ಬಸವಣ್ಣನವರ ಸಿದ್ಧಾಂತ ಪಾಲಿಸಿದ ಮಹಾನ್ ವ್ಯಕ್ತಿ ಶ್ರೀಗಳು: ಭಗವಾನ್
ಮೈಸೂರು, ಜನವರಿ 22:ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಪ್ರಗತಿಪರರು ಮೈಸೂರಿನಲ್ಲಿ ಸಂತಾಪ ಸೂಚಿಸಿದರು. ನಗರದ ಗನ್ ಹೌಸ್ ಬಳಿಯ ಬಸವೇಶ್ವರ ಪ್ರತಿಮೆ ಎದುರು ಸಿದ್ದಗಂಗಾ ಶ್ರೀಗಳ ಭಾವಚಿತ್ರ ಇಟ್ಟು ಪುಷ್ಪಾರ್ಚನೆ ಮಾಡಿ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಿದ್ದಗಂಗಾ ಶ್ರೀಗಳಿಗೆ ಸಂತಾಪ ಸಲ್ಲಿಸಿ ಮಾತನಾಡಿದ ಸಾಹಿತಿ ಪ್ರೊ.ಭಗವಾನ್, 12ನೇ ಶತಮಾನದ ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಪಾಲಿಸಿದ ಮಹಾನ್ ವ್ಯಕ್ತಿ ಸಿದ್ದಗಂಗಾ ಶ್ರೀಗಳು. ಶ್ರೀಗಳ 88 ವರ್ಷಗಳ ಪರಿಶ್ರಮದಿಂದ ಸಿದ್ದಗಂಗಾ ಮಠ ಪ್ರಪಂಚದಲ್ಲಿಯೇ ಪ್ರಸಿದ್ಧಿಯಾಗಿದೆ.
ಸಿದ್ದಗಂಗಾ ಶ್ರೀಗಳ ನಿಧನ ಯುಗಾಂತ್ಯವಾದಂತಾಗಿದೆ. ಆದರೆ ಅವರು ಜೀವಿಸಿದ್ದ ಈ ಶತಮಾನ ಮುಂದಿನ ಶತಮಾನಕ್ಕೆ ನಾಂದಿಯಾಗಿದೆ ಎಂದು ನುಡಿದರು.

ಮೈಸೂರಿನಲ್ಲಿ ಅರ್ಧಕ್ಕೆ ಇಳಿದ ರಾಷ್ಟ್ರಧ್ವಜ
ನಡೆದಾಡುವ ದೇವರು ಶಿವಕುಮಾರ ಸ್ವಾಮಿಗಳ ನಿಧನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆಯಾಗಿದೆ. ಶೋಕಾಚರಣೆ ಹಿನ್ನೆಲೆಯಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿ ಸಿದ್ಧಗಂಗಾ ಶ್ರೀಗಳಿಗೆ ಗೌರವ ಸಲ್ಲಿಸಲಾಯಿತು. ನಗರದ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ರಾಷ್ಟ್ರ ಧ್ವಜ ಅರ್ಧಕ್ಕೆ ಇಳಿಸಿ ಗೌರವ ಸೂಚಿಸಲಾಯಿತು.












Click it and Unblock the Notifications