ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಿ ಅಂಬರೀಷ್ ಬೆನ್ನು ತಟ್ಟಿದ ಸಿಎಂ
ಮಂಡ್ಯ, ಅ.16: ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ಬೆಂಗಳೂರು- ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಿದ್ದು, ಕಾಂಕ್ರಿಟ್ ರಸ್ತೆಯಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ನಡುವೆ ಕಾರ್ಯಕ್ರಮದ ನಡುವೆ ವಸತಿ ಸಚಿವ ಅಂಬರೀಷ್ ಅವರ ಕಾರ್ಯವೈಖರಿಯನ್ನು ಸಿಎಂ ಶ್ಲಾಘಿಸಿದರು.
ಕೆರಗೋಡು ಗ್ರಾಮದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು. ಮಂಡ್ಯ ಸೇರಿದಂತೆ ಮಾರ್ಗದಲ್ಲಿ ಬರುವ ಪ್ರಮುಖ ನಗರ, ಪಟ್ಟಣಗಳಲ್ಲಿ ವರ್ತುಲ ರಸ್ತೆ ನಿರ್ಮಿಸಲಾಗುವುದು. ಭೂಮಿ ಕಳೆದುಕೊಂಡವರಿಗೆ ಯುಪಿಎ ಸರಕಾರ ರೂಪಿಸಿದ್ದ ಭೂ-ಸ್ವಾಧೀನ ಕಾಯ್ದೆಯಡಿ ಪರಿಹಾರ ನೀಡಲಾಗುವುದು. ಇದಕ್ಕಾಗಿ 2,200 ಕೋಟಿ ರೂ. ಮೀಸಲಿಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ 5,000 ಕೋಟಿ ರು ಅನುದಾನ ಸಿಕ್ಕಿರುವುದನ್ನು ಇಲ್ಲಿ ಸ್ಮರಿಸಬಹುದು.[ರಾಷ್ಟೀಯ ಹೆದ್ದಾರಿಯಾಗಲಿರುವ ರಾಜ್ಯದ 7 ರಸ್ತೆಗಳು]
ಉದ್ದೇಶಿತ ಕಾಂಕ್ರಿಟ್ ರಸ್ತೆ ಕಾಮಗಾರಿ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಅಂದರೆ, 2018ರವೇಳೆಗೆ ಸಂಪೂರ್ಣಗೊಳ್ಳಲಿದ್ದು, ಮಾರ್ಗದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಜೊತೆಗೆ, ವರ್ತುಲ ರಸ್ತೆ ಆಗುವುದರಿಂದ ಮಂಡ್ಯದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.[ಮೈಸೂರು-ಬೆಂಗಳೂರು: ಚತುಷ್ಪಥ ನಿರ್ಮಾಣ ಎಲ್ಲೆಲ್ಲಿ?]
ಮಂಡ್ಯ-ಕೆರಗೋಡು-ಯಡಿಯೂರು ರಸ್ತೆ : ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಂಡ್ಯ-ಕೆರಗೋಡು - ಕೌಡ್ಲೆ, ಕೊಪ್ಪ ಮೂಲಕ ತುಮಕೂರು ಜಿಲ್ಲೆ ಯಡಿಯೂರು, ಗುಬ್ಬಿ ವರೆಗೆ ರಾಜ್ಯ ಹೆದ್ದಾರಿ 84ರ ರಸ್ತೆ ಮೇಲ್ದರ್ಜೆ ಕಾಮಗಾರಿಗೂ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ಮಾಡಿದ್ದಾರೆ.

25ವರ್ಷ ಬಾಳಿಕೆ ಬರುವಂಥ ರಸ್ತೆಯಾಗಬೇಕಿದೆ
* ಲೋಕೋಪಯೋಗಿ ಇಲಾಖೆ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ವತಿಯಿಂದ ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕಿನ ಆರ್ಥಿಕ ನೆರವು
* 108 ಕಿ.ಮೀ. ಉದ್ದದ ಈ ರಸ್ತೆ ಮುಂದಿನ 25 ವರ್ಷಗಳ ವರೆಗೆ ಬಾಳಿಕೆ ಬರುವಂಬರುವಂಥ ರಸ್ತೆಯಾಗಬೇಕಿದೆ
* 59 ಕಿ.ಮೀ. ಉದ್ದದ ಈ ರಸ್ತೆಗೆ 198 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ.
* ಮುಂದಿನ 10 ವರ್ಷಗಳ ಕಾಲ ಈ ರಸ್ತೆಯ ನಿರ್ವಹಣೆಯನ್ನು ಗುತ್ತಿಗೆದಾರರೇ ನಿರ್ವಹಿಸುವರು

ಕಾಮಗಾರಿಗೂ ಅಂಬರೀಷ್ ಗೂ ಭಾವನಾತ್ಮಕ ಸಂಬಂಧ
ಕಾಮಗಾರಿಯನ್ನು 21 ತಿಂಗಳಲ್ಲಿ ಪೂರ್ಣಗೊಳಿಸಲು ತಿಳಿಸಲಾಗಿದೆ. ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಅಂಬರೀಷ್ ಅವರಿಗೆ ಭಾವನಾತ್ಮಕವಾಗಿ ಈ ರಸ್ತೆ ಸುಧಾರಣೆ ಬಹು ದೊಡ್ಡ ಕನಸಾಗಿದೆ. ಅದಕ್ಕಾಗಿ ಅವರು ಅವಿರಥ ಪ್ರಯತ್ನ ಮಾಡಿ ಎಲ್ಲಾ ವಿಘ್ನಗಳನ್ನು ನಿವಾರಣೆ ಮಾಡಿ ಕಾಮಗಾರಿ ಸುಗಮ ಆರಂಭಕ್ಕೆ ಶ್ರಮಿಸಿದ್ದಾರೆ. ಈ ರಸ್ತೆ ಸುಧಾರಣೆಗೆ ಡಾ. ಅಂಬರೀಷ್ ಅವರೇ ಕಾರಣರು ಎಂದು ಶ್ಲಾಘಿಸಿದರು.

ಡಿಸೆಂಬರ್ ಅಂತ್ಯದ ವೇಳೆಗೆ ರೈತರಿಗೆ ಪರಿಹಾರ
* ರಸ್ತೆಗೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರ ಕೊಟ್ಟಿಲ್ಲ ಎಂದು ರೈತರು ತಿಳಿಸಿದ್ದಾರೆ. ಕೌಡ್ಲೆ-ಗುಬ್ಬಿ ವರೆಗೆ 1 ನೂರು ಕೋಟಿ ರೂ.ಗಳನ್ನು ಪರಿಹಾರವಾಗಿ ಕೊಡಲಾಗಿದೆ.
* ಕೌಡ್ಲೆ ಮತ್ತು ಮಂಡ್ಯ ನಡುವೆ ಸುಮಾರು 19 ಎಕರೆಗೆ ಶೇ. 80 ರಷ್ಟು ರೈತರಿಗೆ ಸಂಪೂರ್ಣ ಪರಿಹಾರ ಕೊಡಲಾಗಿದೆ.
* ಶೇ. 20 ರಷ್ಟು ರೈತರಿಗೆ ಮಾತ್ರ ಪರಿಹಾರ ಕೊಡಬೇಕಾಗಿದ್ದು ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲಾ ಪರಿಹಾರವನ್ನು ಕೊಡಲಾಗುವುದು. ಯಾರೂ ಆತಂಕ ಪಡಿಬೇಕಾಗಿಲ್ಲ

ರಸ್ತೆ ಅಭಿವೃದ್ಧಿಗೆ ಸುಮಾರು 8 ರಿಂದ 9 ಸಾವಿರ ಕೋಟಿ ರು
ರಾಜ್ಯದಲ್ಲಿ ಸುಮಾರು 8 ರಿಂದ 9 ಸಾವಿರ ಕೋಟಿ ರೂ.ಗಳನ್ನು ರಸ್ತೆ ಸುಧಾರಣೆಗಾಗಿ ಖರ್ಚು ಮಾಡಲಾಗಿದೆ. ನೀರಾವರಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ. ಕಳೆದ ಎರಡೂವರೆ ವರ್ಷದಿಂದ ಸುಮಾರು 33 ಸಾವಿರ ಕೋಟಿ ರೂ.ಗಳನ್ನು ನೀರಾವರಿಗಾಗಿ ವಿನಿಯೋಗಿಸಲಾಗಿದೆ.ಕಾವೇರಿ ಕಣಿವೆಯಲ್ಲಿ ನಾಲೆಗಳ ಆಧುನೀಕರಣ ಆಗುತ್ತಿದೆ. ಸುಮಾರು 240 ಕೋಟಿ ರೂ.ಗಳಲ್ಲಿ ಕೈಗೊಳ್ಳಲಿರುವ ಸಿ.ಡಿ.ಎಸ್. ನಾಲೆ ಆಧುನೀಕರಣ ಕಾಮಗಾರಿ ಸಹ ಮಂಡ್ಯ ಉಸ್ತುವಾರಿ ಸಚಿವರ ಹೆಬ್ಬಯಕೆಯಾಗಿದೆ ಎಂದು ಹೇಳಿದರು.

ವಿದ್ಯುತ್ ಖರೀದಿಸಲು ಕಾರಿಡಾರ್ ಸಮಸ್ಯೆ
ಜಲಾಶಯಗಳಲ್ಲಿ ಈ ವರ್ಷ ಕಡಿಮೆ ನೀರು ಸಂಗ್ರಹವಾಗಿರುವ ಕಾರಣ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಮಾರ್ಚ್ ವೇಳೆಗೆ ಯರಮರಸ್ ಹಾಗೂ ಬಳ್ಳಾರಿಯ 3 ನೇ ಘಟಕ ಕಾರ್ಯ ಆರಂಭಿಸುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಹೇಳಿದರು
ಉತ್ತರ ಭಾರತದಿಂದ ವಿದ್ಯುತ್ ಖರೀದಿಸಲು ಕಾರಿಡಾರ್ ಸಮಸ್ಯೆ ಎದುರಾಗಿದೆ. ಸ್ಥಳೀಯವಾಗಿ 1000 ಮೆ.ವ್ಯಾ. ವಿದ್ಯುತ್ ಖರೀದಿಸಿ ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.
ರೈತರ ನೆರವಿಗೆ ಸರ್ಕಾರ ಸದಾ ಸಿದ್ಧವಿದೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾರ್ಗ ಹಿಡಿಯಬಾರದು. ಈ ಬಗ್ಗೆ ಹಲವು ಬಾರಿ ನಾನು ಮನವಿ ಮಾಡಿದ್ದೇನೆ












Click it and Unblock the Notifications