡೆ, ನಾಬಿಡೆ ಎಂಬ ಹಗ್ಗಜಗ್ಗಾಟದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಮುಂದೇನು ಕಾದು ನೋಡೋಣ..












Click it and Unblock the Notifications