ಬಿಟ್ ಕಾಯಿನ್; ಪ್ರತಾಪ್ ಸಿಂಹ ಬಾಯಲ್ಲಿ ಇದೆಂಥ ಮಾತು?
ಮೈಸೂರು, ನವೆಂಬರ್ 14; " ಸಿದ್ದರಾಮಯ್ಯ ಏನಾದರೂ ಆಧಾರ ಇಟ್ಟುಕೊಂಡು ಮಾತನಾಡಿದರೆ ನಾವು ಬೆಲೆ ಕೊಡುತ್ತೇವೆ. ಯಾವುದೇ ಆಧಾರವಿಲ್ಲದೇ ಆರೋಪ ಮಾಡುತ್ತಿರುವ ಕಾಂಗ್ರೆಸ್ ಮುಖಂಡರಿಗೆ ಕನಿಷ್ಠ ನೈತಿಕತೆಯೂ ಇಲ್ಲ" ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಭಾನುವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ನಾನು ಪತ್ರಿಕೋದ್ಯಮದಿಂದ ಬಂದವನು. ನನ್ನನ್ನು ಪೇಪರ್ ಟೈಗರ್ ಎಂದರೆ ಬೇಜಾರಿಲ್ಲ. ಆದರೆ ಪ್ರಿಯಾಕ ಖರ್ಗೆ ರಾಜೀವ್ ಗಾಂಧಿ ಹೆಣ್ಣು ಮಗಳ ಹೆಸರಿಟ್ಟುಕೊಂಡಿದ್ದಾರೆ. ಅವರ ಹೆಸರಿನಲ್ಲೇ ಸ್ವಂತಿಕೆ ಇಲ್ಲ" ಎಂದು ಟೀಕಿಸಿದರು.
ಬಿಟ್ ಕಾಯಿನ್ ವಿಚಾರ; ಮೌನ ಮುರಿದ ಮುಖ್ಯಮಂತ್ರಿಗಳು!
ಶಾಸಕ ಪ್ರಿಯಾಂಕ್ ಖರ್ಗೆ ಪ್ರತಾಪ್ ಸಿಂಹರನ್ನು ಪೇಪರ್ ಟೈಗರ್ ಎಂದು ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, "ಮರಿ ಖರ್ಗೆ ಹೆಸರಿಗೂ ಸ್ವಂತಿಕೆ ಇಲ್ಲ. ರಾಜೀವ್ ಗಾಂಧಿ ತಮ್ಮ ಮಗಳಿಗೆ ಇಟ್ಟಿರುವ ಹೆಸರು ಅದು. ಆ ಹೆಸರು ಗಂಡಿನದ್ದೋ, ಹೆಣ್ಣಿನದ್ದೋ ಎಂಬುದು ಗೊತ್ತಾಗುತ್ತಿಲ್ಲ. ಅವರ ಮಾತಿಗೆ ಬೆಲೆ ಕೊಡಲ್ಲ" ಎಂದು ತಿರುಗೇಟು ಕೊಟ್ಟರು.
ಬಸವರಾಜ ಬೊಮ್ಮಾಯಿ ದೆಹಲಿ ಭೇಟಿ ಹಿಂದೆ ಬಿಟ್ ಕಾಯಿನ್ ಅಕ್ರಮದ ವಾಸನೆ !
"ಕಾಂಗ್ರೆಸ್ ಪಕ್ಷ ಏನೆಲ್ಲಾ ಅಪಪ್ರಚಾರ ಮಾಡಿದರೂ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. 2023ರ ಚುನಾವಣೆಯನ್ನು ನಾವು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸುತ್ತೇವೆ. ಈ ಮಾತನ್ನು ಕೇಂದ್ರ ಸಚಿವ ಅಮಿತ್ ಷಾ ಸಹ ಹೇಳಿದ್ದಾರೆ. ನಾವು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ" ಎಂದು ಪ್ರತಾಪ್ ಸಿಂಹ ಹೇಳಿದರು.
ಬಿಟ್ ಕಾಯಿನ್ ಹಗರಣ; ಕಾಂಗ್ರೆಸ್ ಮೇಲೆ ಮುಗಿಬಿದ್ದ ಬಿಎಸ್ವೈ ಪುತ್ರರು
"ನೀವು ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೀರಾ? ಹೇಳಿ ಕಾಂಗ್ರೆಸ್ಸಿಗರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಎದುರಿಸುತ್ತೀರೋ ಅಥವಾ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೀರೋ? ಎಂಬುದನ್ನು ಸ್ಪಷ್ಟಪಡಿಸಬೇಕು" ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.
ಗೊಂದಲ ಉಂಟಾಗಿದೆ; "ಕಳೆದೊಂದು ವಾರದಿಂದ ಬಿಟ್ ಕಾಯಿನ್ ಬಗ್ಗೆ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಇದರಿಂದ ಜನರಿಗೂ ಗೊಂದಲ ಉಂಟಾಗಿದೆ. ಈ ಬಗ್ಗೆ ಜನರು ನಮ್ಮನ್ನು ಕೇಳುತ್ತಿದ್ದಾರೆ. ಈ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ" ಎಂದು ಪ್ರತಾಪ್ ಸಿಂಹ ಆರೋಪಿಸಿದರು.
"ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ದೆಹಲಿಯಲ್ಲಿ ಕುಳಿತು ಸುದ್ದಿಗೋಷ್ಠಿ ನಡೆಸುವ ಅಗತ್ಯವೇನಿತ್ತು?. ಅವರು ಊಹಾಪೋಹಗಳನ್ನು ಹರಿಯ ಬಿಡುತ್ತಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ನಡುವಿನ ಒಳ ಜಗಳ ಬಗೆಹರಿಸಲಾಗದೇ ಕಂಗಾಲಾಗಿದ್ದಾರೆ. ಹಾಗಾಗಿ ಇಲ್ಲಿಗೆ ಬರಲಾಗದೇ ದೆಹಲಿಯಲ್ಲಿ ಕುಳಿತು ಸುದ್ದಿಗೋಷ್ಠಿ ಮಾಡಿದ್ದಾರೆ" ಎಂದು ದೂರಿದರು.
"ಟ್ವೀಟ್, ಸುದ್ದಿಗೋಷ್ಠಿ ಮೂಲಕ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಇವರ ಬಳಿ ದಾಖಲೆಗಳಿದ್ದರೆ ರಾಜ್ಯಕ್ಕೆ ಬಂದು ಬಹಿರಂಗಪಡಿಸಲಿ" ಎಂದು ಪ್ರತಾಪ್ ಸಿಂಹ ಸವಾಲು ಹಾಕಿದರು.
"ಬಿಟ್ ಕಾಯಿನ್ ಹಗರಣ ಜನರಿಗೆ ಕಾಲ್ಪನಿಕ ವಿಷಯದಂತೆ ಕಾಣಿಸುತ್ತಿದೆ. 13 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಈ ಹಗರಣದ ಬಗ್ಗೆ ಸ್ಪಲ್ವವಾದರೂ ಅರಿವು ಇರುತ್ತದೆ. ಅದನ್ನಾದರೂ ಜನರಿಗೆ ಹೇಳಿ. ಅದರ ಬದಲು ಮುಖ್ಯಮಂತ್ರಿಗಳು ಬದಲಾಗುತ್ತಾರೆ. ನಳಿನ್ ಕುಮಾರ್ ಕಟೀಲ್ ಅವರನ್ನು ಕೆಳಗಿಳಿಸುತ್ತಾರೆ ಎಂದು ಮಾಧ್ಯಮಗಳ ಮೂಲಕ ಸುಳ್ಳು ಹರಡಬೇಡಿ" ಎಂದರು.
ಶುಕ್ರವಾರವೂ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರತಾಪ್ ಸಿಂಹ; "ಸಿದ್ದರಾಮಯ್ಯ ಮಹಾನ್ ಆರ್ಥಿಕ ತಜ್ಞರಾಗಿದ್ದು, ಬಿಟ್ ಕಾಯಿನ್ ಎಂದರೇನು? ಅದರ ವ್ಯವಹಾರ ಹೇಗೆ ಆಗಲಿದೆ? ಎಂದು ಅವರೇ ನಮ್ಮಂತವರಿಗೆ ವಿವರಿಸಲಿ. ಆ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಮಗಿದೆ. ನನಗೆ ಆ ಬಗ್ಗೆ ಮಾಹಿತಿ ಇಲ್ಲ, ಹಾಗಾಗಿ ಕೇಳುತ್ತಿದ್ದೇನೆ. ಬೊಮ್ಮಾಯಿ ಅವರ ಯಶಸ್ವಿ ಆಡಳಿತ ಸಹಿಸದೆ ಹೀಗೆ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ" ಎಂದು ದೂರಿದ್ದರು.